ಬೆಂಗಳೂರು: ಕಿರುತೆರೆಯಲ್ಲಿ ಕನ್ನಡದ ಕೋಟ್ಯಾಧಿಪತಿ, ಫ್ಯಾಮಿಲಿ ಪವರ್ ಕಾರ್ಯಕ್ರಮಗಳಲ್ಲಿ ನಿರೂಪಕರಾಗಿ ಕನ್ನಡಿಗರ ಮನಗೆದ್ದಿದ್ದ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್, ಚಿತ್ರರಂಗದಲ್ಲಿ 45 ವರ್ಷ ಪೂರೈಸಿರುವ ಬೆನ್ನಲ್ಲೇ ಮತ್ತೆ ಕಿರುತೆರೆಯತ್ತ ಹೆಜ್ಜೆ ಇಡುವ ಸುಳಿವು ನೀಡಿದ್ದಾರೆ.
ಪುನೀತ್, ಧಾರಾವಾಹಿಯಲ್ಲಿ ನಟಿಸುತ್ತಾರಾ ಎನ್ನುವ ಆಶ್ಚರ್ಯ ಬೇಡ. ಬದಲಾಗಿ ಉದಯ ಟಿ.ವಿಯಲ್ಲಿ ಶೀಘ್ರದಲ್ಲೇ ಬರಲಿರುವ ‘ನೇತ್ರಾವತಿ’ ಎನ್ನುವ ಧಾರಾವಾಹಿ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಇದರ ಪ್ರೋಮೊವನ್ನು ಉದಯ ಟಿ.ವಿಯು ಫೇಸ್ಬುಕ್ನಲ್ಲಿ ಅಪ್ಲೋಡ್ ಮಾಡಿದೆ. ಇದೊಂದು ಭಕ್ತಿ ಪ್ರಧಾನ ಧಾರಾವಾಹಿಯಾಗಿದ್ದು, ಧಾರಾವಾಹಿಯ ಪಾತ್ರವರ್ಗವನ್ನು ತಂಡವು ಬಹಿರಂಗಪಡಿಸಿಲ್ಲ. ಪ್ರೋಮೊದಲ್ಲೂ ಇದರ ಸುಳಿವನ್ನು ತಂಡವು ಬಿಟ್ಟುಕೊಟ್ಟಿಲ್ಲ. ಆದರೆ ನಾಯಕಿ, ಮಂಜುನಾಥ ಸ್ವಾಮಿ ಅಪ್ಪಟ ಭಕ್ತೆ ಎನ್ನುವುದು ಇದರಲ್ಲಿ ಕಂಡುಬರುತ್ತದೆ.
‘ನಮ್ಮ ಸಂಸ್ಥೆ ಪೂರ್ಣಿಮಾ ಪ್ರೊಡಕ್ಷನ್ಸ್ ವತಿಯಿಂದ ಹೊಸ ಧಾರಾವಾಹಿ ಪ್ರಾರಂಭವಾಗುತ್ತಿದೆ. ನೇತ್ರಾವತಿ ಹೆಸರಿನ ಈ ಧಾರಾವಾಹಿ, ಮಂಜುನಾಥ ಸ್ವಾಮಿಯ ಭಕ್ತಿಯ ಕಥೆ. ಶೀಘ್ರದಲ್ಲೇ ಇದು ಉದಯ ಟಿ.ವಿಯಲ್ಲಿ ಪ್ರಾರಂಭವಾಗಲಿದೆ’ ಎಂದು ಪುನೀತ್ ರಾಜ್ಕುಮಾರ್ ಉಲ್ಲೇಖಿಸಿದ್ದಾರೆ. ‘ಸಂತೋಷ್ ಗೌಡ ಅವರು ಈ ಧಾರಾವಾಹಿ ನಿರ್ದೇಶಿಸಿದ್ದು, ಇದೇ ತಿಂಗಳಲ್ಲಿ ಆರಂಭವಾಗಲಿದೆ. ಉದಯ ಟಿ.ವಿಯಲ್ಲಿ ಪೂರ್ಣಿಮಾ ಪ್ರೊಡಕ್ಷನ್ಸ್ ಅವರ ಮೊದಲ ಧಾರಾವಾಹಿ ಇದಾಗಿದೆ’ ಎಂದು ಉದಯ ಟಿ.ವಿ ಮೂಲಗಳು ತಿಳಿಸಿವೆ. ಈಗಾಗಲೇ ರಾಘವೇಂದ್ರ ರಾಜ್ಕುಮಾರ್ ಹಾಗೂ ಶಿವರಾಜ್ಕುಮಾರ್ ಅವರು ತಮ್ಮ ಪ್ರೊಡಕ್ಷನ್ಸ್ನಲ್ಲಿ ಧಾರಾವಾಹಿಗಳನ್ನು ನಿರ್ಮಾಣ ಮಾಡಿದ್ದಾರೆ.
ಧಾರಾವಾಹಿ ಪ್ರೊಮೊ ಲಿಂಕ್ಲಿಂಕ್:
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.