‘ನಂದಿಪರ್ವತ ಆಶ್ರಮದ ಮುನಿ ಕಾಮಕುಮಾರ ನಂದಿ ಮಹಾರಾಜರನ್ನು ಮುಸ್ಲಿಂ ವ್ಯಕ್ತಿಗಳು ಹತ್ಯೆ ಮಾಡಿದ್ದಾರೆ’ ಎಂದು ವರೂರಿನ ಗುಣಧರ ನಂದಿ ಮಹಾರಾಜರು ಆರೋಪಿಸಿದ್ದಾರೆ. ಜೊತೆಗೆ, ಜೈನ ಮುನಿಯವರ ಹತ್ಯೆಯು ಕುರಿತು ಸಾಮಾಜಿಕ ಜಾಲತಾಣಗಳಲ್ಲೂ ಕೋಮುದ್ವೇಷದ ರೀತಿಯಲ್ಲಿ ಚರ್ಚೆ ನಡೆಯುತ್ತಿದೆ. ‘ಹುಸೇನ್ ಎನ್ನುವವರು ಜೈನ ಮುನಿಗಳ ಹತ್ಯೆ ಮಾಡಿದ್ದಾರೆ’ ಎಂದು ಕೆಲವರು ಟ್ವೀಟ್ ಮಾಡಿದ್ದಾರೆ. ‘ಕರ್ನಾಟಕದ ಕಾಂಗ್ರೆಸ್ ಸರ್ಕಾರವು ‘ಉಚಿತ’ಗಳನ್ನು ಜನರಿಗೆ ನೀಡುತ್ತಿದೆ. ಇದರ ಪರಿಣಾಮವೇ ಇದು’ ಎಂದು ಕೆಲವರು ಟ್ವೀಟ್ ಮಾಡಿದ್ದಾರೆ. ಆದರೆ, ಇದು ತಿರುಚಲಾದ ಸುದ್ದಿ.
‘ಆಶ್ರಮದಲ್ಲಿಯೇ ಕೆಲಸ ಮಾಡುತ್ತಿದ್ದ ನಾರಾಯಣ ಮಾಳಿ ಎಂಬವರು ಮುನಿಗಳ ಹತ್ಯೆ ಮಾಡಿದ್ದಾರೆ. ಹೆಣವನ್ನು ಸಾಗಿಸಲು ಹಸನ್ ದಲಾಯತ್ ಅವರಿಂದ ಸಹಾಯ ಪಡೆದುಕೊಂಡಿದ್ದಾರೆ. ಈ ಬಗ್ಗೆ ನಾರಾಯಣ ಮಾಳಿ ಅವರು ತನಿಖೆಯಲ್ಲಿ ತಪ್ಪೊಪ್ಪಿಕೊಂಡಿದ್ದಾರೆ’ ಎಂದು ಬೆಳಗಾವಿ ಎಸ್ಪಿ ಡಾ. ಸಂಜೀವ್ ಪಾಟೀಲ್ ಅವರು ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ದಿ ಹಿಂದೂ, ಡೆಕ್ಕನ್ ಕ್ರಾನಿಕಲ್ನಲ್ಲಿ ವರದಿಗಳು ಬಂದಿವೆ. ‘ಹತ್ಯೆಯು ಹಣಕಾಸಿನ ವ್ಯವಹಾರದ ಸಂಬಂಧ ನಡೆದಿದೆ ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗುತ್ತಿದೆ’ ಎಂದು ತನಿಖಾಧಿಖಾರಿಗಳು ಹೇಳಿದ್ದಾರೆ ಎಂಬುದನ್ನು ನ್ಯೂಸ್ಚಕ್ಕರ್ ಫ್ಯಾಕ್ಟ್ಚೆಕ್ ಮಾಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.