ADVERTISEMENT

ಜೈ ಶ್ರೀರಾಂ ಎಂದು ಕೂಗಿ ಮಮತಾ ಬ್ಯಾನರ್ಜಿಗೆ ಸ್ವಾಗತ?;ಎಡಿಟ್ ಮಾಡಿದ ವಿಡಿಯೊ ವೈರಲ್

​ಪ್ರಜಾವಾಣಿ ವಾರ್ತೆ
Published 29 ಮೇ 2019, 16:56 IST
Last Updated 29 ಮೇ 2019, 16:56 IST
   

ಬೆಂಗಳೂರು: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಜೈಶ್ರೀರಾಂಎಂಬ ಘೋಷಣೆಯೊಂದಿಗೆ ಸ್ವಾಗತಿಸಲಾಗಿದೆ.ಈ ಘಟನೆ ನಡೆದದ್ದು ಕೋಲ್ಕತ್ತ ರಾಜಭವನದ ಹೊರಗೆ ಎಂಬ ಬರಹದೊಂದಿಗೆ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಉಡುಪಿ- ಚಿಕ್ಕಮಗಳೂರು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಸೇರಿದಂತೆ ಹಲವಾರು ಟ್ವೀಟಿಗರು ಈ ವಿಡಿಯೊವನ್ನು ಟ್ವೀಟ್ ಮಾಡಿದ್ದಾರೆ.

ಫೇಕ್ ನ್ಯೂಸ್ ವೆಬ್‌ಸೈಟ್ ಪೋಸ್ಟ್ ಕಾರ್ಡ್ ಸಂಸ್ಥಾಪಕ ಮಹೇಶ್ ವಿಕ್ರಂ ಹೆಗಡೆ ಕೂಡಾ ಇದೇ ವಿಡಿಯೊವನ್ನು ಟ್ವೀಟಿಸಿದ್ದಾರೆ.

ADVERTISEMENT

ಟ್ವಿಟರ್‌ನಲ್ಲಿ ಮಾತ್ರವಲ್ಲ ಫೇಸ್‌ಬುಕ್‌ನಲ್ಲಿಯೂ ಮಮತಾ ಅವರ ವಿಡಿಯೊ ಶೇರ್ ಆಗಿದೆ.ಪೋಸ್ಟ್‌ಕಾರ್ಡ್ ವೆಬ್‌ಸೈಟ್‌ ಸಹ ಸಂಸ್ಥಾಪಕ ವಿವೇಕ್ ಶೆಟ್ಟಿ ಮೇ 28ರಂದು ಈ ವಿಡಿಯೊ ಶೇರ್ ಮಾಡಿದ್ದು6900 ಬಾರಿ ಶೇರ್ ಆಗಿದೆ.

ಈ ವೈರಲ್ವಿಡಿಯೊ ಬಗ್ಗೆ ಆಲ್ಟ್‌ನ್ಯೂಸ್ ಫ್ಯಾಕ್ಟ್‌ಚೆಕ್ ಮಾಡಿಇದು ಎಡಿಟೆಡ್ ವಿಡಿಯೊ ಎಂದು ವರದಿ ಮಾಡಿದೆ.

ಫ್ಯಾಕ್ಟ್‌ಚೆಕ್
ಮಮತಾ ಬರುವಾಗ ಜೈ ಶ್ರೀರಾಂ ಎಂಬ ಘೋಷಣೆ ಕೂಗಿ ಸ್ವಾಗತಿಸಲಾಗಿದೆ ಎಂದು ಹೇಳುತ್ತಿರುವ ಈ ವೈರಲ್ ವಿಡಿಯೊ ಸ್ವಲ್ಪ ಹಳೇದು. ನಿಜವಾದ ವಿಡಿಯೊವನ್ನು ಇಂಡಿಯಾ ಟುಡೇ ಸುದ್ದಿಸಂಸ್ಥೆಯ ಪತ್ರಕರ್ತ ಇಂದ್ರಜಿತ್ ಖುಂಡು ಅಪ್‌ಲೋಡ್ ಮಾಡಿದ್ದರು.ಈ ವಿಡಿಯೊದಲ್ಲಿ ಜೈ ಶ್ರೀರಾಂ ಘೋಷಣೆಯ ದನಿ ಸೇರಿಸಿ ಎಡಿಟ್ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಯ ಬಿಡಲಾಗಿದೆ.

ನಿಜವಾದ ವಿಡಿಯೊದಲ್ಲಿ ಏನಿದೆ?
ಇಂದ್ರಜಿತ್ ಅವರು 2019 ಫೆಬ್ರುವರಿ 1 ರಂದು ಟ್ವಿಟರ್‌ನಲ್ಲಿ ಶೇರ್ ಮಾಡಿದ ವಿಡಿಯೊ ಇದಾಗಿದೆ. ಇದರಲ್ಲಿ ಮಮತಾ ಬ್ಯಾನರ್ಜಿ ಬಂಗಾಳದ ಬಿಜೆಪಿ ಮುಖ್ಯಸ್ಥ ದಿಲೀಪ್ ಅವರಲ್ಲಿ ಕ್ಷೇಮ ಸಮಾಚಾರ ವಿಚಾರಿಸುತ್ತಿದ್ದಾರೆ.ಈ ಮಾತುಕತೆ ನಡೆದದ್ದು ಪಶ್ಚಿಮ ಬಂಗಾಳದ ವಿಧಾನಸಭೆಯಲ್ಲಾಗಿತ್ತು, ರಾಜ್ ಭವನದಲ್ಲಿ ಅಲ್ಲ.

ಇಲ್ಲಿರುವ ವಿಡಿಯೊ 11 ಸೆಕೆಂಡ್ ಅವಧಿಯದ್ದಾಗಿದ್ದು, ಮಮತಾ ಅವರು ದಿಲೀಪ್ ಘೋಷ್ ಅವರಲ್ಲಿ ದಿಲೀಪ್ ಬಾಬು ನೀವು ಚೆನ್ನಾಗಿದ್ದೀರಾ?ಎಂದು ಕೇಳಿದ್ದಾರೆ. ಅದಕ್ಕೆ ಘೋಷ್ ಅವರು ನಾನು ಚೆನ್ನಾಗಿದ್ದೀನಿ ಮೇಡಂ ಎಂದು ಉತ್ತರಿಸಿದ್ದಾರೆ.

ವೈರಲ್ ಆಗಿದ್ದು ಎಡಿಟ್ ಮಾಡಿದ ವಿಡಿಯೊ
2019 ಮೇ ತಿಂಗಳ ಆದಿಯಲ್ಲಿ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಆರಂಭಾಗ್ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರಕ್ಕೆ ಹೋದಾಗ ಅಲ್ಲಿ ರಸ್ತೆ ಬದಿಯಲ್ಲಿದ್ದ ಜನರ ಗುಂಪೊಂದು ಜೈ ಶ್ರೀರಾಂಎಂದು ಕೂಗಿತ್ತು. ಇದು ಕೇಳಿದ ಕೂಡಲೇ ಕಾರಿನಲ್ಲಿ ಹೋಗುತ್ತಿದ್ದ ಮಮತಾ ಕಾರು ನಿಲ್ಲಿಸಿ ಹೊರಗಿಳಿದು ಬಂದು, ಈ ಕಡೆ ಬಂದು ಮಾತನಾಡಿ ಎಂದಿದ್ದಾರೆ. ಇದು ಕೇಳುತ್ತಿದ್ದಂತೆಯೇ ಘೋಷಣೆ ಕೂಗಿದ್ದ ಗುಂಪು ಅಲ್ಲಿಂದ ಕಾಲ್ಕಿತ್ತಿತ್ತು,.ಈ ಘಟನೆಯನ್ನು ಎನ್‌ಡಿಟಿವಿ ವರದಿ ಮಾಡಿತ್ತು.

ಈ ವಿಡಿಯೊದಲ್ಲಿ ಕೇಳುತ್ತಿರುವ ಜೈಶ್ರೀರಾಂ ಘೋಷಣೆಯ ದನಿಯನ್ನು ಮಮತಾ ಅವರ ಇನ್ನೊಂದು ವಿಡಿಯೊದೊಂದಿಗೆ ಎಡಿಟ್ ಮಾಡಲಾಗಿದೆ. ಈ ಎರಡು ವಿಡಿಯೊಗಳ ಆಡಿಯೊವನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ವೈರಲ್ ಆಗಿರುವ ವಿಡಿಯೊದಲ್ಲಿ ಎಡಿಟ್ ಮಾಡಿದ ದನಿ ಸೇರಿಸಿರುವುದು ಸ್ಪಷ್ಟವಾಗಿ ಕೇಳುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.