ADVERTISEMENT

ಗದಗದ ಗಜೇಂದ್ರಗಢ: ಕಿರು ಜಲಧಾರೆಗಳ ವೈಭವ

ಫಿರೋಜ ಡಿ.ಮೊಮೀನ್
Published 27 ಅಕ್ಟೋಬರ್ 2020, 12:16 IST
Last Updated 27 ಅಕ್ಟೋಬರ್ 2020, 12:16 IST
ಜಲಧಾರೆ (ಚಿತ್ರಗಳು: ಲೇಖಕರವು)
ಜಲಧಾರೆ (ಚಿತ್ರಗಳು: ಲೇಖಕರವು)   

ಮುಂಗಾರಿನ ಮಳೆ ಧರೆಗೆ ಮುತ್ತಿಡುತ್ತಿದ್ದಂತೆ ಪ್ರಕೃತಿಗೂ ಹೊಸ ಕಳೆ ಬರುತ್ತದೆ. ಬೆಟ್ಟ, ಅರಣ್ಯ ಪ್ರದೇಶವೆಲ್ಲ ಹಸಿರು ಹೊದ್ದುಕೊಂಡು ಕೈಬೀಸಿ ಕರೆಯುತ್ತವೆ. ಗುಡ್ಡಗಳ ಮೇಲಿರುವ ಬಂಡೆಗಳ ಸಂದುಗಳಿಂದ ಜಲಧಾರೆ ಧುಮ್ಮಿಕ್ಕುತ್ತಾ, ಕಿರು ಜಲಪಾತಗಳು ಸೃಷ್ಟಿಯಾಗುತ್ತವೆ. ತಿಂಗಳ ಹಿಂದಷ್ಟೇ ಒಣ ಒಣ ಎನ್ನುತ್ತಿದ್ದ ಪ್ರದೇಶಗಳು ಮಳೆ ಆರಂಭವಾದ ಕೂಡಲೇ ಪ್ರವಾಸಿ ತಾಣಗಳ ಸ್ವರೂಪ ಪಡೆದುಕೊಳ್ಳುತ್ತವೆ..!

ಗದಗ ಜಿಲ್ಲೆ ಗಜೇಂದ್ರಗಡ ಪಟ್ಟಣದ ಸುತ್ತಮುತ್ತಲಿನ ಬೆಟ್ಟಗಳಲ್ಲಿ ಈಗ ಅಂಥದ್ದೇ ವಾತಾವರಣ. ಎರಡು ಮೂರು ತಿಂಗಳ ಹಿಂದೆ ಒಣಗಿ ನಿಂತಿದ್ದ ಈ ಬೆಟ್ಟ–ಗುಡ್ಡಗಳೆಲ್ಲ ಹಸಿರು ಹೊದ್ದುಕೊಂಡಿವೆ. ಈ ಪಟ್ಟಣದಿಂದ ನಾಲ್ಕೈದು ಕಿ.ಮೀ ದೂರದಲ್ಲಿರುವ ಕಾಲಕಾಲೇಶ್ವರ ಬೆಟ್ಟದಲ್ಲಿ ಈಗ ಇಂಥದ್ದೇ ಕಿರು ಜಲಧಾರೆಗಳು ಧುಮ್ಮಿಕ್ಕುತ್ತಿವೆ.

ಪ್ರಕೃತಿ ಮಡಿಲಲ್ಲಿರುವ ದಕ್ಷಿಣ ಕಾಶಿ ಪ್ರಸಿದ್ಧಿಯ ಕಾಲಕಾಲೇಶ್ವರ ದೇವಸ್ಥಾನದಿಂದ ಕಣವಿ ವೀರಭದ್ರೇಶ್ವರ ದೇವಸ್ಥಾನದ ಮಾರ್ಗವಾಗಿ 5 ಕಿ.ಮೀವರೆಗೆ ಬೆಟ್ಟ, ಕಣಿವೆಗಳ ಮಧ್ಯೆ ಸಾಗುತ್ತಿದ್ದರೆ ಬೆಟ್ಟದ ಮೇಲೊಂದು ಬೆಟ್ಟ ಹತ್ತಿದಂತೆ ಭಾಸವಾಗುತ್ತದೆ. ಹಾಗೆ ಮುಂದೆ ನಡೆಯುತ್ತಿರುವಾಗ ಕೆಲವೇ ನಿಮಿಷಗಳಲ್ಲಿ ಬೈರಾಪುರ ತಾಂಡಾ ಸಿಗುತ್ತದೆ. ಅದರ ಸಮೀಪದಲ್ಲೇ ಈ ಕಿರು ಜಲಪಾತಗಳು ಕಾಣಿಸಿಕೊಳ್ಳುತ್ತವೆ. ಬಂಡೆಯ ಸಂದುಗಳಿಂದ ಧುಮ್ಮಿಕ್ಕುವ ಪುಟ್ಟ ಪುಟ್ಟ ಜಲಪಾತಗಳ ವೈಭವವನ್ನು ನೋಡುವುದೇ ಕಣ್ಣಿಗೆ ಹಬ್ಬ.

ADVERTISEMENT

ಬಿರು ಬೇಸಿಗೆಯಲ್ಲಿ ಬಿಸಿಲಿಗೆ ಎದೆಯೊಡ್ಡಿ ನಿಲ್ಲುವ ಕರಿ ಬಂಡೆಯ ಬೆಟ್ಟಗಳು ಈಗ ಇಂಥ ಜಲಧಾರೆಗಳಿಂದ ಕಂಗೊಳಿಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.