ADVERTISEMENT

ಶಾಲಿನಿ ರಜನೀಶ್‌ ಕಥನ ತೆರೆಯ ಮೇಲೆ

​ಪ್ರಜಾವಾಣಿ ವಾರ್ತೆ
Published 2 ಜುಲೈ 2017, 19:30 IST
Last Updated 2 ಜುಲೈ 2017, 19:30 IST
ಶಾಲಿನಿ ರಜನೀಶ್‌
ಶಾಲಿನಿ ರಜನೀಶ್‌   

‘ಶಾಲಿನಿ ರಜನೀಶ್‌ ಅವರು ಕಟ್ಟುನಿಟ್ಟಿನ ಮತ್ತು ದಿಟ್ಟ ಅಧಿಕಾರಿ. ಅವರು ಎಲ್ಲೆಲ್ಲಿ ಕೆಲಸ ಮಾಡಿದ್ದಾರೋ ಅಲ್ಲೆಲ್ಲ ತಮ್ಮ ಹೆಜ್ಜೆ ಗುರುತುಗಳನ್ನು ಮೂಡಿಸಿಯೇ ಬಂದಿದ್ದಾರೆ’ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೊಗಳುತ್ತಿದ್ದರೆ ವೇದಿಕೆಯ ಮೇಲೆ ಕೂತಿದ್ದ ಶಾಲಿನಿ ಅವರ ಕಣ್ಣುಗಳಲ್ಲಿ ಧನ್ಯತೆಯ ಹೊಳಪು. ಅದೇನೂ ಸನ್ಮಾನ ಸಮಾರಂಭವಲ್ಲ, ಯಾವುದೋ ಪ್ರಶಸ್ತಿ ಪ್ರದಾನ ಕಾರ್ಯಕ್ರಮವೂ ಅಲ್ಲ. ಶಾಲಿನಿ ರಜನೀಶ್‌ ಅವರು ಬರೆದಿರುವ ‘ಡ್ರೀಮ್ಸ್‌ ಆಫ್‌ ಎ ಐ.ಎ.ಎಸ್‌ ಕಪಲ್‌’ ಎಂಬ ಪುಸ್ತಕ ಆಧರಿಸಿದ ‘ಶಾಲಿನಿ ಐ.ಎ.ಎಸ್‌’ ಸಿನಿಮಾದ ಮುಹೂರ್ತ ಸಂದರ್ಭದಲ್ಲಿ ಸಿದ್ದರಾಮಯ್ಯ ಮಾತನಾಡುತ್ತಿದ್ದರು.

‘ಸಿನಿಮಾ ಇಂದಿನ ಪೀಳಿಗೆಯ ಯುವಕರನ್ನು ತಲುಪಲು ಇರುವ ಪರಿಣಾಮಕಾರಿ ಮಾಧ್ಯಮ’ ಎಂದರು ಶಾಲಿನಿ. ಆರಂಭದಲ್ಲಿ ಅವರಿಗೆ ಈ ಚಿತ್ರದ ಶೀರ್ಷಿಕೆ ಅಷ್ಟೊಂದು ಹಿಡಿಸಿರಲಿಲ್ಲವಂತೆ. ಆದರೆ ಸಾಹಿತಿ ಬರಗೂರು ರಾಮಚಂದ್ರಪ್ಪ ಚರ್ಚಿಸಿ ಒಪ್ಪಿಸಿದ ಮೇಲೆ ಒಪ್ಪಿಕೊಂಡಿದ್ದಾರೆ.

(ಸೋನು ಗೌಡ)

ADVERTISEMENT

ರಾಷ್ಟ್ರಪ್ರಶಸ್ತಿ ವಿಜೇತ ‘ರಿಸರ್ವೇಶನ್‌’ ಸಿನಿಮಾ ನಿರ್ದೇಶಿಸಿದ್ದ ನಿಖಿಲ್‌ ಮಂಜು ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ‘ಸರ್ಕಾರಿ ಅಧಿಕಾರಿ ಸಮಾಜದ ಕಲ್ಯಾಣಕ್ಕಾಗಿ ಹೇಗೆ ಕೆಲಸ ಮಾಡಬಹುದು ಎಂಬುದನ್ನು ತೋರಿಸುವ ಪ್ರಯತ್ನ ಮಾಡುತ್ತಿದ್ದೇವೆ. ಈ ಸಿನಿಮಾ ಮಾಡುವಾಗ ಶಾಲಿನಿ ಅವರ ಪಾತ್ರಕ್ಕೆ ಯಾರನ್ನು ಆಯ್ಕೆ ಮಾಡಬೇಕು ಎಂಬ ಗೊಂದಲ ಅವರಿಗಿತ್ತಂತೆ. ಕೊನೆಗೆ ಆಯ್ಕೆಯಾಗಿದ್ದು ಸೋನು ಗೌಡ. ‘1992ರಲ್ಲಿ ಬಾಬ್ರಿ ಮಸೀದಿ ದ್ವಂಸ ತರುವಾಯ ಭಟ್ಕಳದಲ್ಲಿ ನಡೆದ ಗಲಭೆಯೂ ಸೇರಿದಂತೆ ಶಾಲಿನಿ ಅವರ ಅಧಿಕಾರಾವಧಿಯಲ್ಲಿ ನಡೆದ ಎಲ್ಲ ಮುಖ್ಯ ಘಟನೆಗಳನ್ನೂ ಸಿನಿಮಾ ಒಳಗೊಳ್ಳಲಿದೆ’ ಎಂದು ನಿಖಿಲ್‌ ಮಂಜು ಹೇಳಿದರು.

ಶಾಲಿನಿ ಪಾತ್ರಕ್ಕ ತಮ್ಮನ್ನು ಆಯ್ಕೆ ಮಾಡಿದ್ದಕ್ಕೆ ಸೋನು ಗೌಡ ಸಂತಸ ವ್ಯಕ್ತಪಡಿಸಿದರು. ‘ಇದನ್ನು ಒಂದು ಸವಾಲಾಗಿ ಸ್ವೀಕರಿಸಿ ಪಾತ್ರಕ್ಕೆ ಜೀವ ತುಂಬುವ ಎಲ್ಲ ಪ್ರಯತ್ನವನ್ನೂ ಮಾಡುತ್ತೇನೆ’ ಎಂದರು ಅವರು. ಅವರಿಗೆ ಜತೆಯಾಗಿ ರೋಜರ್‌ ನಾರಾಯಣ್‌ ನಟಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.