ADVERTISEMENT

ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ ಹೊಸ ಧಾರಾವಾಹಿ 'ಕನ್ಯಾದಾನ'

ನವೆಂಬರ್‌ 15 ರಿಂದ ಸೋಮವಾರದಿಂದ ಶನಿವಾರ ರಾತ್ರಿ 8.30ಕ್ಕೆ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2021, 12:54 IST
Last Updated 9 ನವೆಂಬರ್ 2021, 12:54 IST
ಕನ್ಯಾದಾನ ಧಾರಾವಾಹಿ
ಕನ್ಯಾದಾನ ಧಾರಾವಾಹಿ   

ಕಳೆದ 27 ವರ್ಷಗಳಿಂದ ನಿರಂತರವಾಗಿ ಕನ್ನಡಿಗರಿಗೆ ತನ್ನ ವಿಶಿಷ್ಟ ಶೈಲಿಯ ಮನರಂಜನಾ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿರುವ ಅತ್ಯಂತ ಜನಪ್ರಿಯ ವಾಹಿನಿ ಉದಯ ಟಿವಿ. ನವೆಂಬರ್ 15ರಿಂದ ಹೊಸ ಧಾರಾವಾಹಿ 'ಕನ್ಯಾದಾನ' ಸೋಮವಾರದಿಂದ ಶನಿವಾರ ರಾತ್ರಿ 8.30ಕ್ಕೆ ಪ್ರಸಾರವಾಗಲಿದೆ.

ಈ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗೌರಿಪುರದ ಗಯ್ಯಾಳಿಗಳು, ನೇತ್ರಾವತಿ, ಸುಂದರಿ, ಕಾವ್ಯಾಂಜಲಿ, ನಯನತಾರ, ಸೇವಂತಿ, ಕಸ್ತೂರಿ ನಿವಾಸ ಧಾರಾವಾಹಿಗಳು ಈಗಾಗಲೇ ಕನ್ನಡಿಗರ ಮನ ಗೆದ್ದಿವೆ.

ಸದಾ ಹೊಸ ರೂಪದ ಕಥೆಗಳನ್ನು ಕೊಡುತ್ತಿರುವ ಉದಯ ಟಿವಿ ಹೊಸತನದ ಮೆರುಗನ್ನು ನೀಡಲು ಈಗ ಮತ್ತೊಂದು ಹೊಸ ಧಾರಾವಾಹಿಯನ್ನು ಪ್ರಸಾರ ಮಾಡುತ್ತಿದೆ.

ADVERTISEMENT

ಬೆಂಗಳೂರಿನ ಪಕ್ಕದ ಹಳ್ಳಿಯಲ್ಲಿ ವಾಸಿಸುತ್ತಿರುವ ಅಶ್ವತ್ಥ್ ಅವರಿಗೆ 5 ಜನ ಹೆಣ್ಣು ಮಕ್ಕಳು. ಅಶ್ವತ್ಥ್ ಮೌಲ್ಯಗಳಿಗೆ ಬೆಲೆ ಕೊಡುವ ಮನುಷ್ಯ. ತಾಯಿ ಇಲ್ಲದ ಮಕ್ಕಳಿಗೆ ಯಾವುದೇ ಕೊರತೆ ಇಲ್ಲದ ಹಾಗೆ ಅಕ್ಕರೆಯಿಂದ, ಸಂಸ್ಕಾರವಂತರಾಗಿ ಬೆಳೆಸಿರುತ್ತಾರೆ. ಮಕ್ಕಳಿಗೆ ಮದುವೆ ಮಾಡಿ ಅವರಿಗೆ ಹೊಸ ಜೀವನವನ್ನು ಕಟ್ಟಿಕೊಡುವ ಹಂಬಲದಲ್ಲಿದ್ದಾರೆ. ಅವರಿಚ್ಛೆಯಂತೆ ತನ್ನಿಬ್ಬರ ಮಕ್ಕಳಿಗೆ ಮದುವೆ ಮಾಡುತ್ತಾರೆ. ಆದರೆ, ಮದುವೆ ಮಾಡಿ ಕಳುಹಿಸಿದ ತಕ್ಷಣ ಒಬ್ಬ ತಂದೆಯ ಜವಾಬ್ದಾರಿ ಮುಗಿಯುವುದಿಲ್ಲ ಎಂಬುದರ ಅರಿವಿದೆ. ಮಕ್ಕಳ ಮೇಲಿನ ಜವಾಬ್ದಾರಿ ತಂದೆಗೆ ಹೇಗೆ ಕೊನೆ ಉಸಿರಿರುವವರೆಗೂ ಇರುತ್ತದೆ ಎನ್ನುವುದೇ 'ಕನ್ಯಾದಾನ'ದ ತಿರುಳು.

ಹಿರಿಯ ನಟ ಮೈಕೊ ಮಂಜು ತಂದೆಯ ಪಾತ್ರ ವಹಿಸಿದ್ದಾರೆ. 5 ಜನ ಮುದ್ದು ಹೆಣ್ಣು ಮಕ್ಕಳ ಪಾತ್ರವನ್ನು ಮಾನಸ ನಾರಾಯಣ್, ಕೀರ್ತಿ ವೆಂಕಟೇಶ್, ಯಶಸ್ವಿನಿ, ವಿದ್ಯಾ ರಾಜ್ ಹಾಗು ಪ್ರಾರ್ಥನ ಕಿರಣ್ ನಿರ್ವಹಿಸಿದ್ದಾರೆ. ಅರುಣ್ ಹರಿಹರನ್ ನಿರ್ದೇಶನದಲ್ಲಿ ಅಂಜಲಿ ವೆಂಚರ್ಸ್ ನಿರ್ಮಾಣದಲ್ಲಿ ಈ ಧಾರಾವಾಹಿ ವೀಕ್ಷಕರ ಮುಂದೆ ಬರಲಿದೆ.

ಈ ಧಾರಾವಾಹಿಯ ವಿಷಯ ಬೇರೆ ಕಥೆಗಳಿಗಿಂತ ಭಿನ್ನವಾಗಿದ್ದು, ಅಪರೂಪವಾದ ಜೋಡಿಗಳು ನಮ್ಮ ಧಾರಾವಾಹಿಯಲ್ಲಿದ್ದು,ಒಂದು ಜೋಡಿ ಅಪ್ಪ ಹಾಗು ಅವರ 5ಜನ ಹೆಣ್ಣುಮಕ್ಕಳಾದರೆ ಮತ್ತೊಂದು ಜೋಡಿ ಕಥೆ ಮತ್ತು ಚಿತ್ರಕಥೆ. ಈ ಕಥೆ ಕನ್ನಡ ವೀಕ್ಷಕರಿಗೆ ತುಂಬಾ ಇಷ್ಟವಾಗಲಿದೆ' ಎನ್ನುತ್ತಾರೆ ಧಾರಾವಾಹಿಯ ನಿರ್ದೇಶಕ ಅರುಣ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.