ಜೈಪುರ: ಕರ್ನಾಟಕ ರಾಜ್ಯ ಎಂದೂ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿಲ್ಲ. ರಾಜ್ಯದ ಅಭಿವೃದ್ಧಿ ವಿಷಯ ಬಂದಾಗ ಹೊರನಾಡ ಕನ್ನಡಿಗರೂ ಕೈ ಜೋಡಿಸಬೇಕೆಂದು ರಾಜಸ್ತಾನದ ರಾಜ್ಯಪಾಲರಾದ ಮಾರ್ಗರೇಟ್ ಆಳ್ವ ಕರೆ ನೀಡಿದರು.
ವಾರ್ತಾ ಇರ್ಲಾಖೆ ಹಾಗೂ ಜೈಪುರ ಕರ್ನಾಟಕ ಸಂಘದ ಸಹಯೋಗದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕ ಸಂಸ್ಕೃತಿ - ಕಲೆ- ನೈಸರ್ಗಿಕ ಮತ್ತು ಮಾನವ ಸಂಪನ್ಮೂಲಗಳಿಂದ ಸಂಪದ್ಭರಿತವಾಗಿದೆ. ಲಭ್ಯವಿರುವ ಸಂಪನ್ಮೂಲ ಬಳಸಿಕೊಂಡು ರಾಜ್ಯ ಅಭಿವೃದ್ಧಿಯತ್ತ ಸಾಗಿದೆ ಎಂದರು.
ಕನ್ನಡಿಗರಾದ ಮಿರ್ಜಾ ಇಸ್ಮಾಯಿಲ್ ಜೈಪುರದ ಸ್ಥಾಪಕರು. ಕರ್ನಾಟಕ ಮತ್ತು ರಾಜಸ್ತಾನದ ನಡುವೆ ಶತಮಾನಗಳಿಂದ ಸಂಬಂಧವಿದೆ. ಇಲ್ಲಿನ ಕನ್ನಡಿಗರು ರಾಜ್ಯದ ಸಾಂಸ್ಕೃತಿಕ ರಾಯಭಾರಿಗಳಾಗಿ ಕಾರ್ಯ ನಿರ್ವಹಿಬೇಕು ಎಂದು ಸಲಹೆ ಮಾಡಿದರು.
ರಾಜಸ್ತಾನದಲ್ಲಿದ್ದೇ ರಾಜ್ಯದ ಅಭಿವೃದ್ಧಿಗೆ ಶ್ರಮಿಸಿ. ಮನೆಯಲ್ಲಿ ಕನ್ನಡ ಭಾಷೆ ಬಳಸಿ, ಮಕ್ಕಳಿಗೆ ಹಾಗೂ ಸ್ಥಳೀಯರಿಗೆ ಕನ್ನಡ ಭಾಷೆ- ಸಂಸ್ಕೃತಿ ಪರಿಚಯಿಸಿ ಎಂದು ತಿಳಿಸಿದರು.ವಾರ್ತಾ ಇಲಾಖೆ ಕಾರ್ಯದರ್ಶಿ ಬಸವರಾಜು ಮಾತನಾಡಿ, `ಹೊರನಾಡಿನಲ್ಲಿದ್ದೇವೆ ಎಂಬ ಭಾವನೆ ಬೇಡ, ಹೊರನಾಡ ಕನ್ನಡಿಗರಿಗಾಗಿಯೇ ರಾಜ್ಯ ಸರ್ಕಾರ ಹಲವು ಸೌಲಭ್ಯಗಳನ್ನು ನೀಡುತ್ತಿದೆ. ಈ ಸೌಲಭ್ಯಗಳನ್ನು ಬಳಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ವಾರ್ತಾ ಇಲಾಖೆ ನಿರ್ದೇಶಕ ಎನ್.ಆರ್.ವಿಶುಕುಮಾರ್, ಜೈಪುರ ಕರ್ನಾಟಕ ಸಂಘದ ಅಧ್ಯಕ್ಷ ಸೋಮಶೇಖರ್, ಕಾರ್ಯದರ್ಶಿ ಮನೋಹರ್ ಭಟ್, ನವದೆಹಲಿ ಕರ್ನಾಟಕ ವಾರ್ತಾ ಕೇಂದ್ರದ ಪ್ರಭಾರಿ ಉಪ ನಿರ್ದೇಶಕ ಗಿರೀಶ್ ಎಲ್.ಪಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ರಾಜ್ಯದಿಂದ ಆಗಮಿಸಿದ್ದ ಜನಪದ ಕಲಾವಿದರು ಕಂಸಾಳೆ, ಪೂಜಾಕುಣಿತ, ಡೊಳ್ಳುಕುಣಿತ, ಗೊರವ ಕುಣಿತ, ಕೋಲಾಟ, ವೀರಗಾಸೆ ಪ್ರದರ್ಶಿಸಿದರು. ಮೈಸೂರು ರಂಗಾಯಣ ಕಲಾವಿದರು ಪೂರ್ಣಚಂದ್ರ ತೇಜಸ್ವಿ ಅವರ `ಕೃಷ್ಣೇಗೌಡನ ಆನೆ~ ನಾಟಕ ಪ್ರದರ್ಶಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.