
ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಅವರು ಕಾಳಿ ಮತ್ತು ಸರಸ್ವತಿ ಮಾತೆಯರ ಭಗ್ನಗೊಂಡ ವಿಗ್ರಹಗಳ ಚಿತ್ರಗಳನ್ನು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ. ಪಶ್ಚಿಮ ಬಂಗಾಳದ ಶಾಂತಿಪುರದಲ್ಲಿ ದೇವಿಯರ ವಿಗ್ರಹಗಳನ್ನು ಒಡೆದು ಹಾಕಲಾಗಿದ್ದು, ಇದು ಸನಾತನ ಧರ್ಮದ ಮೇಲೆ ನಡೆಸಿದ ದಾಳಿಯಾಗಿದೆ; ಮಮತಾ ಬ್ಯಾನರ್ಜಿ ಅವರ ದುರಾಡಳಿತದಲ್ಲಿ (ಜಂಗಲ್ ರಾಜ್) ಇಂಥ ಘಟನೆಗಳು ಪುನರಾವರ್ತನೆಯಾಗುತ್ತಿದ್ದು, ಎಚ್ಚೆತ್ತಿರುವ ಹಿಂದೂಗಳು 2026ರಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಅವರಿಗೆ ಬುದ್ಧಿ ಕಲಿಸಲಿದ್ದಾರೆ ಎಂದು ಪ್ರತಿಪಾದಿಸಿದ್ದಾರೆ. ಆದರೆ, ಇದು ಸುಳ್ಳು ಸುದ್ದಿ.
‘ಆಜ್ತಕ್ ಬಂಗ್ಲಾ’ ವಿಗ್ರಹಗಳ ಅಂಗಡಿಯ ಮಾಲೀಕ ಜಯಂತ ದಾಸ್ ಮತ್ತು ಅವರ ಮಗ ಪಲಾಶ್ ಅವರನ್ನು ಸಂದರ್ಶನ ಮಾಡಿದೆ; ಘಟನೆಗೆ ಸಹೋದರರಾದ ಅಮಿತ್ ಡೇ ಮತ್ತು ಅಸಿತ್ ಡೇ ಅವರು ಕಾರಣರಾಗಿದ್ದು, ಸಿಸಿಟಿವಿ ಕ್ಯಾಮೆರಾ ದೃಶ್ಯಗಳಲ್ಲೂ ಅವರ ಕೃತ್ಯ ದಾಖಲಾಗಿದೆ ಎಂದು ಸಂದರ್ಶನದಲ್ಲಿ ತಿಳಿಸಿದ್ದಾರೆ. ನಾದಿಯಾ ಜಿಲ್ಲೆಯ ಶಾಂತಿಪುರ ಪೊಲೀಸರನ್ನು ಈ ಸಂಬಂಧ ಸಂಪರ್ಕಿಸಿದಾಗ, ಅವರು ಮಾಳವೀಯ ಅವರ ಕೋಮು ಪ್ರತಿಪಾದನೆಯನ್ನು ಸುಳ್ಳು ಎಂದು ಸ್ಪಷ್ಟೀಕರಿಸಿದ್ದಾರೆ. ಅಂಗಡಿ ಮಾಲೀಕನಂತೆ ಆರೋಪಿಗಳಾದ ಅಮಿತ್ ಡೇ ಮತ್ತು ಅಸಿತ್ ಡೇ ಹಿಂದೂ ಧರ್ಮಕ್ಕೆ ಸೇರಿದವರಾಗಿದ್ದು, ವೈಯಕ್ತಿಕ ದ್ವೇಷದಿಂದ ಕೃತ್ಯ ಎಸಗಿದ್ದಾರೆ ಎಂದಿದ್ದಾರೆ. ಅಂಗಡಿ ಮಾಲೀಕ ಜಯಂತ್ ಅವರನ್ನು ಸಂಪರ್ಕಿಸಿದಾಗ, ಅವರೂ ಇದನ್ನೇ ಹೇಳಿರುವುದಾಗಿ ಬೂಮ್ ಫ್ಯಾಕ್ಟ್ ಚೆಕ್ ವರದಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.