
ನಾಗಾಲೋಟದಿಂದ ಓಡುತ್ತಿದ್ದ ತೆರೆದ ಜೀಪು ಚಂಗನೆ ಎಗರಿ, ವೇಗದಿಂದ ಮುಂದೆ ಸಾಗುತ್ತಿತ್ತು. ಅದೊಂದು ಮರಳುಗಾಡು. ತಗ್ಗು ದಿಣ್ಣೆಗಳಲ್ಲಿ ಪಯಣ. ಮುಂದೆ ಆಳವಾದ ಮರಳಿನ ಹಳ್ಳ ಎದುರಾಯಿತು. ಜೀಪಿನ ಹಿಂಬದಿಯಲ್ಲಿ ನಿಂತಿದ್ದ ನಾನು ಇನ್ನೇನು ಭಯದಿಂದ ಕೂಗಬೇಕು, ಅಷ್ಟರಲ್ಲಿ ಜೀಪು ಹಳ್ಳಕ್ಕೆ ಧುಮುಕಿತು. ಭಯ ತುಂಬಿದ ನನ್ನ ಕೂಗು ಹರ್ಷೋದ್ಗಾರ ವಾಗಿ ಬದಲಾಯಿತು. ಅಷ್ಟೇ ವೇಗದಿಂದ ಜೀಪು ಆ ಹಳ್ಳದಿಂದ ಮೇಲೇರಿತು. ಹೃದಯವೇ ಬಾಯಿಗೆ ಬಂದಂತಹ ಅನುಭವ. ತಿರುವು ಮುರುವುಗಳಲ್ಲಿ ಓಲಾಡುತ್ತ ಆ ಜೀಪು ಸೂರ್ಯಾಸ್ತದ ಪಾಯಿಂಟ್ಗೆ ನನ್ನನ್ನು ತಲುಪಿಸಿತು. ಸ್ವಲ್ಪ ಹೊತ್ತಿನಲ್ಲೇ ಕಂಡ ಸೂರ್ಯಾಸ್ತ ರೋಮಾಂಚನಕಾರಿಯಾಗಿತ್ತು. ಅದು ಪ್ರವಾಸದ ಪ್ರಯಾಸವನ್ನು ನೀಗಿಸಿ, ಸಾರ್ಥಕಗೊಳಿಸಿತ್ತು. ಆಗ ನಾನು ನನ್ನ ಭಯವೊಂದನ್ನು ಜಯಿಸಿದ್ದೆ!
ತೆರೆದ ಜೀಪ್ಗಳಲ್ಲಿ ಹಿಂದೆ ನಿಂತು ಜನರು ಕೂಗುತ್ತ, ಕೇಕೆ ಹಾಕುತ್ತ ಜೀಪ್ ಸಫಾರಿ ಅಥವಾ ಡ್ಯೂನ್ ಬ್ಯಾಶಿಂಗ್ ಮಾಡುವುದು ಭೀತಿದಾಯಕ ಅನುಭವ ಇರಬಹುದು ಎಂದೆನ್ನಿಸುತ್ತಿತ್ತು. ಆ ಹೆದರಿಕೆಯನ್ನು ಹೋಗಲಾಡಿಸಿಕೊಳ್ಳಬೇಕು ಎಂಬ ಆಸೆ ಇತ್ತು. ಜೀವನ, ನಾಗಾಲೋಟದ ತಗ್ಗು ದಿಣ್ಣೆಗಳ ಏರಿಳಿತದ ಪ್ರವಾಸವಲ್ಲವೆ? ಅನೇಕ ಬಾರಿ ನಮ್ಮ ಅವ್ಯಕ್ತ ಭೀತಿಗಳು ನಮ್ಮನ್ನು ಮುಂದುವರಿಯದಂತೆ ತಡೆಯುತ್ತಿರುತ್ತವೆ. ಅವುಗಳನ್ನು ಮೀರುವುದು ಅಥವಾ ಬಿಡುವುದು ನಮ್ಮ ಕೈಯಲ್ಲೇ ಇದೆ.
ಹತ್ತಾರು ಪ್ರೇರಣದಾಯಕ ಲೇಖನಗಳನ್ನು, ಸುದ್ದಿಗಳನ್ನು ಓದಿದ್ದೇನೆ. ವಯಸ್ಸಾದವರು ಸಾಹಸ ಕ್ರೀಡೆಗಳಲ್ಲಿ ಭಾಗವಹಿಸುವುದು, ಹಿಮಾಲಯದ ಚಾರಣ ಮಾಡುವುದು, ಬಂಜಿ ಜಂಪಿಂಗ್, ಪ್ಯಾರಾ ಸೇಲಿಂಗ್ ಇತ್ಯಾದಿ ಚಟುವಟಿಕೆಗಳಲ್ಲಿ ಭಾಗವಹಿಸುವುದನ್ನು ನೋಡಿ ಅವರ ಬಗ್ಗೆ ಅಭಿಮಾನ ಮೂಡುತ್ತಿತ್ತು. ನಾನೂ ನನ್ನ ಕೆಲವು ಭೀತಿಗಳನ್ನು ಹೋಗಲಾಡಿಸಿಕೊಳ್ಳಬೇಕು ಎಂದು ಅನಿಸಿದ್ದು ಸುಳ್ಳಲ್ಲ. ಇತ್ತೀಚಿನ ನನ್ನ ರಾಜಸ್ಥಾನದ ಏಕಾಂಗಿ ಪ್ರವಾಸದಲ್ಲಿ ಅಂಥ ಅವಕಾಶ ಒದಗಿಬಂದಿತು.
ಜೈಪುರದಿಂದ ಆರಂಭವಾದ ಒಂಬತ್ತು ದಿನಗಳ ಪ್ರವಾಸ, ಮಾರವಾಡ ಮತ್ತು ಮೇವಾಡದ ಪುಷ್ಕರ್, ಅಜ್ಮೇರ್, ಉದಯಪುರ, ಜೋಧಪುರ, ಥಾರ್ ಮರುಭೂಮಿಯ ಡೆಸರ್ಟ್ ಸಫಾರಿ, ಜೈಸಲ್ಮೇರ್, ಅಂತಿಮವಾಗಿ ಬಿಕಾನೇರ್ನಲ್ಲಿ ಕೊನೆಗೊಂಡಿತು. ರಾಷ್ಟ್ರೀಯ ಸ್ಮಾರಕಗಳು, ಕೋಟೆ ಕೊತ್ತಲಗಳು, ಅರಮನೆಗಳು, ದೇವಾಲಯಗಳು, ನದಿಗಳು, ಗಿರಿ ವನಗಳು, ಕೊಳಗಳು, ಮರುಭೂಮಿ ಎಲ್ಲವೂ ಮನದಲ್ಲಿ ಹಚ್ಚ ಹಸಿರಾಗಿ ಉಳಿದಿವೆ. ನನ್ನ ಪ್ರವಾಸದುದ್ದಕ್ಕೂ ಅಲ್ಲಿನ ಸಂಸ್ಕೃತಿ, ಆಚಾರ ವಿಚಾರ, ರಾಜಕೀಯ ಪರಿಸ್ಥಿತಿ ಎಲ್ಲವನ್ನೂ ಚಾಲಕನ ಜೊತೆ ದಿನವೂ ಚರ್ಚಿಸುತ್ತಿದ್ದೆ.
ಒಂಟೆಗಳು, ಮರಳು ದಿಬ್ಬಗಳು, ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿ ನೃತ್ಯ ಪ್ರದರ್ಶಿಸುವ ಕಲಾವಿದರು, ಇತ್ಯಾದಿಗಳನ್ನು ಜೈಸಲ್ಮೇರ್ ಬಳಿಯ ಸೈಮ್ ಮರುಭೂಮಿಗೆ ಭೇಟಿ ನೀಡಿದಾಗ ಅಪೇಕ್ಷಿಸಿಯೇ ಇದ್ದೆ. ರಾಜಸ್ಥಾನ ಪ್ರವಾಸದ ಭಾಗವಾದ ಡೆಸರ್ಟ್ ಸಫಾರಿ, ಅನೇಕ ಕಾರಣಗಳಿಗೆ ಅಚ್ಚುಮೆಚ್ಚಿನದ್ದಾಗಿದೆ. ಮೇಲೆ ತಿಳಿಸಿದಂತೆ ಸೈಮ್ ಮರುಭೂಮಿಯಲ್ಲಿ ನನ್ನ ಜೀಪ್ ಸಫಾರಿಯ ಭೀತಿ ದೂರವಾಯಿತು.
ಒಂಟೆಯ ಮೇಲೆ ಕುಳಿತುಕೊಳ್ಳುವುದು ಯಾವಾಗಲೂ ನನಗೆ ಭಯದ ಅನುಭವ ಎನ್ನಿಸಿದ್ದುಂಟು. ಸೈಮ್ ಮರುಭೂಮಿಯ ಲಿಮ್ರಾ ಡೆಸರ್ಟ್ ಕ್ಯಾಂಪ್ನಲ್ಲಿ ಒಂದು ರಾತ್ರಿ ತಂಗಿದ್ದ ನಾನು, ಒಂಟೆ ಸವಾರಿಯ ಇಚ್ಛೆಯನ್ನು ಸಿಬ್ಬಂದಿ ಬಳಿ ಹೇಳಿದೆ. ಅದಕ್ಕೆ ಅವನು ಬೆಳಿಗ್ಗೆ ಆರು ಗಂಟೆಗೆ ಸಿದ್ಧವಾಗಿರಲು ತಿಳಿಸಿ, ಒಂಟೆ ಮೇಲೆ ಕರೆದೊಯ್ದು ಸೂರ್ಯೋದಯದ ದರ್ಶನ ಮಾಡಿಸುವುದಾಗಿ ಮಾತು ಕೊಟ್ಟ. ಒಂಟೆ ಸವಾರಿಯ ಕಲ್ಪನೆಯ ಸಂಭ್ರಮದಿಂದಾಗಿ ರಾತ್ರಿಯಿಡೀ ನಿದ್ದೆ ಮಾಡಲಿಲ್ಲ. ಹೇಗೋ ಏನೋ ಎಂಬ ಅಳುಕೂ ನನ್ನಲ್ಲಿತ್ತು. ಬೆಳಿಗ್ಗೆ ಐದೂವರೆಗೆ ತಯಾರಾಗಿ ಡೆಸರ್ಟ್ ಕ್ಯಾಂಪ್ನ ಸಿಬ್ಬಂದಿ ಬರುವ ಹಾದಿಯನ್ನೇ ಕಾಯುತ್ತಿದ್ದೆ. ನನಗೆ ಮಾತು ಕೊಟ್ಟಿದ್ದ ಆತ ಆರು ಗಂಟೆಗೆಲ್ಲ ತಯಾರಾಗಿ ಬಂದ.
ಜೀಪ್ನಲ್ಲಿ ಸ್ವಲ್ಪ ದೂರ ಹೋದ ಮೇಲೆ ಅಲ್ಲಿ ಜಿಪ್ಸಿ ಹುಡುಗರು ಒಂಟೆಗಳೊಂದಿಗೆ ಕುಳಿತಿದ್ದನ್ನು ಕಂಡೆ. ಸುಮಾರು ಹತ್ತು ವರ್ಷ ವಯಸ್ಸಿನ ಒಬ್ಬ ಜಿಪ್ಸಿ ಹುಡುಗ ನಮ್ಮನ್ನು ಕಂಡು ಮುಂದೆ ಬಂದ. ಜೀಪ್ನಿಂದ ಇಳಿದ ನನ್ನನ್ನು ಒಂಟೆಯೊಂದರ ಬಳಿ ಕರೆದೊಯ್ದ. ಅದು ಅತ್ತಿಂದಿತ್ತ ಮಿಸುಕಾಡಿ ಹೂಂಕರಿಸಿತು. ಅದನ್ನು ಕಂಡ ನನಗೆ ಒಂಟೆ ಸವಾರಿ ಸಹವಾಸವೇ ಬೇಡ ಎಂದೆನ್ನಿಸಿ, ಮರಳಿ ಕ್ಯಾಂಪ್ಗೆ ಹೋಗಬೇಕೆಂಬ ಇಚ್ಛೆ ತೀವ್ರವಾಯಿತು. ಕೈ ಕಾಲುಗಳು ನಡುಗಲಾರಂಭಿಸಿದ್ದವು. ನನ್ನೊಂದಿಗೆ ಬಂದ ಡೆಸರ್ಟ್ ಕ್ಯಾಂಪ್ನ ಸಿಬ್ಬಂದಿ, ‘ನೀವು ಮನಸ್ಸು ಮಾಡಿ ಇಷ್ಟು ದೂರ ಬಂದಿದ್ದೀರಿ, ಹೆದರಬೇಡಿ’ ಎಂದು ಹುರಿದುಂಬಿಸಿದ.
ಒಂಟೆ ಏರುವ ಕಾರ್ಯಕ್ರಮ ಶುರುವಾಯ್ತು. ಒಂಟೆ ನೆಲದಮೇಲೆ ಕುಳಿತಿತ್ತಾದರೂ, ಅದರ ಡುಬ್ಬ ನೆಲದಿಂದ ಸುಮಾರು ನಾಲ್ಕು ಅಡಿ ಎತ್ತರದಲ್ಲಿತ್ತು. ಹೇಗೋ ಕಸರತ್ತು ಮಾಡಿ ಸಿಬ್ಬಂದಿ ಮತ್ತು ಆ ಪುಟ್ಟ ಬಾಲಕನ ಸಹಾಯದಿಂದ ನನ್ನ ಭಾರೀ ಶರೀರವನ್ನು ಅದರ ಡುಬ್ಬದ ಮೇಲೆ ಸ್ಥಾಪಿಸಿದೆ. ಅದು ಮಿಸುಕಾಡಲಾರಂಭಿಸಿತು. ಆಗಿಂದಾಗಲೇ ಇಳಿದು ಓಡಬೇಕೆನಿಸಿತು. ಆ ಬಾಲಕ ಇನ್ನು ಒಂಟೆ ಏಳಲಿದೆಯೆಂದೂ, ನೀವು ಹಿಂದಕ್ಕೆ ಬಾಗಿ ಕುಳಿತುಕೊಳ್ಳಿರೆಂದು ಕಟ್ಟುನಿಟ್ಟಾಗಿ ಆಜ್ಞಾಪಿಸಿದ. ಅಕ್ಕಪಕ್ಕಕ್ಕೆ ಓಲಾಡುತ್ತ ಆ ಒಂಟೆ ಎದ್ದು ನಿಲ್ಲಲಾರಂಭಿಸಿತು. ಮರುಕ್ಷಣವೇ ಬೀಳಲಿರುವೆನೆಂಬ ಭಾವನೆ ನನಗೆ. ಅಂತೂ ಇಂತೂ ಆ ಒಂಟೆ ಎದ್ದು ನಿಂತಿತು. ಅದರ ಮೇಲೆ ಕುಳಿತುಕೊಳ್ಳುವುದೇ ಒಂದು ಹರಸಾಹಸವೆಂದು ಅನ್ನಿಸಲಾರಂಭಿಸಿತು.
ಬಳುಕುತ್ತ, ಓಲಾಡುತ್ತ ಮರಳಿನ ದಿಣ್ಣೆಗಳ ಮೇಲೆ ಹೆಜ್ಜೆಯಿಡುತ್ತ ಒಂಟೆ ಮುಂದೆ ಸಾಗಿದಂತೆಲ್ಲ ಮರಳುಗಾಡಿನ ಹಡಗು ಎಂಬ ಹೆಸರಿನ ಇನ್ನೊಂದು ಅರ್ಥ ಹೊಳೆಯಿತು. ಆಗ ಬೀಳಲಿರುವೆನೋ, ಈಗ ಬೀಳಲಿರುವೆನೋ ಎಂಬ ಭೀತಿಯಿಂದಲೇ ಜೀವ ಕೈಯಲ್ಲಿ ಹಿಡಿದು ಕಣ್ಣು ಮುಚ್ಚಿ ಕುಳಿತ ನನಗೆ, ‘ಸಾಮ್ನೆ ದೇಖೋ’ ಎಂದು ಆ ಬಾಲಕ ಕೂಗಿದಾಗಲೇ ಕಣ್ಣು ಬಿಟ್ಟಿದ್ದು. ಎದುರಿಗಿನ ಸೂರ್ಯೋದಯದ ನಯನ ಮನೋಹರ ದೃಶ್ಯ ನನ್ನ ಅಳುಕನ್ನು ಮರೆಸಿತು. ಆ ಬಾಲಕ ನನ್ನ ಮತ್ತು ಸೂರ್ಯೋದಯದ ಅನೇಕ ಫೋಟೊಗಳನ್ನು ಕ್ಲಿಕ್ಕಿಸಿದ. ಆ ಒಂಟೆ ಮೇಲೆ ಒಂದು ರೌಂಡ್ ಹೊಡಿಸಿಕೊಂಡು ಬಂದ ನಂತರ, ಹತ್ತಿದಷ್ಟೇ ಕಷ್ಟಪಟ್ಟು ಇಳಿಯುವ ಕಾರ್ಯಕ್ರಮವನ್ನು ಕೂಡ ನಡೆಯಿತು.
ಜೀಪ್ ಮತ್ತು ಒಂಟೆ ಸವಾರಿ ಮೇಲ್ನೋಟಕ್ಕೆ ಸಾಧಾರಣ ಎನ್ನಿಸಿದರೂ ನನ್ನ ಅವ್ಯಕ್ತ ಭೀತಿಯ ದ್ಯೋತಕ
ಗಳಾಗಿದ್ದವು. ಅಂತೆಯೇ ನನ್ನ ಏಕಾಂಗಿ ಪ್ರವಾಸ ಕೂಡ. ರಾಜಸ್ಥಾನದಾದ್ಯಂತ ಒಬ್ಬಳೇ ಸಂಚರಿಸಿದ ನನಗೆ ಎಲ್ಲೋ ಒಂದು ಕಡೆ ನನ್ನನ್ನು ನಾನೇ ಕಂಡುಕೊಳ್ಳುವಂತಾಯಿತು. ಅನೇಕ ಬಾರಿ ಮಹಿಳೆಯರಾದ ನಾವು ನಮ್ಮನ್ನು ನಾವೇ ಭೀತಿ ಎಂಬ ಸರಪಳಿಯಿಂದ ಕಟ್ಟಿ ಹಾಕಿಕೊಳ್ಳುತ್ತೇವೆ. ‘ನನ್ನಿಂದಲೇ ಸಂಸಾರ ನಡೆಯುತ್ತಿದೆ, ನಾನು ಸುತ್ತಲು ಹೊರಟರೆ ಸಂಸಾರದ ಗತಿ ಏನು’ ಎಂಬ ಭೀತಿ. ಏಕಾಂಗಿ ಪ್ರವಾಸ ಹೋಗುವುದಾ? ಜನರು, ಸಂಬಂಧಿಕರು ಏನೆಂದುಕೊಂಡಾರು ಎಂಬ ಭೀತಿ. ನಮ್ಮ ಆರಾಮದಾಯಕ ವಲಯದಿಂದ ಹೊರಬಾರದಂತೆ ಈ ಭೀತಿಗಳು ನಮ್ಮನ್ನು ತಡೆಯುತ್ತಿರುತ್ತವೆ. ಈ ಸರಪಳಿಯ ಬಂಧನವನ್ನು ನಾವೇ ಕಳಚಿಕೊಳ್ಳಬೇಕು. ಜಗತ್ತು ವಿಶಾಲವಾಗಿದೆ. ಅದರ ಆಳ ಅಗಲಗಳನ್ನು ನಮ್ಮ ಜೀವಿತಾವಧಿಯಲ್ಲಿ ಅಳೆಯುವುದು ಅಸಾಧ್ಯವಾದರೂ ಒಂದು ಕಿರು ಪ್ರಯತ್ನ ಮಾಡುವುದರಲ್ಲಿ ಸಮಸ್ಯೆಯೇನೂ ಇಲ್ಲ.
ನಾನು ನನ್ನ ಏಕಾಂಗಿ ಪ್ರವಾಸವನ್ನು ಮುಗಿಸಿಕೊಂಡು ಮನೆಗೆ ಮರಳಿದೆ. ನನ್ನಲ್ಲಿ ತುಂಬಿ ತುಳುಕುತಿದ್ದ ಆತ್ಮವಿಶ್ವಾಸವನ್ನು ಕಂಡ ಗಂಡ, ಮಗಳು ಚಕಿತರಾದರು. ನಾನು ನನ್ನ ಅನಗತ್ಯ ಭಯ–ಭೀತಿಯನ್ನು ಕಳೆದುಕೊಂಡಿದ್ದೆ!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.