ADVERTISEMENT

ಮಳೆಗಾಲಕ್ಕೆ ಕೂದಲಿನ ಆರೈಕೆ ಮಾಡಿ

​ಪ್ರಜಾವಾಣಿ ವಾರ್ತೆ
Published 3 ಜುಲೈ 2020, 6:02 IST
Last Updated 3 ಜುಲೈ 2020, 6:02 IST
ಮಳೆಗಾಲಕ್ಕೆ ಕೂದಲಿನ ಆರೈಕೆ (ಸಾಂದರ್ಭಿಕ ಚಿತ್ರ)
ಮಳೆಗಾಲಕ್ಕೆ ಕೂದಲಿನ ಆರೈಕೆ (ಸಾಂದರ್ಭಿಕ ಚಿತ್ರ)   

ಮಳೆಗಾಲದಲ್ಲಿ ಕೂದಲು ಹೆಚ್ಚು ಉದುರುತ್ತದೆ.ಮನೆಯಲ್ಲೇ ಸಿಗುವ ವಸ್ತುಗಳನ್ನು ಬಳಸಿ, ಉದುರುವ ಕೂದಲಿಗೆ ಪರಿಹಾರ ಕಂಡುಕೊಳ್ಳಬಹುದು ಹಾಗೂ ಸುಂದರ ಕೇಶರಾಶಿಯನ್ನು ಪಡೆಯಬಹುದು. ಈ ಬಗ್ಗೆ ಟಿಪ್ಸ್‌ ಇಲ್ಲಿದೆ.

ದಾಸವಾಳ ಹೂವಿನ ಗಿಡದ ಎಲೆಗಳನ್ನು ಮುಷ್ಟಿಯಷ್ಟು ತೆಗೆದುಕೊಂಡು, ಬಿಸಿನೀರಿನಲ್ಲಿ ಅರ್ಧ ಗಂಟೆ ನೆನೆಸಿಡಿ. ನಂತರ ಅವನ್ನು ಕೈಯಿಂದಲೇ ಹಿಸುಕಿ ಆ ಲೋಳೆ ರಸವನ್ನು ತಲೆ ಸ್ನಾನವಾದ ನಂತರ ಕೂದಲಿಗೆ ‘ಕಂಡಿಷರ್‘ ಲೇಪಿಸುವಂತೆ ಹಚ್ಚಿಕೊಂಡು ಕೆಲವು ನಿಮಿಷ ಮಸಾಜು ಮಾಡಿ. ಕೂದಲನ್ನು ತೊಳೆಯಿರಿ. ಇದರಿಂದ ಕೂದಲು ನುಣುಪಾಗಿಹೊಳೆಯುತ್ತದೆ. ಅಕಾಲ ನೆರೆಯನ್ನು ತಡೆಯುತ್ತದೆ.

ತೆಂಗಿನ ಎಣ್ಣೆಗೆ ಭಂಗರಾಜ ಗಿಡದ (ಗರುಗದ ಸೊಪ್ಪು) ಎಲೆಗಳು, ಒಂದೆಲಗ ಗಿಡದ ಎಲೆಗಳು ಮತ್ತು ಮೆಂತೆಯನ್ನು ಸೇರಿಸಿ ಚೆನ್ನಾಗಿ ಕುದಿಸಿ. ನಂತರ ಶೋಧಿಸಿ ಗಾಜಿನ ಬಾಟಲಿನಲ್ಲಿ ತುಂಬಿಡಿ .ಇದನ್ನು ನಿರಂತರವಾಗಿ ತಲೆಗೆ ಹಾಕಿ ಮಸಾಜು ಮಾಡುವುದರಿಂದ ಹೊಟ್ಟು ಆಗುವುದಿಲ್ಲ ಮತ್ತು ನೆನಪಿನ ಶಕ್ತಿ ಜಾಸ್ತಿಯಾಗುತ್ತದೆ.

ADVERTISEMENT

ರಾಸಾಯನಿಕ ಮುಕ್ತವಾಗಿ ಮನೆಯಲ್ಲೇಹೇರ್ ಸ್ಟ್ರೇಟ್ ಮಾಡಿಕೊಳ್ಳಬಹುದು. ಅದಕ್ಕೆ ಹೀಗೆ ಮಾಡಿ. ಒಂದು ಕಪ್ ಮುಲ್ತಾನಿ ಮಿಟ್ಟಿ, ಅಷ್ಟೇ ಪ್ರಮಾಣದ ಅಕ್ಕಿ ಹಿಟ್ಟು ಬೆರೆಸಿ ಎರಡು ಮೊಟ್ಟೆಯ ಬಿಳಿ ಭಾಗವನ್ನು ಸೇರಿಸಿ ಸ್ವಲ್ಪ ನೀರೂ ಸೇರಿಸಿ ತಲೆಗೂದಲನ್ನು ಎಳೆ ಎಳೆಯಾಗಿ ಬಿಡಿಸಿಕೊಂಡು ಹಚ್ಚಿಕೊಳ್ಳಿ, ಒಂದು ಗಂಟೆಯ ನಂತರ ತೊಳೆಯಿರಿ. ವಾರಕ್ಕೆರಡು ಬಾರಿ ಇದನ್ನು ಮಾಡುವುದರಿಂದತಲೆ ಕೂದಲು ನೇರವಾಗುತ್ತದೆ.

ತಲೆಗೂದಲನ್ನು ತೊಳೆಯಲು ಮನೆಯಲ್ಲೇ ಮಾಡುವ ಪುಡಿ ತಯಾರಿಸಿಕೊಳ್ಳಬಹುದು. ಸೀಗೆ ಪುಡಿ, ಮೆಂತೆ ಪುಡಿ, ಕಡಲೆ ಹಿಟ್ಟು,ಅಂಟುವಾಳದ ಪುಡಿ, ದಾಸವಾಳದ ಎಲೆ ಮತ್ತು ಹೂ ಒಣಗಿಸಿ ಪುಡಿ ಮಾಡಿ ಎಲ್ಲವನ್ನು ಮಿಶ್ರಣ ಮಾಡಿ ಬಳಸಬಹುದು. ಇದು ಕೂದಲಿನ ಬುಡವನ್ನು ಚೆನ್ನಾಗಿ ಸ್ಕ್ರಬ್‌ ಮಾಡುವುದರೊಂದಿಗೆ ತಲೆ ಹೊಟ್ಟು,ತಲೆ ಉರಿಯುವಿಕೆ, ಕಜ್ಜಿಗಳಿಂದಕೂದಲಿನ ರಕ್ಷಣೆ ಮಾಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.