ADVERTISEMENT

ಅಕ್ರಮ ಹಣ ಸಾಗಾಣಿಕೆ ಮೇಲೆ ತೀವ್ರ ನಿಗಾ: ಆದಾಯ ತೆರಿಗೆ ಇಲಾಖೆ

​ಪ್ರಜಾವಾಣಿ ವಾರ್ತೆ
Published 17 ಜನವರಿ 2012, 19:30 IST
Last Updated 17 ಜನವರಿ 2012, 19:30 IST

ನವದೆಹಲಿ(ಪಿಟಿಐ): ಐದು ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಅಕ್ರಮ ಹಣ ಸಾಗಾಣಿಕೆ ತಡೆಗಟ್ಟಲು ಅಂತರರಾಷ್ಟ್ರೀಯ  ಇಂದಿರಾಗಾಂಧಿ ವಿಮಾನ ನಿಲ್ದಾಣ ಸೇರಿದಂತೆ ರಾಜಧಾನಿಯ ಸುತ್ತಮುತ್ತ ತೀವ್ರವಾದ ನಿಗಾ ವಹಿಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.

ತಪಾಸಣೆಗಾಗಿ ವಿಶೇಷವಾದ ತಂಡವನ್ನು ನಿಯೋಜಿಸಲಾಗಿದೆ  ಎಂದಿರುವ ಆದಾಯ ತೆರಿಗೆ ಇಲಾಖೆ, ಐಜಿಐ ವಿಮಾನ ನಿಲ್ದಾಣದಲ್ಲಿ ಅಳವಡಿಸಿರುವ ಕ್ಯಾಮೆರಾಗಳ ನೆರವಿನಿಂದ ಪತ್ತೆಹಚ್ಚಲು ನಿರ್ಧರಿಸಲಾಗಿದೆ. ರಾಜಧಾನಿಯ ಎಲ್ಲೆಡೆ ಕಟ್ಟೆಚ್ಚರವನ್ನು ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಉತ್ತರ ಪ್ರದೇಶದ ನೊಯಿಡಾ ಮತ್ತು ಗಾಜಿಯಾಬಾದ್ ಜತೆ ಗಡಿಯನ್ನು ಹೊಂದಿರುವ ದೆಹಲಿಯಿಂದ, ಅಲ್ಲದೆ ಉತ್ತರಾಖಂಡ ಮತ್ತು ಪಂಜಾಬ್ ರಾಜ್ಯಗಳಿಗೂ ಸಹ ಖಾಸಗಿ ಹಾಗೂ ಇತರ ವಿಮಾನಗಳಲ್ಲಿ ಅಕ್ರಮ ಹಣ ಸರಬರಾಜು ಆಗುವ ಸಾಧ್ಯತೆ ಇರುವುದರಿಂದ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು  ಐಟಿ ಅಧಿಕಾರಿಗಳು ತಿಳಿಸಿದ್ದಾರೆ.

ಚುನಾವಣೆ ನಡೆಯುತ್ತಿರುವ ಐದು ರಾಜ್ಯಗಳಲ್ಲಿ ಕಪ್ಪು ಹಣ ಬಳಕೆಯನ್ನು ತಡೆಗಟ್ಟಲು ಚುನಾವಣಾ ಆಯೋಗ ಈಗಾಗಲೇ ಅಲ್ಲಿನ ಆದಾಯ ತೆರಿಗೆ ಇಲಾಖೆಯ ನೆರವು ಕೋರಿದೆ ಎಂದು ಆದಾಯ ತೆರಿಗೆ ಇಲಾಖೆಯ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಶನಿವಾರ ದೆಹಲಿ -ಗಾಜಿಯಾಬಾದ್ ನಡುವೆ   ಎರಡು ವ್ಯಾನ್‌ಗಳಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 12.98ಕೋಟಿ  ರೂ ವಶಪಡಿಸಿಕೊಳ್ಳಲಾಗಿತ್ತು.

 ಪಥಸಂಚಲನದಲ್ಲಿ ಆನೆ ಬೇಕೆ?
ನವದೆಹಲಿ (ಐಎಎನ್‌ಎಸ್):
ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಅಲ್ಲಿನ ಆನೆಗಳ ಪ್ರತಿಮೆಗಳಿಗೆ ಮುಸುಕು ಹಾಕಬೇಕು ಎಂದು ಚುನಾವಣಾ ಆಯೋಗ ಆದೇಶ ಹೊರಡಿಸಿರುವುದನ್ನು ಮಂಗಳವಾರ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಪ್ರಶ್ನಿಸಿದರು. ಹಾಗಿದ್ದರೆ ಗಣರಾಜ್ಯೋತ್ಸವದಂದು ನಡೆಯಲಿರುವ ಪಥಸಂಚಲನದಿಂದ ಆನೆಗಳನ್ನು ಹಿಂತೆಗೆದುಕೊಳ್ಳಲಾಗುವುದೇ ಎಂದೂ ಅವರು ಧ್ವನಿ ಎತ್ತಿದ್ದಾರೆ.

ಧಾರ್ಮಿಕ ರಾಜಕಾರಣ ಬೇಡ: ಗಡ್ಕರಿ
ಲಖನೌ(ಪಿಟಿಐ): 
ಮೀಸಲಾತಿ  ಆಧಾರದ   ಮೇಲೆ ಒಂದು ಧರ್ಮದ  ಮತ ಪಡೆಯಲು ಸಮಾಜವಾದಿ ಹಾಗೂ ಕಾಂಗ್ರೆಸ್ ಪಕ್ಷಗಳು ಉತ್ತರ ಪ್ರದೇಶದಲ್ಲಿ  ಧಾರ್ಮಿಕ ರಾಜಕಾರಣ ಮಾಡುತ್ತಿವೆ. ಇದು ಸರಿಯಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ  ನಿತಿನ್ ಗಡ್ಕರಿ  ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.