ಬೆಂಗಳೂರು ಬಳಿಕ ಅತಿ ಹೆಚ್ಚು ಕ್ರೀಡಾ ಸ್ಪರ್ಧೆಗಳು ನಡೆಯುತ್ತಿರುವ ಮೈಸೂರು ನಗರಿಯಲ್ಲಿ ಪ್ರತಿಭಾವಂತ ಕ್ರೀಡಾಪಟುಗಳು ಇದ್ದಾರೆ. ವಿವಿಧ ಹಂತದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಅದರಲ್ಲೂ ಪ್ರತಿವರ್ಷ ದಸರಾ ಕ್ರೀಡಾಕೂಟ ಆಯೋಜಿಸುವ ಮೂಲಕ ಸಾಂಸ್ಕೃತಿಕ ನಗರಿಯು ಕ್ರೀಡಾ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದೆ. ಗ್ರಾಮೀಣ ಪ್ರತಿಭೆಗಳ ಪಾಲಿಗೆ ಈ ಕ್ರೀಡಾಕೂಟ ಅವಕಾಶಗಳ ವೇದಿಕೆ. ಪ್ರತಿಭೆಗಳನ್ನು ಶೋಧಿಸುವ ತಾಣವಾಗಿದೆ.
ಇದೇ ಕಾರಣಕ್ಕೆ ಮೈಸೂರಿನಲ್ಲಿ ಕ್ರೀಡಾ ಸೌಲಭ್ಯಗಳು ಹೆಚ್ಚಿವೆ. ಅದಕ್ಕೆ ಉದಾಹರಣೆ ಚಾಮುಂಡಿ ವಿಹಾರ ಕ್ರೀಡಾಂಗಣ. ಅಥ್ಲೆಟಿಕ್ ಟ್ರ್ಯಾಕ್, ಹಾಕಿ ಕ್ರೀಡಾಂಗಣ, ಬ್ಯಾಸ್ಕೆಟ್ಬಾಲ್ ಕೋರ್ಟ್, ಒಳಾಂಗಣ ಕ್ರೀಡಾಂಗಣ, ಹೊಸದಾಗಿ ನಿರ್ಮಿಸಿರುವ ಈಜುಕೊಳ ಇಲ್ಲಿವೆ. ಜೊತೆಗೆ ಕ್ರೀಡಾ ಹಾಸ್ಟೆಲ್ ಕೂಡ ಇದೆ. ಹೊಸದಾಗಿ ಟೆನಿಸ್ ಅಕಾಡೆಮಿ, ಜಿಮ್ನಾಸ್ಟಿಕ್ ಕೇಂದ್ರ ಹಾಗೂ ಬಾಲಕಿಯರ ವಸತಿ ನಿಲಯ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ.
ಜಿಲ್ಲಾ ಅಥ್ಲೆಟಿಕ್ಸ್, ಫುಟ್ಬಾಲ್, ಕೊಕ್ಕೊ, ಹಾಕಿ, ಬ್ಯಾಸ್ಕೆಟ್ಬಾಲ್, ಟೇಬಲ್ ಟೆನಿಸ್, ಸೈಕ್ಲಿಂಗ್, ರೈಫಲ್, ಈಜು, ಹ್ಯಾಂಡ್ಬಾಲ್, ಕುಸ್ತಿ ಸಂಸ್ಥೆಗಳು ಆಗಾಗ್ಗೆ ಕ್ರೀಡಾಕೂಟ ಆಯೋಜನೆ ಮೂಲಕ ಕ್ರೀಡಾಪಟುಗಳ ಪ್ರತಿಭೆ ಅನಾವರಣಕ್ಕೆ ವೇದಿಕೆ ಕಲ್ಪಿಸುತ್ತಿವೆ. ಪದಾಧಿಕಾರಿಗಳು ಕೂಡ ಚಟುವಟಿಕೆಯಿಂದ ಕೂಡಿದ್ದಾರೆ.
ಅಲ್ಲದೆ; ಮೈಸೂರು ವಿಶ್ವವಿದ್ಯಾನಿಲಯ ಹಾಗೂ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ (ಮುಡಾ) ಸೇರಿದ ಕ್ರೀಡಾಂಗಣಗಳೂ ಇವೆ. ಚೆಸ್ನಲ್ಲೂ ಪ್ರತಿಭಾವಂತ ಆಟಗಾರರಿದ್ದಾರೆ.
ಹೀಗಿದ್ದರೂ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಿರ್ವಹಣೆ ಕೊರತೆ ದೊಡ್ಡದಾಗಿ ಕಾಡುತ್ತಿದೆ. ಶೌಚಾಲಯವನ್ನು ಬಳಸಲು ಸಾಧ್ಯವಾಗದಂಥ ಪರಿಸ್ಥಿತಿ ಇದೆ. ನೀರಿನ ಸಮಸ್ಯೆ ಇದೆ. ಕ್ರೀಡಾ ಸಾಮಗ್ರಿ ಕೊಠಡಿ ಅವ್ಯವಸ್ಥೆಯಿಂದ ಕೂಡಿದೆ. ಕ್ರೀಡಾ ಉಪಕರಣಗಳು ಹಾಳಾಗಿವೆ. ಜೋರು ಮಳೆಯಾದರೆ ಒಳಾಂಗಣ ಸೋರುತ್ತದೆ. ಕ್ರೀಡಾ ಹಾಸ್ಟೆಲ್ ಕಿಟಕಿ, ಬಾಗಿಲುಗಳು ಭದ್ರವಾಗಿಲ್ಲ. ಈ ಹಾಸ್ಟೆಲ್ನಲ್ಲಿ 150ಕ್ಕೂ ಹೆಚ್ಚು ಕ್ರೀಡಾಪಟುಗಳಿದ್ದಾರೆ.
‘ಉಳಿದ ಜಿಲ್ಲೆಗಳಿಗಿಂತ ಹೆಚ್ಚು ಸೌಲಭ್ಯ ಮೈಸೂರಿನಲ್ಲಿದೆ. ಆದರೆ, ಸಿಬ್ಬಂದಿ ಕೊರತೆಯಿಂದ ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಹೀಗಾಗಿ, ಇರುವ ಸೌಲಭ್ಯಗಳು ಹಾಳಾಗುತ್ತಿವೆ’ ಎಂದು ಮೈಸೂರು ವಿ.ವಿ ದೈಹಿಕ ಶಿಕ್ಷಣ ವಿಭಾಗದ ನಿವೃತ್ತ ನಿರ್ದೇಶಕ ಡಾ.ಸಿ.ಕೃಷ್ಣ ಹೇಳುತ್ತಾರೆ.
ಅಂಗಳ ಕೊರತೆಯೂ ಇದೆ
ಈಜುಕೊಳ, ಫುಟ್ಬಾಲ್ ಕ್ರೀಡಾಂಗಣ, ಟೆನಿಸ್ ಕೋರ್ಟ್, ರೋಲರ್ ಸ್ಕೇಟಿಂಗ್ ಅಂಕಣ ಕೊರತೆ ಇವೆ. ಈಜು ಕ್ರೀಡೆ ಕೇವಲ ಬೆಂಗಳೂರಿಗೆ ಸೀಮಿತವಾಗಿರುವಂತಿದೆ. ಹೀಗಾಗಿ, ಈ ಭಾಗದಿಂದ ಈಜು ಸ್ಪರ್ಧಿಗಳು ಹೊರಹೊಮ್ಮುತ್ತಿಲ್ಲ. ಟೆನಿಸ್, ವಾಲಿಬಾಲ್, ಕಬಡ್ಡಿ, ಬ್ಯಾಡ್ಮಿಂಟನ್, ಬಾಕ್ಸಿಂಗ್ ಚಟುವಟಿಕೆಗಳು ತೀರಾ ಕಡಿಮೆ.
‘ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಮೈಸೂರು ಫುಟ್ಬಾಲ್ ಆಟಗಾರರ ಕೊಡುಗೆ ಅನನ್ಯ. ಒಲಿಂಪಿಕ್ಸ್ನಲ್ಲೂ ದೇಶವನ್ನು ಪ್ರತಿನಿಧಿಸಿದ್ದರು. ಆದರೆ, ಇಂಥ ನಗರಿಯಲ್ಲೇ ಫುಟ್ಬಾಲ್ ಕ್ರೀಡಾಂಗಣ ನಿರ್ಮಿಸಿಲ್ಲ. ವಿ.ವಿ ಕ್ರೀಡಾಂಗಣವನ್ನೇ ನೆಚ್ಚಿಕೊಳ್ಳಬೇಕಿದೆ. ಸರ್ಕಾರ ಅಥವಾ ಫೆಡರೇಷನ್ ಈ ಬಗ್ಗೆ ಗಮನ ಹರಿಸಬೇಕು’ ಎನ್ನುತ್ತಾರೆ ದೈಹಿಕ ಶಿಕ್ಷಣ ತಜ್ಞ ಪ್ರೊ.ಶೇಷಣ್ಣ.
ಸೌಲಭ್ಯಗಳು ಇದ್ದರೆ ಸಾಲದು. ಅವುಗಳನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕು. ನಿರ್ವಹಣೆಯೂ ಚೆನ್ನಾಗಿರಬೇಕು. ಕ್ರೀಡಾಪಟುಗಳಿಗೆ ಸುಲಭವಾಗಿ ಸೌಲಭ್ಯ ಸಿಗುವಂತಿರಬೇಕು. ಕ್ರೀಡೆ ಹೊರತುಪಡಿಸಿ ಮತ್ಯಾವುದೇ ಚಟುವಟಿಕೆಗಳಿಗೆ ಬಳಸಬಾರದು.
ಸೌಲಭ್ಯ ಕಲ್ಪಿಸಲು ಒತ್ತು
ಮೈಸೂರಿನಲ್ಲಿ ‘ದಸರಾ ಸಿ.ಎಂ ಕಪ್’ ಮೂಲಕ ದಸರಾ ಕ್ರೀಡಾಕೂಟಕ್ಕೆ ಹೊಸ ಸ್ವರೂಪ ನೀಡಿದ್ದೇವೆ. ಉತ್ತಮ ಪ್ರತಿಕ್ರಿಯೆ ಲಭಿಸಿದ್ದು, ಈ ಬಾರಿಯೂ ಇದು ಮುಂದುವರಿಯಲಿದೆ. ಎಲ್ಲಾ ಕ್ರೀಡಾ ಸಂಸ್ಥೆಗಳಿಗೆ ಸಮನಾದ ಅವಕಾಶ ಸಿಗುತ್ತಿದೆ. ಕ್ರೀಡಾ ಇಲಾಖೆ ಹಾಗೂ ಕ್ರೀಡಾ ಸಂಸ್ಥೆಗಳ ಜೊತೆಗೂಡಿ ಕ್ರೀಡಾ ಸೌಲಭ್ಯ ಹೆಚ್ಚಿಸಲು ಒತ್ತು ನೀಡಲಾಗುವುದು.
–ಅನಂತರಾಜು,
ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಒಲಿಂಪಿಕ್ ಸಂಸ್ಥೆ
***
ಯುವ ಪ್ರತಿಭೆಗಳಿಗೆ ಅವಕಾಶ ನೀಡಲು ಯೋಜನೆ ರೂಪಿಸಲಾಗಿದೆ. ಜುಲೈ–ಆಗಸ್ಟ್ನಲ್ಲಿ ಬೆಂಗಳೂರಿನಲ್ಲಿ 13ರಿಂದ 15 ವಯೋಮಾನದವರಿಗಾಗಿ ಮಿನಿ ಒಲಿಂಪಿಕ್ಸ್ ಆಯೋಜಿಸಲಾಗುವುದು. ಬಜೆಟ್ನಲ್ಲಿ ಒಪ್ಪಿಗೆ ಲಭಿಸಿದೆ. ದೇಶದಲ್ಲಿ ಎಲ್ಲೂ ಈ ರೀತಿಯ ಕ್ರೀಡಾಕೂಟ ಆಯೋಜಿಸಿಲ್ಲ.
ಕೆ.ಗೋವಿಂದರಾಜ್,ಅಧ್ಯಕ್ಷ, ಕರ್ನಾಟಕ ಒಲಿಂಪಿಕ್ ಸಂಸ್ಥೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.