ಜನವರಿ 26ರ ಗಣರಾಜ್ಯೋತ್ಸವವನ್ನು ಎಲ್ಲ ಮದರಸಾಗಳು ಆಚರಿಸಬೇಕು. ಧ್ವಜಾರೋಹಣ ಮಾಡಬೇಕು ಎಂಬುದಾಗಿ ಉತ್ತರ ಪ್ರದೇಶ ಸರ್ಕಾರ ಆದೇಶ ಹೊರಡಿಸಿದೆ. ಒಂದೊಮ್ಮೆ ಇದನ್ನು ಪಾಲಿಸದಿದ್ದಲ್ಲಿ, ಮದರಸಾಗಳು ಬಂದ್ ಆಗಲಿವೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಮುಖ್ಯಮಂತ್ರಿ ಯೋಗಿ ಅದಿತ್ಯನಾಥ ಸರ್ಕಾರ ದಿಟ್ಟ ನಿಲುವು ತಳೆದಿದೆ ಎಂದು ಕೆಲವರು ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿಯನ್ನು ಪುಷ್ಠೀಕರಿಸುವ ಯಾವುದೇ ವರದಿಗಳು ಪ್ರಸ್ತುತ ಪ್ರಕಟವಾಗಿಲ್ಲ ಎಂದು ಲಾಜಿಕಲ್ ಇಂಡಿಯನ್ಸ್ ವೆಬ್ಸೈಟ್ ತಿಳಿಸಿದೆ. ಧ್ವಜಾರೋಹಣ ಮಾಡದ ಮದರಸಾ ಬಂದ್ ಮಾಡುವ ಆದೇಶ ಹೊರಡಿಸಿಲ್ಲ ಎಂದು ಉತ್ತರ ಪ್ರದೇಶ ಸರ್ಕಾರದ ಮಾಧ್ಯಮ ಸಲಹೆಗಾರ ಮೃತ್ಯುಂಜಯ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಇಂತಹ ವರದಿಯನ್ನು ರಾಜ್ಯ ಮದರಸಾ ಮಂಡಳಿ ಹಿರಿಯ ಮುಖಂಡ ಎ.ಕೆ. ತಿವಾರಿ ಅಲ್ಲಗಳೆದಿದ್ದಾರೆ. ಆದರೆ 2017ರಲ್ಲಿ ಯೋಗಿ ಸರ್ಕಾರವು ಆಗಸ್ಟ್ 15ರಂದು ಧ್ವಜಾರೋಹಣ ಮಾಡಿ, ಜನಗಣಮನ ಹಾಡುವಂತೆ ಮದರಸಾಗಳಿಗೆ ಸೂಚಿಸಿತ್ತು ಎಂದು ಜೀ ನ್ಯೂಸ್ ವರದಿ ಮಾಡಿತ್ತು. ಗಣರಾಜ್ಯದ ದಿವಸ ದೇಶದ ಎಲ್ಲ ಮದರಸಾಗಳು ತಿರಂಗಾ ಹಾರಿಸಬೇಕು ಎಂದು 2016ರಲ್ಲಿ ಆರ್ಎಸ್ಎಸ್ ಅಂಗಸಂಸ್ಥೆ ಮುಸ್ಲಿಂ ರಾಷ್ಟ್ರೀಯ ಮಂಚ್ ಸೂಚಿಸಿತ್ತು ಎಂದು ಇಂಡಿಯಾ ಟುಡೇ ವರದಿ ಮಾಡಿತ್ತು. ಆದರೆ, ಸೂಚನೆ ಪಾಲಿಸದ ಮದರಸಾ ಬಂದ್ ಮಾಡುವ ಆದೇಶ ಸತ್ಯಕ್ಕೆ ದೂರ ಎಂದು ಸ್ಪಷ್ಟಪಡಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.