ADVERTISEMENT

ಮಡೆನೂರು ಮನುಗೆ ಕಾಮಿಡಿ ಕಿಲಾಡಿ ಕಿರೀಟ

​ಪ್ರಜಾವಾಣಿ ವಾರ್ತೆ
Published 25 ಜೂನ್ 2018, 10:02 IST
Last Updated 25 ಜೂನ್ 2018, 10:02 IST
   

ಬೆಂಗಳೂರು:ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಕಾಮಿಡಿ ಕಿಲಾಡಿಗಳು ಸೀಸನ್‌ 2 ರಿಯಾಲಿಟಿ ಶೋನ ವಿಜೇತರಾಗಿ ಹಾಸನದ ಮಡೆನೂರು ಮನು ಹೊರಹೊಮ್ಮಿದ್ದು, ₹ 5 ಲಕ್ಷ ಚೆಕ್‌ ಮತ್ತು ಟ್ರೋಫಿ ನೀಡಲಾಯಿತು.

ರಾಮದುರ್ಗದ ಅಪ್ಪಣ್ಣ ಮತ್ತು ಮಂಗಳೂರಿನ ಸೂರಜ್‌ ಜಂಟಿಯಾಗಿ ದ್ವಿತೀಯ ಸ್ಥಾನ ಪಡೆದರು. ಇಬ್ಬರಿಗೂ ತಲಾ ಎರಡು ಲಕ್ಷ ಬಹುಮಾನ ಮತ್ತು ಟ್ರೋಫಿ ವಿತರಿಸಲಾಯಿತು. ಮೂರನೇ ಸ್ಥಾನ ಪಡೆದ ಕುಂದಾಪುರದ ಸೂರ್ಯ ಅವರಿಗೆ ₹ 1 ಲಕ್ಷ ಬಹುಮಾನ ಮತ್ತು ಟ್ರೋಫಿ ನೀಡಲಾಯಿತು.

ವಿಜಯಪುರದಲ್ಲಿ ನಡೆದ ಫೈನಲ್ ಸ್ಪರ್ಧೆಗೆ ಸಾವಿರಾರು ಮಂದಿ ಸಾಕ್ಷಿಯಾದರು. ತೀರ್ಪುಗಾರರ ಅಂಕಗಳು ಮತ್ತು ವೀಕ್ಷಕರ ಎಸ್‌.ಎಂ.ಎಸ್ ಆಧರಿಸಿ ವಿಜೇತರನ್ನು ಆಯ್ಕೆ ಮಾಡಲಾಯಿತು.

ADVERTISEMENT

ಜುಲೈ 7ರಿಂದ ಜೀ ಕನ್ನಡ ವಾಹಿನಿಯಲ್ಲಿ ಕಾಮಿಡಿ ಕಿಲಾಡಿಗಳು ಚಾಂಪಿಯನ್‌ಶಿಪ್‌ ನಡೆಯಲಿದೆ. ಇದರಲ್ಲಿಎರಡು ಸೀಸನ್‌ನ ಸ್ಪರ್ಧಿಗಳು ಭಾಗವಹಿಸಲಿದ್ದಾರೆ. ಈ ರಿಯಾಲಿಟಿ ಶೋ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9ಗಂಟೆಗೆ‍ಪ್ರಸಾರವಾಗಲಿದೆ. ಚಂದನವನದ ಹಾಸ್ಯನಟರು ಜ್ಯೂರಿಗಳಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ಸಂತಸ ತಂದಿದೆ:

‘ದ್ವಿತೀಯ ಸ್ಥಾನ ಪಡೆಯುತ್ತೇನೆ ಎಂಬ ವಿಶ್ವಾಸವಿತ್ತು. ಮೊದಲ ಸ್ಥಾನ ಪಡೆದಿರುವುದಕ್ಕೆ ಖುಷಿಯಾಗಿದೆ. ನನ್ನ ಪ್ರತಿಭೆ ಹೊರಹೊಮ್ಮಲು ವೇದಿಕೆ ಕಲ್ಪಿಸಿದ ಜೀ ಕನ್ನಡ ವಾಹಿನಿ ಮತ್ತು ವೀಕ್ಷಕರಿಗೆ ಆಭಾರಿಯಾಗಿದ್ದೇನೆ’ ಎಂದು ಮಡೆನೂರು ಮನು ‘ಪ್ರಜಾವಾಣಿ’ಯೊಂದಿಗೆ ಸಂತಸ ಹಂಚಿಕೊಂಡರು.

‘ಸಿನಿಮಾದಲ್ಲಿ ನಟಿಸಬೇಕೆಂದು ಬೆಂಗಳೂರಿಗೆ ಬಂದೆ. ಬೇಕರಿ, ಆರ್ಕೆಸ್ಟ್ರಾಗಳಲ್ಲಿ ಕೆಲಸ ಮಾಡಿದೆ. ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋನಿಂದ ಸಾಕಷ್ಟು ಕಲಿತಿದ್ದೇನೆ. ಇದು ನನ್ನ ಭವಿಷ್ಯದ ನಟನಾಬದುಕಿಗೆ ಸಹಕಾರಿಯಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.