ADVERTISEMENT

ಪರಿಸರದ ಪಂಪಯ್ಯ

ಅರುಣ್ ಜೋಳದ ಕೂಡ್ಲಿಗಿ
Published 1 ಜುಲೈ 2019, 19:30 IST
Last Updated 1 ಜುಲೈ 2019, 19:30 IST
ಪರಿಸರ ಪಂಪಯ್ಯ
ಪರಿಸರ ಪಂಪಯ್ಯ   

ಅದು 2002-03ರ ಸಮಯ. ನಾನು ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲ್ಲೂಕಿನ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಎಂ.ಎ., ಪಿ.ಎಚ್‌ಡಿಗೆ ಸೇರುವ ಹೊತ್ತು. ಮೆಕಾನಿಕಲ್ ಡಿಪ್ಲೊಮಾ ಓದಿದ್ದ ಪಂಪಯ್ಯ ಅವರು ಆ ವರ್ಷದ ಆಸುಪಾಸಿನಲ್ಲೇ, ಕನ್ನಡ ವಿವಿಯ ವಿದ್ಯಾರಣ್ಯದಲ್ಲಿ ಬುಕ್ಸ್ ಅಂಡ್ ಜನರಲ್ ಸ್ಟೋರ್ಸ್ ತೆರೆದು ವ್ಯಾಪಾರಿಯಾಗಿ ಕ್ಯಾಂಪಸ್ ಪ್ರವೇಶಿಸಿದರು. ನಾವು ಅವರ ಅಂಗಡಿಯ ನಿತ್ಯದ ಒಡನಾಡಿಗಳಾದೆವು. ಅವರೊಂದಿಗಿನ ಮಾತುಕತೆ ನಮ್ಮನ್ನು ಆಪ್ತರನ್ನಾಗಿಸಿತು. ಹಕ್ಕಿ, ಹಾವು, ಕ್ರಿಮಿ, ಕೀಟ, ಕರಡಿಗಳ ಬಗ್ಗೆ ನಮಗೆ ತಿಳಿಯದ ಸಂಗತಿಗಳನ್ನು ಅಚ್ಚರಿಪಡುವಂತೆ ಕಥನ ಮಾಡಿ ವಿವರಿಸುತ್ತಿದ್ದರು. ಕನ್ನಡ ಸಾಹಿತ್ಯ ಜಾನಪದ ಅಂತೆಲ್ಲಾ ಪಾಠ ಮಾಡುವ ಅಧ್ಯಾಪಕರ ಜತೆ ಪಂಪಯ್ಯ ಅವರೂ ಆಗ ಪರಿಸರದ ಅಧ್ಯಾಪಕರಂತೆ ಕಂಡದ್ದು ವಿಶೇಷವೇನಲ್ಲ. ಹಾಗಾಗಿಯೇ ಪ್ರೊ.ರಹಮತ್ ತರೀಕೆರೆ ಅವರು ಪಂಪಯ್ಯರನ್ನು ‘ತೇಜಸ್ವಿ ಜೊತೆಗಿನ ಮಂದಣ್ಣ’ನಿದ್ದಂತೆ ಎನ್ನುತ್ತಾರೆ.

ವಿದ್ಯಾರಣ್ಯ ಕ್ಯಾಂಪಸ್ಸಿನ ಮತ್ತು ಕಮಲಾಪುರದ ಅವರ ಜನರಲ್ ಸ್ಟೋರ್‌ಗಳಿಗೆ ಗುಡ್ ಬೈ ಹೇಳಿದ ನಂತರ ವ್ಯಾಪಾರಿ ಪಂಪಯ್ಯ ಅವರು ಪೂರ್ಣ ಪ್ರಮಾಣದಲ್ಲಿ ‘ಪರಿಸರದ ಪಂಪಯ್ಯ’ರಾಗಿ ಬದಲಾದರು. ಹವ್ಯಾಸಿ ವನ್ಯಜೀವಿ ಛಾಯಾಗ್ರಾಹಕರಾದ ಇವರು ಹಂಪಿ ಪರಿಸರದ ಪಕ್ಷಿ ಪ್ರಾಣಿಗಳನ್ನು ಒಳಗೊಂಡ ವನ್ಯಜೀವಿಗಳನ್ನು ತನ್ನ ಕ್ಯಾಮೆರಾದಲ್ಲಿ ಸೆರೆಹಿಡಿದು ಈ ಭಾಗದ ಜೀವವೈವಿಧ್ಯಗಳನ್ನು ಲೋಕದೆದುರು ತೆರೆದಿಟ್ಟರು.

ಈತನಕ ಸಾವಿರಕ್ಕೂ ಹೆಚ್ಚು ಹಾವುಗಳನ್ನು ಹಿಡಿದು ಕಾಡಿಗೆ ಬಿಟ್ಟಿದ್ದಾರೆ ಪಂಪಯ್ಯ. ಅಂತೆಯೇ ಹಾವುಗಳ ಬಗೆಗೆ ಜನರಿಗೆ ಅರಿವು ಮೂಡಿಸಿದ್ದಾರೆ. ಪರಿಣಾಮವಾಗಿ, ಹಾವು ಕಂಡರೆ ಹೊಡೆಯಲು ಕೋಲು ಹುಡುಕುತ್ತಿದ್ದವರು ಈಗ ಪಂಪಯ್ಯರ ಮೊಬೈಲ್‌ ನಂಬರಿಗೆ ಕರೆ ಮಾಡಿ ಹಾವು ಹಿಡಿಯಲು ಕರೆಯುತ್ತಾರೆ.

ADVERTISEMENT

ಹಂಪಿಗೆ ಬರುವ ವನ್ಯಜೀವಿ ಪ್ರೇಮಿಗಳಿಗೆ, ಫೋಟೊಗ್ರಾಫರ್‌ಗಳಿಗೆ ಈ ಭಾಗದಲ್ಲಿ ಸರಿಯಾದ ಮಾರ್ಗದರ್ಶನದ ಕೊರತೆಯಿತ್ತು. ಕಾರಣ ಹಂಪಿಯ ಗೈಡ್‍ಗಳೆಲ್ಲಾ ಸ್ಮಾರಕಗಳಿಗೆ ಸೀಮಿತರಾದವರು. ಆ ಕೊರತೆಯನ್ನು ಪಂಪಯ್ಯ ತುಂಬಿದರು. ಮೂರ್ನಾಲ್ಕು ಭಾಷೆಗಳನ್ನು ಸುಲಲಿತವಾಗಿ ಮಾತನಾಡುವ ಪಂಪಯ್ಯ ಅವರು ಇದೀಗ ಯಾರೇ ವನ್ಯಜೀವಿ ಛಾಯಾಗ್ರಾಹಕರು ಬಂದರೂ ಅವರಿಗೆ ಇವರೇ ಮಾರ್ಗದರ್ಶಿ.

ಬರಡು ನೆಲಕ್ಕೆ ಹಸಿರು ಹೊದಿಸಿದ ಪಂಪಯ್ಯ. ಚಿತ್ರ: ಶಿವಶಂಕರ ಬಣಗಾರ

ಮೊದಲೇ ಹೇಳಿದಂತೆ, ಪಂಪಯ್ಯ ಅತ್ಯುತ್ತಮ ವನ್ಯಜೀವಿ ಛಾಯಾಗ್ರಾಹಕ. ‘ಹಾರ್ನ್‍ಬಿಲ್‌’ನಂತಹ ಅಂತರರಾಷ್ಟ್ರೀಯ ವನ್ಯಜೀವಿ ಪತ್ರಿಕೆ ಮುಖಪುಟದಲ್ಲಿ ಪಂಪಯ್ಯ ಕ್ಲಿಕ್ಕಿಸಿದ ಬೆನ್ನ ಮೇಲೆ ಮರಿಗಳ ಹೊತ್ತ ಕರಡಿಯ ಫೋಟೊ ಪ್ರಕಟವಾಗಿತ್ತು. ದರೋಜಿಯ ಕರಡಿಧಾಮವನ್ನು ಒಳಗೊಂಡ ಅರಣ್ಯ ಇಲಾಖೆಯ ವರದಿ ಹಾಗೂ ಅನೇಕ ಸರ್ಕಾರಿ ದಾಖಲೆಗಳ ಮುಖಪುಟವನ್ನೂ, ಕನ್ನಡ ವಿಶ್ವವಿದ್ಯಾಲಯದ ವಾರ್ಷಿಕ ಕ್ಯಾಲೆಂಡರ್‌ಗಳೂ ಪಂಪಯ್ಯ ಅವರ ಫೋಟೊಗಳು ಆವರಿಸಿವೆ. ಹಂಪಿ ಉತ್ಸವಗಳಲ್ಲಿ ಛಾಯಾಚಿತ್ರ ಪ್ರದರ್ಶನ ಮಾಡಿ ಜನಸಾಮಾನ್ಯರ ಮೆಚ್ಚುಗೆಯನ್ನೂ ಪಡೆದಿದ್ದಾರೆ. ಹೀಗೆ ವನ್ಯಜೀವಿ ಫೋಟೊಗ್ರಫಿಗೆ ಹತ್ತಾರು ಪ್ರಶಸ್ತಿಗಳು ಅರಸಿ ಬಂದಿವೆ.

ವ್ಯಕ್ತಿಯಾಗಿ ಪಂಪಯ್ಯ ವನ್ಯಜೀವಿ, ಪರಿಸರ ಅಂತೆಲ್ಲಾ ಹತ್ತಾರು ಸೂಕ್ಷ್ಮಗಳನ್ನು ಅರಿತಿರುವ ಇವರು ಶಾಲಾ ಮಕ್ಕಳಿಗೆ ಪರಿಸರ ಪಾಠ ಮಾಡುತ್ತಾರೆ. ಹಲವು ಕಾರ್ಯಕ್ರಮಗಳ ಮೂಲಕ ಜನಸಾಮಾನ್ಯರಿಗೂ ವನ್ಯಜೀವಿ, ಪರಿಸರ ಕುರಿತು ಅರಿವು ಮೂಡಿಸುತ್ತಿದ್ದಾರೆ.

ಪಂಪಯ್ಯ ಅವರು ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷರಾಗಿದ್ದಾಗ, ಕಮಲಾಪುರ ಪಟ್ಟಣ ಪಂಚಾಯ್ತಿಯ ಸದಸ್ಯ ಮತ್ತು ಅಧ್ಯಕ್ಷರಾಗಿದ್ದಾಗಲೂ, ಆ ಸರ್ಕಾರಿ ಸಂಸ್ಥೆಗಳನ್ನು ಪರಿಸರ ಪ್ರಜ್ಞೆ ಮೂಡಿಸಲು ಬಳಸಿಕೊಂಡರು.

ಇದೀಗ ತನ್ನ ಪರಿಸರದ ಅರಿವು ಮತ್ತು ಕಾಳಜಿಯನ್ನು ವಿಸ್ತರಿಸುವ ಪ್ರಾಯೋಗಿಕ ಹಂತಕ್ಕೆ ಪಂಪಯ್ಯ ಬಂದಿದ್ದಾರೆ. ಐದು ವರ್ಷದ ಹಿಂದೆ ಬರಡಾಗಿದ್ದ ನೆಲವೊಂದನ್ನು ಹಸಿರಾಗಿಸಿ ಗಮನ ಸೆಳೆದಿದ್ದಾರೆ. ಹೊಸಪೇಟೆ ತಾಲೂಕಿನ ಕಮಲಾಪುರ
ದಿಂದ ನಾಲ್ಕು ಕಿಲೋಮೀಟರ್ ಅಂತರದ ತುಂಗಭದ್ರಾ ಜಲಾಶಯದ (ಎಚ್.ಎಲ್.ಸಿ) ಮೇಲ್ಮಟ್ಟದ ಕಾಲುವೆಯ ಬಳಿ ತುಂಗಭದ್ರ ಮಂಡಳಿಗೆ ಸೇರಿದ ಮೂರುವರೆ ಎಕರೆ ಪ್ರದೇಶದಲ್ಲಿ 60 ಬಗೆಯ 800 ಕ್ಕೂ ಹೆಚ್ಚು ಗಿಡಗಳನ್ನು ಬೆಳೆಸಿದ್ದಾರೆ. ಅರಣ್ಯ ಇಲಾಖೆಯಿಂದ ಗಿಡಗಳನ್ನು ಪಡೆದದ್ದು ಬಿಟ್ಟರೆ, ನೀರು ಗೊಬ್ಬರ ಪಾಲನೆ ಎಲ್ಲ ಸ್ವಂತ ಖರ್ಚಿನಲ್ಲಿ ನಿರ್ವಹಿಸಿದ್ದಾರೆ.

ಇದಕ್ಕೆ ಹೊಂದಿಕೊಂಡಂತೆ ಪಂಪಯ್ಯ ಅವರ ಸ್ವಂತದ ಒಂದೆಕರೆ ಹೊಲವೂ ಕಾಡಿನಂತಿದೆ. ಬೇಸಿಗೆಯಲ್ಲಿ ಪ್ರಾಣಿ–ಪಕ್ಷಿಗಳ ನೀರಿನ ದಾಹ ತಣಿಸಲು ಕೃಷಿ ಹೊಂಡ ಮಾಡಿಸಿದ್ದಾರೆ. ಫೋಟೊಗ್ರಫಿಗಾಗಿ ಬಂಕರ್ (ಹೈಡ್ ಔಟ್) ನಿರ್ಮಿಸಿದ್ದಾರೆ. ಇದೀಗ ಹತ್ತಾರು ವಿಧದ ಪಕ್ಷಿ ಪ್ರಾಣಿ ವನ್ಯಜೀವಿಗಳು ಈ ಪುಟ್ಟ ಅರಣ್ಯದ ಸಂಗಾತಿಗಳಾಗಿವೆ. ಹೀಗೆ ಕಮಲಾಪುರದ ಮಳೀಮಠದ ಪಂಪಯ್ಯ ನಿಧಾನವಾಗಿ ‘ಪರಿಸರದ ಪಂಪಯ್ಯ’ರಾಗಿ ರೂಪಾಂತರಗೊಂಡ ಪಯಣವೇ ಕುತೂಹಲಕಾರಿಯಾಗಿದೆ.

‘1994 ರಲ್ಲಿ ದರೋಜಿ ಕರಡಿದಾಮ ಆದಾಗ ಅದರ ಓಡಾಟದಲ್ಲಿ ಸಿಕ್ಕ ಫೋಟೊಗ್ರಾಫರ್ಸ್, ವನ್ಯಜೀವಿ ತಜ್ಞರ ಜತೆಗಿನ ಒಡನಾಟವೇ ನನ್ನನ್ನು ಪರಿಸರಕ್ಕೆ ಹತ್ತಿರ ತಂದಿತು. ಅಲ್ಲಿಂದ ನನ್ನ ಆಸಕ್ತಿ ವನ್ಯಜೀವಿ ಪರಿಸರ ಫೋಟೊಗ್ರಫಿ ಅಂತೆಲ್ಲಾ ಹೆಚ್ಚಾಯಿತು. ಇದೀಗ ಪುಟ್ಟ ಕಾಡು ಬೆಳೆಸುವ ಮಟ್ಟಕ್ಕೆ ಬಂದಿದೆ. ಪರಿಸರದ ಬಗೆಗೆ ಸಮುದಾಯಗಳಿಗೆ, ಈಗ ಬೆಳೆಯುವ ಮಕ್ಕಳಿಗೆ ಹೆಚ್ಚಿನ ತಿಳಿವಳಿಕೆ ಕೊಡಬೇಕು ಎನ್ನುವುದು ನನ್ನ ಕನಸು’ ಎಂದು ಪಂಪಯ್ಯ ಹೇಳುತ್ತಾರೆ.

ಪಂಪಯ್ಯ ಅವರ ಸಂಪರ್ಕಕ್ಕೆ: 9449136252

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.