ಈಗಾಗಲೇ ದೊಡ್ಡ ಸದ್ದು ಮಾಡಿದ್ದ ‘ಮತ್ತೆ ಮಾಯಾಮೃಗ’ ಧಾರಾವಾಹಿಯ ಪ್ರಸಾರಕ್ಕೆ ಮುಹೂರ್ತ ಬಂದಿದೆ. ಧಾರಾವಾಹಿಯ ತಂಡ ಯೋಜಿಸಿದಂತೆ ಅ. 31ರಿಂದ ಸಿರಿ ಕನ್ನಡ ವಾಹಿನಿಯಲ್ಲಿ ‘ಮತ್ತೆ ಮಾಯಾಮೃಗ’ ಸೋಮವಾರದಿಂದ ಪ್ರತಿದಿನ ರಾತ್ರಿ 9ಕ್ಕೆ ಪ್ರಸಾರವಾಗಲಿದೆ.
ಟಿ.ಎನ್. ಸೀತಾರಾಂ, ಪಿ.ಶೇಷಾದ್ರಿ, ನಾಗೆಂದ್ರ ಶಾ ಈ ಧಾರಾವಾಹಿಯ ನಿರ್ದೇಶಕರು. ಎರಡು ದಶಕಗಳ ಹಿಂದೆ ಪ್ರಸಾರವಾಗುತ್ತಿದ್ದ ಟಿ.ಎನ್. ಸೀತಾರಾಮ್ ನಿರ್ದೇಶನದ ‘ಮಾಯಾಮೃಗ’ ಧಾರಾವಾಹಿ ಭಾರೀ ಹೆಸರು ಮಾಡಿತ್ತು. ಶೇಷಾದ್ರಿ ಹಾಗೂ ನಾಗೆಂದ್ರ ಶಾ ನಿರ್ದೇಶನ ತಂಡದಲ್ಲಿದ್ದರು. ಈಗ ಆ ಧಾರಾವಾಹಿಯ ಮುಂದುವರಿದ ಭಾಗ ‘ಮತ್ತೆ ಮಾಯಾಮೃಗ’ ಹೆಸರಿನಲ್ಲಿ ಪ್ರಸಾರವಾಗಲಿದೆ.
‘ಕಥಾ ವಿಸ್ತರಣೆಯಲ್ಲಿ ನನ್ನ ಮಗಳು ಅಶ್ವಿನಿ ಹಾಗೂ ಪ್ರಹ್ಲಾದ್ ನಮ್ಮೊಂದಿಗಿದ್ದಾರೆ. 23 ವರ್ಷಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಅಂದಿನ ತಂಡದಲ್ಲಿದ್ದ ಕೆಲವು ಕಲಾವಿದರು ನಮ್ಮೊಂದಿಗಿಲ್ಲ. ಹಲವರಿಗೆ ವಯಸ್ಸಾಗಿದೆ. ಹಳೆಯ ಕಲಾವಿದರು ಹಾಗೂ ಈಗಿನ ಹೊಸ ಕಲಾವಿದರ ಸಮಾಗಮದಲ್ಲಿ ‘ಮತ್ತೆ ಮಾಯಾಮೃಗ’ ಮೂಡಿಬರಲಿದೆ. ಬದುಕು ಬದಲಾಗಬಹುದು ಆದರೆ ಭಾವಗಳಲ್ಲ’ ಎಂದು ಸೀತಾರಾಂ ವಿವರಣೆ ನೀಡಿದರು.
ಆಗ ‘ಮಾಯಾಮೃಗ’ ಮಾಡುತ್ತಿದ್ದಾಗ ನಮಗೆ ಅಂತಹ ಪೈಪೋಟಿ ಇರಲಿಲ್ಲ. ಧಾರಾವಾಹಿಗಳ ಸಂಖ್ಯೆ ತುಂಬಾ ಕಡಿಮೆ ಇದ್ದವು. ಈಗ ಎಲ್ಲಾ ವಾಹಿನಿಗಳಿಂದ ಸುಮಾರು ಅರವತ್ತಕ್ಕೂ ಅಧಿಕ ಧಾರಾವಾಹಿಗಳು ಪ್ರತಿದಿನ ಪ್ರಸಾರವಾಗುತ್ತಿವೆ. ಇವುಗಳ ಮಧ್ಯೆ ನಾವು ಪ್ರೇಕ್ಷಕರನ್ನು ನಮ್ಮ ಧಾರಾವಾಹಿಯತ್ತ ಸೆಳೆಯುವ ದೊಡ್ಡ ಸವಾಲು ನಮ್ಮ ಮುಂದಿದೆ. ಜನ ‘ಮತ್ತೆ ಮಾಯಾಮೃಗ’ ವನ್ನು ಮೆಚ್ಚಿಕೊಳ್ಳುವ ವಿಶ್ವಾಸವೂ ಇದೆ ಎಂದರು ಪಿ.ಶೇಷಾದ್ರಿ.
ನಾಗೇಂದ್ರ ಶಾ ಸಹ ಧಾರಾವಾಹಿ ಕುರಿತು ಮಾತನಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.