
ಪ್ರಾತಿನಿಧಿಕ ಚಿತ್ರ
ಶಿವರಾತ್ರಿಯಲ್ಲಿ ಉಪವಾಸ ಪ್ರಮುಖ ಆಚರಣೆಗಳಲ್ಲಿ ಒಂದಾಗಿದೆ. ಉಪವಾಸವೆನ್ನುವುದು ಕೇವಲ ದೈಹಿಕಾರ್ಥಕ್ಕೆ ಸೀಮಿತವಾಗದೆ ಮನಸ್ಸಿನ ವಿಷಯಕ್ಕೂ ಸಂಬಂಧಿಸುತ್ತದೆ. ಅಪರೂಪಕ್ಕೆ ಉಪವಾಸ ಮಾಡುತ್ತಿರುವವರು ಅಥವಾ ಮೊದಲ ಬಾರಿ ಉಪವಾಸ ಮಾಡುತ್ತಿರುವವರು ಆರೋಗ್ಯದ ಬಗ್ಗೆಯೂ ಗಮನ ನೀಡುವ ಅಗತ್ಯ ಇರುತ್ತದೆ.
ಏಕೆಂದರೆ ಸರಿಯಾದ ಸಮಯದಲ್ಲಿ ಆಹಾರ ಸೇವಿಸಿ ದೇಹ ಒಗ್ಗಿಕೊಂಡಿರುತ್ತದೆ. ಉಪವಾಸವಿದ್ದರೆ ಗ್ಯಾಸ್ಟ್ರಿಕ್, ಅಸಿಡಿಟಿ, ಸುಸ್ತು, ನಿರ್ಜಲೀಕರಣ, ತಲೆನೋವು ಕಾಡಬಹುದು. ಹೀಗಾಗಿ ಮೊದಲ ಬಾರಿ ಉಪವಾಸ ಮಾಡುತ್ತಿರುವವರು ಪಾಲಿಸಲೇಬೇಕಾದ ಪ್ರಮುಖ ಕ್ರಮಗಳ ಬಗ್ಗೆ ಇಲ್ಲಿದೆ ಮಾಹಿತಿ.
ಆಹಾರ ಸೇವನೆ ಮಾಡದೇ ಇದ್ದಾಗ ದೇಹ ಹೆಚ್ಚು ದಣಿಯುತ್ತದೆ. ಹೀಗಿದ್ದಾಗ ದೇಹಕ್ಕೆ ದ್ರವಾಂಶದ ಕೊರತೆಯಾಗದಂತೆ ನೋಡಿಕೊಳ್ಳಿ. ಆಗಾಗ ನೀರು, ಮಜ್ಜಿಗೆ, ಗಿಡಮೂಲಿಕೆಗಳ ಚಹಾ, ಹಣ್ಣಿನ ರಸವನ್ನು ಸೇವನೆ ಮಾಡುತ್ತಿರಿ. ಇದರಿಂದ ನಿರ್ಜಲೀಕರಣವಾಗದಂತೆ ತಡೆಯಬಹುದು. ಜತೆಗೆ ತಲೆನೋವು, ಸುಸ್ತು ಕಾಡುವುದಿಲ್ಲ. ಹಾಗೆಯೇ ಹಸಿವನ್ನು ನಿಯಂತ್ರಿಸಬಹುದು.
ಉಪವಾಸದ ಸಮಯದಲ್ಲಿ ಹಸಿವನ್ನು ನಿಯಂತ್ರಿಸಲು ಒಣಹಣ್ಣುಗಳು ಉತ್ತಮ. ಬಾದಾಮಿ, ಉತ್ತುತ್ತೆ, ಖರ್ಜೂರ, ಒಣಗಿದ ಬೆರ್ರಿ ಹಣ್ಣುಗಳು ಹಸಿವನ್ನು ನಿಯಂತ್ರಿಸಿ, ಪೋಷಕಾಂಶಗಳನ್ನು ಒದಗಿಸುತ್ತವೆ. ಹೀಗಾಗಿ ಶಿವರಾತ್ರಿಯಂದು ಮೊದಲ ಬಾರಿ ಉಪವಾಸ ಮಾಡುತ್ತಿದ್ದರೆ ಒಣಹಣ್ಣುಗಳನ್ನು ಜತೆಯಿಟ್ಟುಕೊಳ್ಳಿ.
ಹಸಿವೆಯಾಗದಿದ್ದರೂ ಕೆಲವೊಮ್ಮೆ ಬಾಯಿ ಚಪಲಕ್ಕಾಗಿ ಏನಾದರೂ ತಿನ್ನುತ್ತಿರುತ್ತೇವೆ. ಅದರಲ್ಲೂ ಉಪವಾಸ ಇದ್ದೇವೆ ಎಂದು ಪದೇ ಪದೇ ನೆನಪಿಸಿಕೊಂಡರೆ ತಿನ್ನುವ ಬಯಕೆ ಹೆಚ್ಚಾಗಬಹುದು. ಹೀಗಾಗಿ ಮನಸ್ಸನ್ನು ನಿಗ್ರಹದಲ್ಲಿಟ್ಟುಕೊಳ್ಳಿ. ಉಪವಾಸವಿದ್ದೇನೆ ಎನ್ನುವುದನ್ನು ಗಮನಿಸಲೇಬೇಡಿ. ಕೆಲಸದಲ್ಲಿ ತೊಡಗಿಕೊಳ್ಳಿ. ಪುಸ್ತಕಗಳನ್ನು ಓದಿ, ಧ್ಯಾನ ಮಾಡಿ.
ಮೊದಲ ಬಾರಿ ಕಟ್ಟುನಿಟ್ಟಿನ ಉಪವಾಸ ಮಾಡುವುದು ತುಸು ಕಷ್ಟದ ಕೆಲಸ. ಹೀಗಾಗಿ ಲಘು ಆಹಾರ ಸೇವನೆ ಮಾಡಿ. ಮೂಲಂಗಿಯನ್ನು ತುರಿದು ಮೊಸರಿಗೆ ಸೇರಿಸಿ ತಿನ್ನಬಹುದು, ಕ್ಯಾರೆಟ್, ಸೌತೆಕಾಯಿಯನ್ನೂ ಸೇವಿಸಬಹುದು. ಮಿತವಾಗಿ ಹಣ್ಣುಗಳನ್ನು ತಿನ್ನಬಹುದು. ಸಾಬುದಾನ ಕಿಚಡಿ, ಮೊಳಕೆ ಭರಿತ ಹೆಸರುಕಾಳು, ನೆಲಗಡಲೆಯನ್ನು ಲಘುವಾಗಿ ಸೇವಿಸಬಹುದು.
ಇಡೀ ದಿನ ಗಟ್ಟಿ ಆಹಾರ ತಿನ್ನದ ಕಾರಣ ರಾತ್ರಿ ಉಪವಾಸ ಮುರಿಯುವ ಸಂದರ್ಭದಲ್ಲಿ ಅತಿಯಾದ ಖಾರದ ಆಹಾರ ಅಥವಾ ಎಣ್ಣೆಯಲ್ಲಿ ಕರಿದ ತಿಂಡಿಗಳನ್ನು ತಿನ್ನಬೇಡಿ.
ರಾತ್ರಿ ಊಟ ಲಘುವಾಗಿರಲಿ.
ಖಾಲಿ ಹೊಟ್ಟೆಯಲ್ಲಿದ್ದಾಗಲೇ ಮೊದಲು ಒಂದು ಲೋಟ ತಣ್ಣಗಿನ ಹಾಲು ಕುಡಿಯಿರಿ, ಇದರಿಂದ ಅಸಿಡಿಟಿಯನ್ನು ತಡೆಯಬಹುದು.
ಊಟಕ್ಕಿಂತ 10 ನಿಮಿಷ ಮೊದಲು ಚಿಟಿಕೆ ಶುಂಠಿಯನ್ನು ಉಪ್ಪಿನೊಂದಿಗೆ ಬಾಯಿಗೆ ಹಾಕಿ ರಸ ಹೀರಿಕೊಳ್ಳಿ. ಇದು ಕೂಡ ಗ್ಯಾಸ್ಟ್ರಿಕ್, ಅಸಿಡಿಟಿ ಉಂಟಾಗದಂತೆ ತಡೆಯುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.