ADVERTISEMENT

ಹತ್ತು ರೂಪಾಯಿಗೊಂದು ಪುಸ್ತಕ

​ಪ್ರಜಾವಾಣಿ ವಾರ್ತೆ
Published 2 ಜನವರಿ 2012, 19:30 IST
Last Updated 2 ಜನವರಿ 2012, 19:30 IST

ಭಾರತೀಯ ವಿದ್ಯಾಭವನದ `ಒಂದು ರೂಪಾಯಿ ಮಾಲಿಕೆ~ಯ ರಾಷ್ಟ್ರೀಯ ಚಿಂತಕರ ಪುಸ್ತಕಗಳು ಈಗ ಕನ್ನಡಕ್ಕೆ ಭಾಷಾಂತರವಾಗಿದ್ದು, ಮೊದಲ 25 ಪುಸ್ತಕಗಳ ಕಂತು  ಮಂಗಳವಾರ (ಜ.3)ದಂದು ಲೋಕಾರ್ಪಣೆಯಾಗಲಿವೆ.

ಈ ಕೃತಿಗಳು ಭಾರತೀಯ ವಿದ್ಯಾಭವನದ ಕೊಡುಗೆಗಳು. ಅರ್ಧ ಶತಮಾನದ ಹಿಂದೆ ಭಾರತೀಯ ವಿದ್ಯಾಭವನದ ಸಂಸ್ಥಾಪಕ- ಕುಲಪತಿ ಡಾ.ಕೆ.ಎಂ.ಮುನ್ಶಿ ಜನಸಾಮಾನ್ಯರಿಗೆ ಭಾರತೀಯ ಸಂಸ್ಕೃತಿಯ ವಿವಿಧ ಅಂಶಗಳನ್ನು ಪರಿಚಯ ಮಾಡಿಕೊಡುವ ದೃಷ್ಟಿಯಿಂದ `ಒಂದು ರೂಪಾಯಿ ಮಾಲಿಕೆ~ ಹಾಗೂ `ಪುಸ್ತಕ ವಿಶ್ವವಿದ್ಯಾಲಯ ಮಾಲಿಕೆ~ ಪ್ರಾರಂಭಿಸಿ ಅಂದಿನ ಪ್ರಸಿದ್ಧ ಚಿಂತಕ- ಬರಹಗಾರರಿಂದ 100ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆಸಿ, ಪ್ರಕಟಿಸಿದರು. ಈ ಮಾಲಿಕೆಯ ಪುಸ್ತಕಗಳ ಸರಳ ಶೈಲಿ, ಉನ್ನತ ವಿಚಾರ ಓದುಗರನ್ನು ಆಕರ್ಷಿಸಿದ್ದು, ಅವುಗಳಲ್ಲಿ ಬಹುತೇಕ ಪುಸ್ತಕಗಳು ಪುನರ್‌ಮುದ್ರಣಗೊಂಡಿವೆ.

ಭಾರತೀಯ ವಿದ್ಯಾಭವನದ ಅಧ್ಯಕ್ಷ ಎನ್. ರಾಮಾನುಜ ಈ ಪುಸ್ತಕಗಳನ್ನು ಕನ್ನಡಕ್ಕೆ ತರುವ ಯೋಜನೆಯನ್ನು ಸಿದ್ಧಪಡಿಸಿದಾಗ, ಕುವೆಂಪು ಭಾಷಾ ಪ್ರಾಧಿಕಾರ ಅದನ್ನು ಪ್ರಕಟಿಸಲು ಆಸಕ್ತಿ ವಹಿಸಿತು. ಪ್ರಾಧಿಕಾರದ ಅಧ್ಯಕ್ಷ ಡಾ. ಪ್ರಧಾನ ಗುರುದತ್ತ ಅವರು ಪ್ರಧಾನ ಸಂಪಾದಕರಾಗಿ, ಭಾರತೀಯ ವಿದ್ಯಾಭವನದ ಮೈಸೂರು ಕೇಂದ್ರದ ಅಧ್ಯಕ್ಷ ಡಾ.ಎ.ವಿ. ನರಸಿಂಹಮೂರ್ತಿ ಸಂಪಾದಕರಾಗಿ ಹೊಣೆಹೊತ್ತು ಕನ್ನಡದಲ್ಲಿ ಈ ಪುಸ್ತಕಗಳನ್ನು ಪ್ರಕಟಿಸುತ್ತಿದ್ದಾರೆ.

ದೇ.ಜವರೇಗೌಡ, ನೀಲತ್ತಳಿ ಕಸ್ತೂರಿ, ಸಿ.ಪಿ. ಕಷ್ಣಕುಮಾರ್, ಟಿ.ವಿ. ವೆಂಕಟಾಚಲ ಶಾಸ್ತ್ರಿ ಮೊದಲಾದ ಖ್ಯಾತ ಬರಹಗಾರರು ಅನುವಾದಿಸಿರುವ 25 ಪುಸ್ತಕಗಳ ಮೊದಲ ಕಂತು ಸಿದ್ಧವಾಗಿದೆ. ಬೆಂಗಳೂರು ಭಾರತೀಯ ವಿದ್ಯಾಭವನದ ಖಿಂಚಾ ಸಭಾಂಗಣದಲ್ಲಿ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಪುಸ್ತಕಗಳನ್ನು ಲೋಕಾರ್ಪಣೆ ಮಾಡುವರು. ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ಪ್ರತಿ ಪುಸ್ತಕಕ್ಕೆ ಕೇವಲ ಹತ್ತು ರೂಪಾಯಿ ಬೆಲೆ ನಿಗದಿಪಡಿಸಿದೆ.

ಮೊದಲ ಕಂತಿನ ಪುಸ್ತಕಗಳು...
ಗಾಂಧೀಜಿ ಅರ್ಥಶಾಸ್ತ್ರ- ಅನುವಾದ: ಪ್ರೊ.ದೇ. ಜವರೇಗೌಡ ( ಮೂಲ- ಕೆ. ವಾಸುದೇವನ್), ಗಾಂಧೀಜಿ - ವ್ಯಕ್ತಿತ್ವ ಮತ್ತು ಜೀವನ ಧ್ಯೇಯ- ನೀಲತ್ತಹಳ್ಳಿ ಕಸ್ತೂರಿ (ಎನ್.ಕೆ.ಬೋಸ್), ಬ್ರಿಟಿಷ್ ಸಾಮ್ರೋಜ್ಯವಾದ ಮತ್ತು ಭಾರತೀಯ ರಾಷ್ಟ್ರೀಯತೆ - ಎ.ಆರ್. ರಂಗರಾವ್ (ಕೆ. ಸಂತಾನಂ),

ಕಾಯಕ ಸಿದ್ಧಾಂತ -ನಯನಾ ಕಾಶ್ಯಪ್ (ಸ್ವಾಮಿ ರಾಮತೀರ್ಥ), ಭಾರತದ ಅಮೂಲ್ಯ ಪರಂಪರೆ - ಬಿ.ಎಸ್. ರುಕ್ಕಮ್ಮ (ಎನ್. ಎ. ಪಾಲ್ಕಿವಾಲ), ಕೆಲವು ಪ್ರಜ್ಞಾವಸ್ಥೆಗಳು  - ಸಿ.ಪಿ. ಕಷ್ಣಕುಮಾರ್ (ಆರ್. ಆರ್. ದಿವಾಕರ್), ನಮ್ಮ ಧರ್ಮ-ಹುರಗಲವಾಡಿ ಲ.ನ. ಶಾಸ್ತ್ರಿ (ಚಂದ್ರಶೇಖರ ಭಾರತೀ ಸ್ವಾಮಿಗಳು), ಭಾಷೆ ಆಧಾರದ ಮೇಲೆ ಭಾರತದ ಛಿದ್ರತೆ - ಎಂ.ಎಸ್. ವೆಂಕಟರಾಮಯ್ಯ (ವಿ.ಜಿ. ಕಾಮತ್),

ಸತ್ಯಾನ್ವೇಷಣೆಗೆ ಉತ್ತರ -ವತ್ಸಲಾ ಅಯ್ಯಂಗಾರ್ (ರೇ.ಹೌಸರ್‌ಮನ್), ಹಿಂದೂಶಾಸ್ತ್ರಗಳು ಮತ್ತು ಸಂಸ್ಕಾರಗಳು - ಎಚ್.ಎಲ್. ಚಂದ್ರಶೇಖರ (ವಿ.ಎ.ಕೆ. ಅಯ್ಯರ್), ಹಿಂದೂ ಆದರ್ಶಗಳು- ಟಿ.ಎಸ್. ವೆಂಕಣ್ಣಯ್ಯ (ಕೆ.ಬಾಲಸುಬ್ರಹ್ಮಣ್ಯ ಐಯ್ಯರ್), ಕಾನೂನು ಮತ್ತು ಸಂಸ್ಕೃತಿ - ಸಿ.ಕೆ.ಎನ್. ರಾಜ (ಎಂ.ಸಿ. ಸೆಟಲ್‌ವಾಡ್), ವೈಧಿಕ ಧರ್ಮದಲ್ಲಿ ಆತ್ಮ ಮತ್ತು ಬ್ರಹ್ಮ - ಎಚ್.ವಿ. ನಾಗರಾಜರಾವ್ (ಜಯಚಾಮರಾಜ ಒಡೆಯರ್), ನಮ್ಮ ಮಾತೃಭೂಮಿ - ಟಿ.ವಿ. ವೆಂಕಟಾಚಲಶಾಸ್ತ್ರಿ (ಸ್ವಾಮಿ ವಿವೇಕಾನಂದ), ಕ್ರಾಂತಿಕಾರಕ ಸರ್ವೋದಯ - ಶಂಸ ಐತಾಳ (ಆಚಾರ್ಯ ವಿನೋಬಾ ಭಾವೆ), ಭಾರತದ ಚರಿತ್ರೆಯಲ್ಲಿ ಭೌಗೋಳಿಕ ಅಂಶಗಳು - ಕೆ.ಎನ್. ಸುಬ್ಬನರಸಿಂಹಯ್ಯ (ಕೆ.ಎಂ. ಪಣಿಕ್ಕರ್), ಶ್ರೇಷ್ಠ ಚೈತನ್ಯಗಳ ವೈಭವ ಶ್ರೇಣಿ : 3 - ಗಿರಿಜಾ ಶಾಸ್ತ್ರಿ (ವಿವಿಧ ಲೇಖಕರು),

ಜ್ಞಾನದೇವನ ಬೋಧನೆಗಳು - ಜಿ.ಕೆ. ರವೀಂದ್ರ ಕುಮಾರ್ (ಎಸ್.ಆರ್. ಶರ್ಮ), ಭಾರತ ಮತ್ತು ಶೀತ ಸಮರ - ಚಂದ್ರಮೋಹನರಾವ್ (ಕೆ.ಪಿ.ಎಸ್. ಮೆನನ್), ಶ್ರೇಷ್ಠ ಚೇತನಗಳ ವೈಭವ : 2 - ವಿ.ಟಿ.ಎಸ್. ಲಲಿತ (ವಿವಿಧ ಲೇಖಕರು), ಶ್ರೀ ವಿದ್ಯೆಯ ಸಾರ - ಪ್ರೊ. ಎ.ವಿ. ನರಸಿಂಹಮೂರ್ತಿ (ಚಾಗಂಟಿ ಸೂರ್ಯನಾರಾಯಣ ಮೂರ್ತಿ), ಅನಂತ ಸೇವಂತಿ -ಡಿ.ರೈ. ದ ಕಡೆಗೆ ಚಿಂತನೆ -(ಯೋಗೇಶ್ವರ್), ತುಕಾರಾಮರ ಬೋಧನೆಗಳು - ಡಿ.ಎನ್. ವೀಣಾ (ಎಸ್.ಆರ್. ಶರ್ಮ), ಮಾರ್ಗವಿಲ್ಲದ ಮಾರ್ಗ - ವಸುಧಾ ಮೂರ್ತಿ (ಸ್ವಾಮಿ ರಾಮದಾಸ್)

ಎಲ್ಲ ಧರ್ಮಗಳ ಸಾರವೂ ಒಂದೇ - ಪ್ರೊ. ಎ.ವಿ. ನರಸಿಂಹ ಮೂರ್ತಿ (ಎನ್.ಎ. ಪಾಲ್ಕೀವಾಲಾ).

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT