ADVERTISEMENT

ಆಗಾಗ ಅಂಗೈ, ಪಾದಗಳು ಜುಮ್ಮೆನ್ನುವುದೇಕೆ? ಪ್ರಮುಖ ಕಾರಣಗಳು ಇಲ್ಲಿವೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಜನವರಿ 2026, 10:29 IST
Last Updated 23 ಜನವರಿ 2026, 10:29 IST
<div class="paragraphs"><p>ಎಐ ಚಿತ್ರ</p></div>
   

ಎಐ ಚಿತ್ರ

ಇತ್ತೀಚಿನ ದಿನಗಳಲ್ಲಿ ಅನೇಕರು ಅಂಗೈ ಹಾಗೂ ಅಂಗಾಲಿನಲ್ಲಿ ಸೂಜಿಯಿಂದ ಚುಚ್ಚಿದಂತೆ ಅನುಭವವಾಗುತ್ತಿದೆ ಎಂದು ಹೇಳುತ್ತಾರೆ. ಕೆಲವರಿಗೆ ಇದು ಸ್ವಲ್ಪ ಸಮಯ ಮಾತ್ರ ಇರುತ್ತದೆ. ಆದರೆ ಇನ್ನೂ ಕೆಲವರಿಗೆ ಪದೇ ಪದೇ ದಿನನಿತ್ಯದ ಕೆಲಸಗಳಿಗೆ ಅಡಚಣೆ ಉಂಟುಮಾಡುತ್ತದೆ. ಸಾಮಾನ್ಯವಾಗಿ ಇದು ತಾತ್ಕಾಲಿಕ ಕಾರಣಗಳಿಂದಾಗಬಹುದು. ಆದರೆ ಕೆಲ ಸಂದರ್ಭಗಳಲ್ಲಿ ಇದು ಒಳಗಿನ ಆರೋಗ್ಯ ಸಮಸ್ಯೆಯ ಸೂಚನೆಯಾಗಿರಬಹುದು.

ರಕ್ತಸಂಚಾರ ಸರಿಯಾಗಿ ಆಗದಿರುವುದು ಒಂದು ಕಾರಣ: ರಕ್ತನಾಳಗಳಲ್ಲಿ ಕೊಬ್ಬು ಸೇರಿಕೊಳ್ಳುವುದು, ರಕ್ತನಾಳಗಳು ಕಿರಿದಾಗುವುದು ಅಥವಾ ರಕ್ತನಾಳಗಳಲ್ಲಿ ಅಡ್ಡಿ ಉಂಟಾಗುವುದರಿಂದ ರಕ್ತದ ಹರಿವು ಕಡಿಮೆಯಾಗುತ್ತದೆ. ಇದರಿಂದ ಅಂಗೈ ಮತ್ತು ಅಂಗಾಲಿಗೆ ಬೇಕಾದಷ್ಟು ರಕ್ತ ತಲುಪದೆ ಚುರುಕು, ತಣ್ಣನೆಯ ಅನುಭವ ಅಥವಾ ಮರಗಟ್ಟಿವ ಅನುಭವ ಆಗುತ್ತದೆ. ಧೂಮಪಾನದ ಅಭ್ಯಾಸ, ದೈಹಿಕ ಚಟುವಟಿಕೆಯ ಕೊರತೆ ಇದನ್ನು ಹೆಚ್ಚಿಸಬಹುದು.

ADVERTISEMENT

ಬಹಳ ಸಮಯ ಒಂದೇ ಭಂಗಿಯಲ್ಲಿ ಕುಳಿತುಕೊಳ್ಳುವುದು ಅಥವಾ ಮಲಗುವುದು ಈ ಸಮಸ್ಯೆಗೆ ಕಾರಣ: ಕೈ ಮೇಲೆ ತಲೆ ಇಟ್ಟು ಮಲಗುವುದು, ಕಾಲುಗಳನ್ನು ಮಡಚಿಕೊಂಡು ದೀರ್ಘ ಸಮಯದವರೆಗೆ ಕುಳಿತುಕೊಳ್ಳುವುದು ಅಥವಾ ನಿರಂತರವಾಗಿ ಮೊಬೈಲ್ ಹಾಗೂ ಕಂಪ್ಯೂಟರ್ ಬಳಸುವುದರಿಂದ ನರಗಳ ಮೇಲೆ ಒತ್ತಡ ಬೀಳುತ್ತದೆ. ಇದರ ಪರಿಣಾಮವಾಗಿ ಅಂಗೈ ಅಥವಾ ಅಂಗಾಲಿನಲ್ಲಿ ಚುರುಕು ಕಾಣಿಸುತ್ತದೆ. ಭಂಗಿ ಬದಲಿಸಿ ಸ್ವಲ್ಪ ಚಲಿಸಿದರೆ ಸಾಮಾನ್ಯವಾಗಿ ಇದು ಕಡಿಮೆಯಾಗುತ್ತದೆ.

ಅತಿಯಾದ ಮದ್ಯಪಾನವೂ ಮತ್ತೊಂದು ಪ್ರಮುಖ ಕಾರಣ: ನಿಯಮಿತವಾಗಿ ಮದ್ಯಪಾನ ಮಾಡುವವರಲ್ಲಿ ನರಗಳು ದುರ್ಬಲವಾಗಿ, ಅಂಗೈ ಮತ್ತು ಅಂಗಾಲಿನಲ್ಲಿ ಚುರುಕು ಮತ್ತು ಸುಡುವಿಕೆ ಕಾಣಿಸಬಹುದು.

ದೇಹದಲ್ಲಿ ವಿಟಮಿನ್ ಕೊರತೆ ಇದ್ದರೂ ಈ ಸಮಸ್ಯೆ ಕಾಣಿಸಬಹುದು: ವಿಶೇಷವಾಗಿ ವಿಟಮಿನ್ ಬಿ12 ನರಗಳ ಆರೋಗ್ಯಕ್ಕೆ ಬಹಳ ಅಗತ್ಯ. ಸಮತೋಲನದ ಆಹಾರ ಸೇವಿಸದಿರುವುದು, ಜೀರ್ಣಕ್ರಿಯೆ ಸಮಸ್ಯೆಗಳು ಅಥವಾ ದೀರ್ಘಕಾಲ ಔಷಧ ಸೇವಿಸುವುದರಿಂದ ಈ ಕೊರತೆ ಉಂಟಾಗಬಹುದು.

ಮಧುಮೇಹ ಇರುವವರಲ್ಲಿ ಅಂಗೈ ಮತ್ತು ಅಂಗಾಲಿನಲ್ಲಿ ಚುರುಕು ಸಾಮಾನ್ಯವಾಗಿ ಕಂಡುಬರುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣದಲ್ಲಿ ಇಲ್ಲದಿದ್ದರೆ ನರಗಳಿಗೆ ಹಾನಿಯಾಗುತ್ತದೆ. ಇದೇ ರೀತಿ ಮೂತ್ರಪಿಂಡದ ಕಾಯಿಲೆ ಇರುವವರಲ್ಲೂ ದೇಹದಲ್ಲಿ ವಿಷಪದಾರ್ಥಗಳು ಜಮಾಯಿಸಿ ನರಗಳ ಮೇಲೆ ಪರಿಣಾಮ ಬೀರುತ್ತದೆ.

ಇದರ ಜೊತೆಗೆ ಅತಿಯಾದ ಒತ್ತಡ, ಆತಂಕ, ನಿದ್ದೆಯ ಕೊರತೆ, ದೈಹಿಕ ದಣಿವು, ಹಾರ್ಮೋನ್ ಅಸಮತೋಲನ ಹಾಗೂ ಕೆಲವು ಔಷಧಗಳ ಪರಿಣಾಮವೂ ಕಾರಣವಾಗಬಹುದು. ಅಂಗೈ ಮತ್ತು ಅಂಗಾಲಿನಲ್ಲಿ ಚುರುಕು ಪದೇಪದೇ ಕಾಣಿಸಿಕೊಂಡರೆ, ಜೊತೆಗೆ ನೋವು, ದುರ್ಬಲತೆ, ಬಣ್ಣ ಬದಲಾವಣೆ ಅಥವಾ ಸಂವೇದನೆ ಕಡಿಮೆಯಾಗುತ್ತಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ. ಸಮಯಕ್ಕೆ ಸರಿಯಾದ ತಪಾಸಣೆ, ಸಮತೋಲನದ ಆಹಾರ, ನಿಯಮಿತ ವ್ಯಾಯಾಮ ಮತ್ತು ಆರೋಗ್ಯಕರ ಜೀವನಶೈಲಿ ಈ ಸಮಸ್ಯೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

(ಲೇಖಕರು: ಡಾ. ಬಿ. ಪೂಜಾ. ಸಹಾಯಕ ಪ್ರಾಧ್ಯಾಪಕರು. ಶ್ರೀ ಧ.ಮಂ. ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಹಾಸನ‌)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.