ಸರಕು ಮತ್ತು ಸೇವೆಗಳ ಮಾರಾಟ ಕಡಿಮೆಯಾಗಿದೆಯೇ ಅಥವಾ ವ್ಯಾಪಾರವೇ ಕುಸಿಯುತ್ತಿದೆಯೇ ಎನ್ನುವ ಪ್ರಶ್ನೆಗೆ ಉತ್ತರ ಸಿಗುತ್ತಿಲ್ಲ. ಜಿಎಸ್ಟಿ ವ್ಯವಸ್ಥೆಯಲ್ಲಿನ ನ್ಯೂನತೆ ಸರಿಪಡಿಸಲು ವಿಳಂಬ ಧೋರಣೆ, ವಂಚನೆಗಿರುವ ಅವಕಾಶ ಮತ್ತಿತರ ಕಾರಣಗಳಿಂದ ನಿರೀಕ್ಷಿತ ಮಟ್ಟದಲ್ಲಿ ತೆರಿಗೆ ವಸೂಲಿ ಸಾಧ್ಯವಾಗಿಲ್ಲ. ತೆರಿಗೆ ಹರಿವು ಹೆಚ್ಚಿಸುವ ನಿರೀಕ್ಷೆ ಹುಸಿಯಾಗಿದೆ. ಬಾಕಿ ವಸೂಲಿ ಇಲಾಖೆ ಹೊಣೆ. ಸುಸ್ತಿದಾರರ ಪತ್ತೆಗೆ ಪ್ರಾಮಾಣಿಕ ಡೀಲರ್ಗಳನ್ನು ಗುರಾಣಿಯನ್ನಾಗಿ ಬಳಸಬಾರದು. ತೆರಿಗೆ ವ್ಯವಸ್ಥೆ ಜಾರಿಯಲ್ಲಿ ಎಲ್ಲರ ಹಿತರಕ್ಷಣೆಯ ಸಮಗ್ರ ದೃಷ್ಟಿಕೋನ ಇರಬೇಕಾಗಿತ್ತು. ಕಠಿಣ ನಿಬಂಧನೆಗಳು, ನಿರ್ದಯ ಧೋರಣೆಗಳಿಂದ ವರ್ತಕರು, ವಹಿವಾಟುದಾರರು, ಉದ್ಯಮಿಗಳು ತೆರಿಗೆ ಪಾವತಿ ಪ್ರಕ್ರಿಯೆಯಲ್ಲಿ ಮನಪೂರ್ವಕವಾಗಿ ಭಾಗಿಯಾಗುತ್ತಿಲ್ಲ.
ಪ್ರಾಮಾಣಿಕ ವರ್ತಕ ನೋಂದಾಯಿತ ಡೀಲರ್ನಿಂದ ಸರಕು ಖರೀದಿಸಿದ್ದರೆ ಶೇ 100ರಷ್ಟು ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ನೀಡಬೇಕು. ತಪ್ಪು ಮಾಡುವ ಡೀಲರ್ಗಳನ್ನು ಗುರುತಿಸಿ ತೆರಿಗೆ ವಸೂಲಿ ಮಾಡಬೇಕು. ಸರಕು ಖರೀದಿಸುವ ವರ್ತಕ ಮಾರಾಟಗಾರನ ಮೂಲಕ ಸರ್ಕಾರಕ್ಕೆ ಮುಂಗಡ ತೆರಿಗೆ ಪಾವತಿಸಿರುತ್ತಾನೆ. ವಿಶ್ವಾಸ ಆಧರಿಸಿದ ಈ ವ್ಯವಸ್ಥೆಯು ‘ಜಿಎಸ್ಟಿಎನ್ ನಂಬರ್’ ನೀಡುವಲ್ಲಿಯೇ ಅಂತರ್ಗತವಾಗಿರಬೇಕು. ಮಾರಾಟ ದಾಖಲೆ ಸಲ್ಲಿಸದ (ತೆರಿಗೆ ಪಾವತಿಸದ) ಸಂದರ್ಭದಲ್ಲಿ ‘ಐಟಿಸಿ’ ನಿರಾಕರಿಸುವುದರಿಂದಖರೀದಿದಾರ ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿದ್ದಾನೆ. ಇದನ್ನು ತಪ್ಪಿಸಲು ಸರ್ಕಾರ ಪ್ರಯತ್ನಿಸಬೇಕಾಗಿದೆ. ಮಾರುಕಟ್ಟೆಯಲ್ಲಿ ಹಣದ ಹರಿವು ಮತ್ತು ಜನರ ಕೊಳ್ಳುವ ಸಾಮರ್ಥ್ಯ ಹೆಚ್ಚಬೇಕಾಗಿದೆ. ಇ–ಕಾಮರ್ಸ್ನಿಂದಾಗಿ ಚಿಲ್ಲರೆ ಮಾರಾಟಗಾರರ ವಹಿವಾಟಿಗೆ ಧಕ್ಕೆ ಉಂಟಾಗುತ್ತಿದೆ. ಕಳಪೆ ಸರಕುಗಳು ಗ್ರಾಹಕರ ಕೈಸೇರುತ್ತಿವೆ. ಈ ಬೆಳವಣಿಗೆಗೆ ತುರ್ತಾಗಿ ಕಡಿವಾಣ ವಿಧಿಸಬೇಕಾಗಿದೆ.
ಇದನ್ನೂ ಓದಿ...ಒಳನೋಟ: ಸತ್ತವರ ಹೆಸರಲ್ಲಿ ಕೋಟ್ಯಂತರ ವ್ಯವಹಾರ!
(ಲೇಖಕರು ತೆರಿಗೆ ಸಲಹೆಗಾರ)
ನಿರೂಪಣೆ : ಕೇಶವ ಜಿ. ಝಿಂಗಾಡೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.