ADVERTISEMENT

ಸ್ಮರಣ ಶಕ್ತಿ ಹೆಚ್ಚಳ: ಉಚಿತ ಉಪನ್ಯಾಸ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2012, 19:30 IST
Last Updated 21 ಫೆಬ್ರುವರಿ 2012, 19:30 IST
ಸ್ಮರಣ ಶಕ್ತಿ ಹೆಚ್ಚಳ: ಉಚಿತ ಉಪನ್ಯಾಸ
ಸ್ಮರಣ ಶಕ್ತಿ ಹೆಚ್ಚಳ: ಉಚಿತ ಉಪನ್ಯಾಸ   

ಇದು ಪರೀಕ್ಷೆಗಳ ಪರ್ವಕಾಲ. ಫೆಬ್ರುವರಿ ಕಳೆದು ಮಾರ್ಚ್ ಬಂತೆಂದರೆ ಸಾಕು; ವಿದ್ಯಾರ್ಥಿಗಳಿಗಷ್ಟೇ ಅಲ್ಲ, ಅವರ ಪಾಲಕರಿಗೂ ಒತ್ತಡ. ನಮ್ಮ ಮಗ ಸರಿಯಾಗಿ ಓದುತ್ತಿಲ್ಲ ಅಥವಾ ಓದಿದ್ದನ್ನು ನೆನಪಿನಲ್ಲಿಟ್ಟುಕೊಳ್ಳುವುದಿಲ್ಲ ಎನ್ನುವ ದೂರು.

ಮಕ್ಕಳ ನೆನಪಿನ ಶಕ್ತಿ ಹೆಚ್ಚಿಸುವ, ಈ ಮೂಲಕ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುವ ಅತ್ಯುತ್ತಮ ತಂತ್ರಗಳನ್ನು ಮಕ್ಕಳಿಗೂ-ಪಾಲಕರಿಗೂ ತಿಳಿಸಿಕೊಡಲು ಇದೇ ಶನಿವಾರ (ಫೆ.25) ಸಂಜೆ 5.30ಕ್ಕೆ ಉಚಿತ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲಾಗಿದೆ. ಉಪನ್ಯಾಸಕ್ಕೆ ವಿದ್ಯಾರ್ಥಿಗಳು, ಪಾಲಕರು, ಶಿಕ್ಷಕರು ಹಾಜರಾಗಬಹುದು.

ಮೆದುಳಿನ ವೈಶಿಷ್ಟ್ಯ
ಓದಿದ್ದನ್ನು, ನೋಡಿದ್ದನ್ನು ನಮ್ಮ ಮೆದುಳು ನೆನಪಿಟ್ಟುಕೊಳ್ಳುವ ಕ್ರಮವೊಂದಿದೆ. ನಮಗೆ ಹೆಚ್ಚು ಆಸಕ್ತಿ ಇರುವ ವಿಷಯಗಳು ಸಹಜವಾಗಿ ಬೇಗ ನೆನಪಿನ ಭಂಡಾರ ಸೇರುತ್ತವೆ. ಆದರೆ, ಮೆದುಳಿನ ಈ ಕ್ರಮವನ್ನೇ ಸೂಕ್ತ ತಂತ್ರಗಳ ಮೂಲಕ ಇನ್ನಷ್ಟು ಸಬಲಗೊಳಿಸಬಹುದು ಎನ್ನುತ್ತಾರೆ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮೈಂಡ್ ಡೈನಾಮಿಕ್ಸ್ ಸಂಸ್ಥೆಯ ಸಂಸ್ಥಾಪಕ ಕೃಷ್ಣ. ಸಾಮಾನ್ಯವಾಗಿ ಮೆದುಳು ಪಂಚೇಂದ್ರಿಯಗಳಿಂದ ವಿಷಯಗಳನ್ನು ಗ್ರಹಿಸುತ್ತದೆ.

ಹೀಗೆ ಗ್ರಹಿಸಿದ ಸಂಗತಿಗಳನ್ನು ನಮ್ಮ ಆದ್ಯತೆಯ ಪ್ರಕಾರ ವಿವಿಧ ನೆನಪಿನ ಕೋಶಗಳಲ್ಲಿ ದಾಖಲಿಸುತ್ತದೆ. ಅಲ್ಪಾವಧಿ ಹಾಗೂ ದೀರ್ಘಾವಧಿ ನೆನಪುಗಳು ರೂಪುಗೊಳ್ಳುವುದು ಹೇಗೆ? ಮಾಹಿತಿ ಸಂಗ್ರಹಣೆಯಲ್ಲಿ ಏಕಾಗ್ರತೆಯ ಕೊರತೆ ಇದ್ದಾಗ ಸಹಜವಾಗಿ ದೀರ್ಘಾವಧಿ ನೆನಪಿನ ಕೋಶದಲ್ಲಿ ಆ ಮಾಹಿತಿ ಸ್ಪಷ್ಟವಾಗಿ ದಾಖಲಾಗಿರುವುದಿಲ್ಲ. ಇದರ ಹೊರತಾಗಿಯೂ, ಅನ್ಯಮನಸ್ಕತೆ, ನಿರಾಸಕ್ತಿ, ಒತ್ತಡ ಮುಂತಾದ ಅನೇಕ ಕಾರಣಗಳಿಂದಾಗಿಯೂ ದೀರ್ಘಾವಧಿ ನೆನಪಿನ ಶಕ್ತಿ ಕೈಕೊಡುವುದು ಸಾಮಾನ್ಯ. ಇವೆಲ್ಲ ಸಮಸ್ಯೆಗಳಿಗೆ ಕೃಷ್ಣ ಅವರು ಇದೇ ಶನಿವಾರ ಉಚಿತ ಉಪನ್ಯಾಸದಲ್ಲಿ ಪರಿಹಾರ ತಿಳಿಸಿಕೊಡಲಿದ್ದಾರೆ.

ನೆನಪಿಟ್ಟುಕೊಳ್ಳುವುದು ಹೇಗೆ?
ಈ ಪ್ರಶ್ನೆ ಕೂಡ ಎಲ್ಲರನ್ನೂ ಕಾಡುತ್ತದೆ. ಅನೇಕ ತಂದೆ-ತಾಯಂದಿರು ನನ್ನ ಮಗ/ಮಗಳು ತುಂಬಾ ಓದುತ್ತಾರೆ. ಆದರೆ, ಓದಿದ್ದು ಎಷ್ಟೋ ಸಲ ನೆನಪಿನಲ್ಲೇ ಉಳಿಯುವುದಿಲ್ಲ ಎಂದು ವೈದ್ಯರು, ಶಿಕ್ಷಕರು ಹಾಗೂ ತಜ್ಞರ ಹತ್ತಿರ ದೂರುವುದು ಸಾಮಾನ್ಯ. ಆದರೆ, ಓದಿದ್ದನ್ನು, ನೋಡಿದ್ದನ್ನು ಸರಿಯಾಗಿ ನೆನಪಿಟ್ಟುಕೊಳ್ಳುವುದೂ ಒಂದು ತಂತ್ರ. ಅದೊಂದು ಕಲೆ. ಏಕಾಗ್ರತೆಯೊಂದೇ ಅಲ್ಲ, ಓದುವ ಹಾಗೂ ನೋಡುವ ವಿವರಗಳನ್ನು ಒಂದು ಅನುಕ್ರಮದಲ್ಲಿ, ಒಂದಕ್ಕೊಂದು ಪೂರಕವಾಗಿರುವಂತೆ, ಸಂಬಂಧ ಹೊಂದಿರುವಂತೆ ಗ್ರಹಿಸುವುದೂ ಅವಶ್ಯಕ.

ಸ್ಥಳ:  ಇಂಡಿಯನ್ ಇನ್ಸಿಟ್ಯೂಟ್ ಆಫ್ ಮೈಂಡ್ ಡೈನಾಮಿಕ್ಸ್, ನಂ: 49-50, 50 ಅಡಿ ರಸ್ತೆ, 2ನೇ ಮಹಡಿ, ಎಸ್‌ಜಿಎಸ್ ಆರ್ಕೇಡ್, ನಿರ್ಮಲಾ ಬಸ್‌ಸ್ಟಾಪ್ ಹತ್ತಿರ, ಹನುಮಂತನಗರ.  ಮಾಹಿತಿಗೆ: 98867 03172, 95389 97462. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.