ADVERTISEMENT

ಒಂಟೆಯ ಕಣ್ಣೀರ ಹನಿಗಿದೆ 26 ಹಾವುಗಳ ವಿಷಕ್ಕೆ ಪ್ರತಿಕಾಯ ಸೃಷ್ಟಿಸುವ ಶಕ್ತಿ: NRCC

ಏಜೆನ್ಸೀಸ್
Published 5 ಜುಲೈ 2025, 16:06 IST
Last Updated 5 ಜುಲೈ 2025, 16:06 IST
<div class="paragraphs"><p>ರಾಜಸ್ತಾನದ  ಗ್ರಾಮಸ್ಥರಿಬ್ಬರು ತಮ್ಮ ಒಂಟೆಗಳನ್ನು ಹೊಡೆದುಕೊಂಡು ಹೋಗುತ್ತಿರುವ ದೃಶ್ಯ </p></div>

ರಾಜಸ್ತಾನದ ಗ್ರಾಮಸ್ಥರಿಬ್ಬರು ತಮ್ಮ ಒಂಟೆಗಳನ್ನು ಹೊಡೆದುಕೊಂಡು ಹೋಗುತ್ತಿರುವ ದೃಶ್ಯ

   

ಬಿಕನೇರ್: ಮರುಭೂಮಿ ಹಡಗು ಎಂದೇ ಕರೆಯುವ ಒಂಟೆಯ ಕಣ್ಣೀರು ಹಾವು ಕಡಿತದ ಜನರನ್ನು ಉಳಿಸುವ ‘ಸಂಜೀವಿನಿ’ ಆಗಬಹುದು ಎಂದು ರಾಜಸ್ಥಾನದ ಬಿಕಾನೇರ್‌ನಲ್ಲಿರುವ ರಾಷ್ಟ್ರೀಯ ಒಂಟೆ ಸಂಶೋಧನಾ ಕೇಂದ್ರ (NRCC) ವಿಜ್ಞಾನಿಗಳು ನಡೆಸಿದ ಸಂಶೋಧನೆಯಲ್ಲಿ ಉಲ್ಲೇಖಿಸಲಾಗಿದೆ.

ಒಂಟೆಯ ಕಣ್ಣೀರು ಮತ್ತು ಪ್ರತಿ ರಕ್ಷಣಾ ವ್ಯವಸ್ಥೆಗಳಿಂದ ಪಡೆದ ಪ್ರತಿಕಾಯಗಳು ಹಾವಿನ ವಿಷವನ್ನು ತಟಸ್ಥಗೊಳಿಸುವ ಶಕ್ತಿಯನ್ನು ಹೊಂದಿವೆ. ಹಾವು ಕಡಿತಕ್ಕೆ ಹೊಸ ಚಿಕಿತ್ಸೆಯ ಅನ್ವೇಷಣೆಯ ಜತೆಗೆ, ಒಂಟೆ ಸಾಕುವವರ ಆದಾಯ ವೃದ್ಧಿಯೂ ಹೆಚ್ಚಲಿದೆ ಎಂದು ಈ ಅಧ್ಯಯನ ಹೇಳಿರುವುದಾಗಿ ವರದಿಯಾಗಿದೆ.

ADVERTISEMENT

ಸಂಶೋಧನೆ ವೇಳೆ ಅತಿ ಹೆಚ್ಚು ವಿಷವುಳ್ಳ ಗರಗಸ ಮಾದರಿಯ ಹುರುಪುಳ್ಳ ಹಾವಿನ ವಿಷವನ್ನು ಒಂದು ಡುಬ್ಬದ ಒಂಟೆಗೆ ಪ್ರತಿರಕ್ಷಣೆಯಾಗಿ ನೀಡಲಾಗಿತ್ತು. ವಿಶೇಷವಾಗಿ ಹಾವು ಕಡಿತದಿಂದ ಉಂಟಾಗುವ ರಕ್ತ ಸ್ರಾವ ಹಾಗೂ ಹೆಪ್ಪುಗಟ್ಟುವಿಕೆಯನ್ನು ಒಂಟೆಯ ಕಣ್ಣೀರು ಮತ್ತು ರಕ್ತದಿಂದ ಹೊರತೆಗೆದ ಪ್ರತಿರಕ್ಷಣಾ ವ್ಯವಸ್ಥೆಯು ಪರಿಣಾಮಕಾರಿಯಾಗಿ ತಡೆದಿದ್ದು ಸಂಶೋಧನೆಯಲ್ಲಿ ಪತ್ತೆಯಾಗಿದೆ ಎಂದು ತಜ್ಞರು ಹೇಳಿದ್ದಾರೆ. ಹಾಲಿ ಬಳಕೆಯಲ್ಲಿರುವ ಕುದುರೆಯಿಂದ ಹೊರತೆಗೆಯಲಾದ ಲಸಿಕೆಗಿಂತ ಒಂಟೆಯಿಂದ ಉತ್ಪಾದಿಸಲಾದ ಪ್ರತಿಕಾಯಿದಿಂದ ಅಲರ್ಜಿ ಪ್ರಮಾಣ ಕಡಿಮೆ ಎಂಬುದನ್ನು ಈ ಸಂಶೋಧನೆಯಲ್ಲಿ ಹೇಳಲಾಗಿದೆ.

ಭಾರತದಲ್ಲಿ ಪ್ರತಿ ವರ್ಷ 58 ಸಾವಿರ ಜನರು ಹಾವಿನ ಕಡಿತದಿಂದ ಮೃತಪಡುತ್ತಿದ್ದಾರೆ. 1.40 ಲಕ್ಷ ಜನರು ಹಾವಿನ ವಿಷದಿಂದ ಅಂಗ ವೈಫಲ್ಯ ಅನುಭವಿಸುತ್ತಿದ್ದಾರೆ. ಭಾರತದ ಈ ದಾಖಲೆ ಜಾಗತಿಕ ಮಟ್ಟದಲ್ಲೇ ಅತಿ ಹೆಚ್ಚು. NRCC ಸಂಶೋಧನೆಯಿಂದ ಕೈಗೆಟಕುವ ಬೆಲೆಯಲ್ಲಿ ಪರಿಣಾಮಕಾರಿ ಮತ್ತು ಸುರಕ್ಷಿತ ಚಿಕಿತ್ಸೆ ಲಭ್ಯವಾಗುವ ಸಾದ್ಯತೆ ದಟ್ಟವಾಗಿದೆ. ಅದರಲ್ಲೂ ಗ್ರಾಮೀಣ ಭಾಗದಲ್ಲಿ ಹಾವಿನ ಕಡಿತ ಪ್ರಕರಣಗಳು ಸಾಮಾನ್ಯ ಎಂಬಂತಾಗಿದ್ದು, ವೈದ್ಯಕೀಯ ಸೌಲಭ್ಯ ಲಭ್ಯವಾಗುವುದು ವಿಳಂಬವಾಗುವುದರಿಂದ ಸಾವಿನ ಸಂಖ್ಯೆಯೂ ಅಧಿಕವಾಗಿದೆ.

ಈ ಸಂಶೋಧನೆಯಿಂದ ರಾಜಸ್ಥಾನದಲ್ಲಿರುವ ಒಂಟೆ ಸಾಕಣೆ ಸಮುದಾಯದ ಆರ್ಥಿಕ ಅಭಿವೃದ್ಧಿಯೂ ಸಾಧ್ಯವಾಗಲಿದೆ. ರಾಜಸ್ಥಾನದ ಬಿಕಾನೇರ್, ಜೈಸಲ್ಮೇರ್‌ ಮತ್ತು ಜೋಧಪುರದಲ್ಲಿ ಒಂಟೆ ಸಾಕಣೆ ಸಮುದಾಯಗಳಿವೆ. ಒಂಟೆಗಳಿಂದ ಕಣ್ಣೀರು ಮತ್ತು ರಕ್ತದ ಮಾದರಿ ಸಂಗ್ರಹಿಸಲು ಸ್ಥಳೀಯ ಒಂಟೆ ಸಾಕಣೆ ಕುಟುಂಬಗಳಿಗೆ NRCC ತರಬೇತಿ ನೀಡುತ್ತಿದೆ. ಇದಕ್ಕಾಗಿ ಅವರಿಗೆ ಸಾಕಷ್ಟು ಆದಾಯವೂ ಸಿಗಲಿದೆ.

ಸಿರಮ್‌ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಸೇರಿದಂತೆ ಹಲವು ಔಷಧ ತಯಾರಿಕಾ ಕಂಪನಿಗಳು ಒಂಟೆಯಿಂದ ಉತ್ಪಾದಿಸಲಾದ ಪ್ರತಿಕಾಯಗಳ ನಿರೀಕ್ಷೆಯಲ್ಲಿವೆ. ಅಂದಾಜಿನ ಪ್ರಕಾರ ಈ ಉದ್ಯಮದಿಂದಾಗಿ ರೈತರಿಗೆ  ಮಾಸಿಕ ಹೆಚ್ಚುವರಿಯಾಗಿ ₹5ಸಾವಿರದಿಂದ ₹10ಸಾವಿರವರೆಗೆ ಆದಾಯ ಸಿಗಲಿದೆ. ಸುಸ್ಥಿರ ಮತ್ತು ವೈಜ್ಞಾನಿಕ ಅಭಿವೃದ್ಧಿಯ ಮೂಲಕ ಹೊಸ ಆದಾಯ ಮೂಲ ಸೃಷ್ಟಿಗೆ ಸಂಶೋಧನೆ ಕಾರಣವಾಗಿದೆ ಎಂದು ತಜ್ಞರು ಹೇಳಿದ್ದಾರೆ.

ಪ್ರತಿಕೂಲ ಹವಾಮಾನವನ್ನು ತಡೆದುಕೊಳ್ಳುವ ಸಾಮರ್ಥ್ಯ ಮತ್ತು ಅಪಾರ ರೋಗನಿರೋಧಕ ಶಕ್ತಿ ಹೊಂದಿರುವ ಒಂಟೆಗಳಿಂದ ಈ ಹೊಸ ಸಾಧ್ಯತೆಯೊಂದು ಹೊರಹೊಮ್ಮಿದೆ. ಒಂಟೆಗಳು ಹೊರೆಯಲ್ಲ ಬದಲಿಗೆ ಅವು ಪ್ರಾಣಾಪಾಯದಿಂದ ಪಾರುಮಾಡಬಲ್ಲ ಆಪತ್‌ಬಾಂಧವ ಎಂದೆನಿಸಿಕೊಂಡಿದೆ. ವೈದ್ಯಕೀಯ ಸಂಶೋಧನೆಯಲ್ಲಿ ಸ್ವದೇಶಿ ಸ್ಥಳೀಯ ಪ್ರಬೇಧಗಳ ಒಂಟೆಗಳ ಅಭಿವೃದ್ಧಿ, ಗ್ರಾಮಗಳಲ್ಲಿನ ಬಂಡವಾಳ ಹೆಚ್ಚಳವನ್ನು NRCC ಸಂಶೋಧನೆ ಒತ್ತಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.