ADVERTISEMENT

Fact Check: ಎಎಪಿ ಸರ್ಕಾರ ಕಸದಬುಟ್ಟಿಯ ಜಾಹೀರಾತು ನೀಡಿದ್ದು ನಿಜವೇ?

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2021, 16:09 IST
Last Updated 4 ಆಗಸ್ಟ್ 2021, 16:09 IST
   

'ದೆಹಲಿಯ ಕೀರ್ತಿನಗರ ಕೈಗಾರಿಕಾ ಪ್ರದೇಶದಲ್ಲಿ 10 ಹೊಸ ಕಸದಬುಟ್ಟಿಗಳನ್ನು ಅಳವಡಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಅಭಿನಂದನೆಗಳು' ಎಂಬ ಜಾಹೀರಾತು ಫಲಕ ಇರುವ ಚಿತ್ರವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 'ಕಸದ ಬುಟ್ಟಿ ಅಳವಡಿಸಿದ್ದಕ್ಕೂ ಎಎಪಿ ಸರ್ಕಾರ ಜಾಹೀರಾತು ನೀಡುತ್ತಿದೆ. ಕಸದಬುಟ್ಟಿಗಿಂತ ಜಾಹೀರಾತಿಗೆ ಹೆಚ್ಚು ಖರ್ಚಾಗುತ್ತಿದೆ' ಎಂದು ಬಿಜೆಪಿಯ ಹಲವು ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸಿದ್ದಾರೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಮಾಧ್ಯಮ ಸಲಹೆಗಾರ ಶಲಭಾ ಮಣಿ ತ್ರಿಪಾಠಿ, ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಕಾರ್ಯದರ್ಶಿ ತಜಿಂದರ್ ಪಾಲ್ ಸಿಂಗ್ ಬಗ್ಗಾ ಮತ್ತು ದೆಹಲಿ ಬಿಜೆಪಿ ಐಟಿ ಘಟಕದ ಮುಖ್ಯಸ್ಥ ನವೀನ್ ಕುಮಾರ್ ಜಿಂದಾಲ್ ಅವರು ಈ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ.

ಇದು ಸುಳ್ಳು ಸುದ್ದಿ ಎಂದು ದಿ ಲಾಜಿಕಲ್ ಇಂಡಿಯನ್ಫ್ಯಾಕ್ಟ್‌ಚೆಕ್ಪ್ರಕಟಿಸಿದೆ. 'ಕೋವಿಡ್‌ನಿಂದ ಮೃತಪಟ್ಟವರ ಕುಟುಂಬಗಳಿಗೆ ಆರ್ಥಿಕ ನೆರವು ನೀಡಿದ್ದರ ಬಗ್ಗೆ ದೆಹಲಿ ಮೆಟ್ರೊ ನಿಲ್ದಾಣಗಳಲ್ಲಿ ದೆಹಲಿ ಸರ್ಕಾರವು ಜಾಹೀರಾತು ಫಲಕದ ಮೂಲಕ ಜಾಹೀರಾತು ನೀಡಿದೆ. ಆ ಜಾಹಿರಾತಿನಲ್ಲಿರುವ ಅರವಿಂದ ಕೇಜ್ರಿವಾಲ್ ಅವರ ಚಿತ್ರವನ್ನು ಬಳಸಿಕೊಂಡು ಕಸದಬುಟ್ಟಿ ಅಳವಡಿಸಿದ್ದಕ್ಕೆ ಅಭಿನಂದನೆ ಸಲ್ಲಿಸುತ್ತಿರುವ ರೀತಿಯಲ್ಲಿ ಪಠ್ಯವನ್ನು ಬದಲಿಸಲಾಗಿದೆ. ಚಿತ್ರವನ್ನು ಸಂಪೂರ್ಣವಾಗಿ ತಿರುಚಿ, ಸುಳ್ಳು ಸುದ್ದಿ ಪ್ರಕಟಿಸಲಾಗಿದೆ. ಬಿಜೆಪಿಯ ತಜಿಂದರ್ ಪಾಲ್ ಸಿಂಗ್ ಬಗ್ಗಾ ಅವರು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದ ಈ ಸುಳ್ಳು ಸುದ್ದಿಯನ್ನು ಫೇಸ್‌ಬುಕ್ ತೆಗೆದುಹಾಕಿದೆ' ಎಂದು ದಿ ಲಾಜಿಕಲ್ ಇಂಡಿಯನ್ ವಿವರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT