‘ವಾರಾಣಸಿಯ ಜ್ಞಾನವಾಪಿ ಮಸೀದಿಯ ನೆಲಮಾಳಿಗೆಯಲ್ಲಿ ಬೃಹತ್ ಶಿವಲಿಂಗ ಪತ್ತೆಯಾಗಿದೆ. ಜತೆಗೆ ಹಿಂದೂ ದೇವಾಲಯದ ಹಲವು ಕುರುಹುಗಳು ಪತ್ತೆಯಾಗಿವೆ. ಮೊಘಲ್ ಕಾಲದ ಮಸೀದಿಗಳ ವಾಸ್ತುಶಿಲ್ಪ ಅತ್ಯದ್ಭುತವಾಗಿವೆ. ಅವೆಲ್ಲವುಗಳ ನೆಲಮಾಳಿಗೆ ಮತ್ತು ತಳಪಾಯದಲ್ಲಿ ಹಿಂದೂ ದೇವಾಲಯಗಳಿವೆ’ ಎಂಬ ವಿವರ ಇರುವ ಪೋಸ್ಟ್ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇವುಗಳ ಜತೆಗೆ ಗುಂಡಿಯೊಂದರಲ್ಲಿ ಬೃಹತ್ ಶಿವಲಿಂಗವಿರುವ ಚಿತ್ರವೂ ವೈರಲ್ ಆಗಿದೆ.
‘ಇದು ಸುಳ್ಳು ಸುದ್ದಿ’ ಎಂದು ಆಲ್ಟ್ ನ್ಯೂಸ್ ಫ್ಯಾಕ್ಟ್ಚೆಕ್ ಪ್ರಕಟಿಸಿದೆ. ‘ವಿಯೆಟ್ನಾಂನ ಮೈ ಸಾನ್ ಸೈಟ್ನ ಇಂದ್ರವರ್ಮ ಎಂಬ ರಾಜ ನಿರ್ಮಿಸಿದ್ದ ದೇವಾಲಯಗಳ ಸಂಕೀರ್ಣದ ಜೀರ್ಣೋದ್ಧಾರ ಕಾರ್ಯ 2020ರಲ್ಲಿ ಆರಂಭವಾಗಿತ್ತು. ಭಾರತೀಯ ಪುರಾತತ್ವ ಇಲಾಖೆಯು ಈ ಕಾರ್ಯದ ನೇತೃತ್ವ ವಹಿಸಿಕೊಂಡಿತ್ತು. ಈ ಬಗ್ಗೆ ಕೇಂದ್ರ ಸಚಿವರಾಗಿದ್ದ ಪ್ರಹ್ಲಾದ್ ಸಿಂಗ್ ಪಟೇಲ್ ಅವರು 2020ರ ಮೇ 29ರಂದು ಟ್ವೀಟ್ ಮಾಡಿದ್ದರು. ಅವರು ಟ್ವೀಟ್ ಮಾಡಿದ್ದ ಶಿವಲಿಂಗದ ಚಿತ್ರವನ್ನು ಬಳಸಿಕೊಂಡು, ಸುಳ್ಳು ಸುದ್ದಿ ಸೃಷ್ಟಿಸಲಾಗಿದೆ. ಅದನ್ನು ತಪ್ಪು ಮಾಹಿತಿಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ’ ಎಂದು ಆಲ್ಟ್ ನ್ಯೂಸ್ ವಿವರಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.