ಮುಸ್ಲಿಂ ಯುವಕನೊಬ್ಬ ದೇವರ ವಿಗ್ರಹದ ಮೇಲೆ ಕಾಲು ಇಟ್ಟಿದ್ದಾನೆ ಎಂಬ ಬರಹ ಇರುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಯುವಕನೊಬ್ಬ ದೇವರ ಕಲ್ಲಿನ ವಿಗ್ರಹದ ಮೇಲೆ ಷೂಕಾಲು ಇರಿಸಿರುವ ಈ ಚಿತ್ರದ ಸಲುವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಹಲವರು ವ್ಯಕ್ತಪಡಿಸಿದ್ದಾರೆ. ಪತ್ರಕರ್ತ ಅರ್ನಬ್ ಗೋಸ್ವಾಮಿ ಸಹ ಈ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ. ಈ ಮುಸ್ಲಿಂ ಯುವಕನ್ನು ಕೊಚ್ಚಿಕೊಲ್ಲಬೇಕು ಎಂದು ಹಲವರು ಕಿಡಿಕಾರಿದ್ದಾರೆ.
ದೇವರ ವಿಗ್ರಹವನ್ನು ತುಳಿಯುತ್ತಿರುವ ಯುವಕ ಮುಸ್ಲಿಂ ಸಮುದಾಯದವನಲ್ಲ, ಆತ ಹಿಂದೂ ಎಂದು ಉತ್ತರ ಪ್ರದೇಶ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಭೀಮ್ ಆರ್ಮಿಯ ಸದಸ್ಯನಾದ ಲೋಧಿ ಗೌತಮ್ ಎಂಬ ಯುವಕ ಈ ಕೃತ್ಯ ಎಸಗಿದ್ದಾನೆ. ಈತನ ವಿರುದ್ಧ ದೂರು ದಾಖಲಾಗಿದ್ದು, ವಾರಾಣಸಿಯ ಮಿರ್ಜಾಮುರದ್ ಪೊಲೀಸರು ಆತನ ವಿರುದ್ಧ ಕ್ರಮ ತೆಗೆದುಕೊಂಡಿದ್ದಾರೆ. ಮೇ ತಿಂಗಳಿನಲ್ಲಿ ಕೃತ್ಯ ನಡೆದಿದ್ದು, ತಪ್ಪಿತಸ್ಥನನ್ನು ಅದೇ ತಿಂಗಳಿನಲ್ಲೇ ಜೈಲಿಗೆ ಕಳುಹಿಸಲಾಗಿದೆ ಎಂದು ವಾರಾಣಸಿ ಪೊಲೀಸರು ಮೇ 11ರಂದು ಟ್ವೀಟ್ ಮಾಡಿದ್ದಾರೆ. ಆ ಟ್ವೀಟ್ನಲ್ಲಿ ಇದ್ದ ಚಿತ್ರವನ್ನು ಬಳಸಿಕೊಂಡು, ಮುಸ್ಲಿಮರು ಈ ಕೃತ್ಯ ಎಸಗಿದ್ದಾರೆ ಎಂದು ಸುಳ್ಳುಸುದ್ದಿ ಹಬ್ಬಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.