ADVERTISEMENT

‘ಜೊತೆ ಜೊತೆಯಲಿ’ ಮತ್ತು ‘ಗಟ್ಟಿಮೇಳ’ದ ಬೆಸುಗೆ: ವೀಕ್ಷಕರಿಗೆ ಡಬಲ್‌ ಖುಷಿ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2020, 9:03 IST
Last Updated 20 ಆಗಸ್ಟ್ 2020, 9:03 IST
ಮಹಾಸಂಗಮ
ಮಹಾಸಂಗಮ   

ಜೀ ಕನ್ನಡ ವಾಹಿನಿಯಲ್ಲಿ ಪರಸ್ಪರ ಟಿಆರ್‌ಪಿಗೆ ಪೈಪೋಟಿ ನಡೆಸುತ್ತಿರುವ ಧಾರಾವಾಹಿಗಳೆಂದರೆ ಒಂದು ‘ಜೊತೆ ಜೊತೆಯಲಿ’ ಮತ್ತು ಇನ್ನೊಂದು ‘ಗಟ್ಟಿಮೇಳ’. ಸಿನಿಮಾ ತಾರೆ ಅನಿರುದ್ಧ ಜಟ್ಕರ್‌‘ಜೊತೆ ಜೊತೆಯಲಿ’ ಧಾರಾವಾಹಿಯ ಮುಖ್ಯಭೂಮಿಕೆಯಲ್ಲಿದ್ದು, ಈ ಧಾರಾವಾಹಿಯ ಕೇಂದ್ರಬಿಂದು ಆರ್ಯವರ್ಧನ್‌‍ಪಾತ್ರದಲ್ಲಿ ಆರಂಭದಿಂದಲೂ ವೀಕ್ಷಕರ ಮೇಲೆ ಮೋಡಿ ಮಾಡಿದ್ದಾರೆ. ಇನ್ನು ‘ಗಟ್ಟಿಮೇಳ’ ಧಾರಾವಾಹಿಯ ವೇದಾಂತ್‌ ಪಾತ್ರವೂ ಅಷ್ಟೇ ಪ್ರಭಾವಿಯಾಗಿದ್ದು, ಈ ಧಾರಾವಾಹಿಯ ಕೇಂದ್ರಬಿಂದು ವೇದಾಂತ್‌ ಪಾತ್ರದಲ್ಲಿ ಮಿಂಚುತ್ತಿರುವವರು ನಟ ರಕ್ಷ್‌. ಈ ಇಬ್ಬರು ನಟರು ಈ ಧಾರಾವಾಹಿಗಳಲ್ಲಿ ದೊಡ್ಡ ಉದ್ಯಮಿಗಳು. ಈ ಯಶಸ್ವಿ ಉದ್ಯಮಿಗಳನ್ನು ಮಹಾಸಂಗಮದಲ್ಲಿಮುಖಾಮುಖಿಯಾಗುವಂತೆ ಬೆಸೆದರೆ ಹೇಗಿರುತ್ತದೆ ಎನ್ನುವ ಆಲೋಚನೆ ಬಂದಿದ್ದೇ ತಂಡ ಜೀ ಕನ್ನಡ ವಾಹಿನಿ ಹೊಸ ಪ್ರಯೋಗಕ್ಕೆ ಕೈ ಹಾಕಿಯೇ ಬಿಟ್ಟಿತು.

ಗೌರಿ ಗಣೇಶ ಹಬ್ಬದ ಪ್ರಯುಕ್ತ ಈ ಎರಡು ಧಾರಾವಾಹಿಗಳಿಗೆ ಬೆಸುಗೆ ಹಾಕಿ ‘ಮಹಾಸಂಗಮ’ ಎನ್ನುವ ಹೆಸರಿಟ್ಟಿದೆ.ಆಗಸ್ಟ್ 17ರಿಂದಲೇ ಜೀ ಕನ್ನಡದಲ್ಲಿ ‘ಜೊತೆ ಜೊತೆಯಲಿ’ ಹಾಗೂ ‘ಗಟ್ಟಿಮೇಳ’ ಧಾರಾವಾಹಿಗಳ ‘ಮಹಾಸಂಗಮ’ ಜೀ ಕನ್ನಡ ಮತ್ತು ಜೀ ಕನ್ನಡ ಎಚ್‌ಡಿಯಲ್ಲಿ ಪ್ರಸಾರವಾಗುತ್ತಿದೆ.ಆರ್ಯವರ್ಧನ್‌ ‍ಮತ್ತು ವೇದಾಂತ್ ಅವರ ಲುಕ್, ಖದರ್‌, ವ್ಯವಹಾರಿಕ ಚಾಣಾಕ್ಷತನದ ನಟನೆಯೂ ವೀಕ್ಷಕರಿಗೆ ತುಂಬಾ ಇಷ್ಟವಾಗಲಾರಂಭಿಸಿದೆ. ಆರ್ಯವರ್ಧನ್‌ ಮತ್ತು ವೇದಾಂತ್‌ ಒಟ್ಟಿಗೆ ಕಾಣಿಸಿಕೊಂಡು ವೀಕ್ಷಕರನ್ನು ಸಖತ್ತಾಗಿಯೆ ರಂಜಿಸುತ್ತಿದ್ದಾರೆ.

‘ಜೀ ಕನ್ನಡ ವೀಕ್ಷಕರ ಅಭಿರುಚಿಗೆ ಇಷ್ಟವಾಗುವ ಕಾರ್ಯಕ್ರಮಗಳನ್ನು ರೂಪಿಸುವಲ್ಲಿ ಮುಂಚೂಣಿಯಲ್ಲಿದೆ. ಇದೀಗ ನಮ್ಮ ಎರಡು ಜನಪ್ರಿಯ ಧಾರಾವಾಹಿಗಳಾದ ‘ಜೊತೆ ಜೊತೆಯಲಿ’ ಮತ್ತು ‘ಗಟ್ಟಿಮೇಳ’ದ ಪಾತ್ರಗಳನ್ನು ‘ಮಹಾಸಂಗಮ’ದಲ್ಲಿ ಒಗ್ಗೂಡಿಸಿದ್ದೇವೆ. ವೀಕ್ಷಕರಿಗೆ ಮನರಂಜನೆಯ ಮಹಾಪೂರವೇ ಸಿಗುತ್ತಿದೆ. ಈ ಎರಡೂ ಧಾರಾವಾಹಿಗಳ ವೀಕ್ಷಕರ ನಿರೀಕ್ಷೆಗೆ ಒಂದಿನಿತು ಭಂಗವಾಗದಂತೆ ಈ ಮಹಾಸಂಗಮವನ್ನು ಬೆಸೆಯಲಾಗಿದೆ. ನಮ್ಮ ವಾಹಿನಿಯ ಎಲ್ಲ ಧಾರಾವಾಹಿಗಳು, ರಿಯಾಲಿಟಿ ಶೋಗಳನ್ನು ಮೆಚ್ಚಿದ ವೀಕ್ಷಕರು ಈ ಮಹಾಸಂಗಮವನ್ನು ಪ್ರೀತಿಯಿಂದ ಕಣ್ತುಂಬಿಕೊಳ್ಳುತ್ತಿದ್ದಾರೆ’ ಎನ್ನುವುದು ಜೀಕನ್ನಡ ವಾಹಿನಿಯ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ಅವರ ಅನಿಸಿಕೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.