ನವದೆಹಲಿ: ಪರಿಶಿಷ್ಟ ಜಾತಿ ಮತ್ತು ಪಂಗಡದ ನೌಕರರಿಗೆ ಬಡ್ತಿಯಲ್ಲಿ ಮೀಸಲಾತಿ ನೀಡುವ ಕರ್ನಾಟಕದ ಕಾಯ್ದೆಯನ್ನು ರದ್ದು ಮಾಡಿ 2017ರ ಫೆಬ್ರುವರಿ 9ರಂದು ನೀಡಿದ ತೀರ್ಪನ್ನು ಯಾವುದೇ ರೀತಿಯಲ್ಲಿಯೂ ಪ್ರಶ್ನಿಸಲು ಅವಕಾಶ ಇಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ತತ್ಪರಿಣಾಮ ಜ್ಯೇಷ್ಠತೆಯ ಪ್ರಶ್ನೆಯನ್ನು ಆ ತೀರ್ಪಿನಲ್ಲಿಯೇ
ಪರಿಹರಿಸಲಾಗಿದೆ ಎಂದೂ ತಿಳಿಸಿದೆ.
ತತ್ಪರಿಣಾಮ ಜ್ಯೇಷ್ಠತೆಯನ್ನು ಬಿಟ್ಟು ಕರ್ನಾಟಕ ಸರ್ಕಾರ ಕೈಗೊಂಡ ಬೇರೆ ಕ್ರಮಗಳ ಬಗ್ಗೆ ಆಕ್ಷೇಪ ಇದ್ದರೆ ಕರ್ನಾಟಕ ಆಡಳಿತ ನ್ಯಾಯಮಂಡಳಿಗೆ (ಕೆಎಟಿ) ಹೋಗಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ತತ್ಪರಿಣಾಮ ಜ್ಯೇಷ್ಠತೆ ತೀರ್ಪನ್ನು ಪ್ರಶ್ನಿಸಿ ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ಗಳು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಸಂವಿಧಾನದ 371 (ಜೆ) ವಿಧಿಯ ಅಡಿಯಲ್ಲಿ ಲೋಕೋಪಯೋಗಿ ಇಲಾಖೆಗೆ ತಮ್ಮ ನೇಮಕ ಆಗಿದೆ. ಈ ವಿಧಿಯು ಹೈದರಾಬಾದ್ ಕರ್ನಾಟಕದ ಜಿಲ್ಲೆಗಳಿಗೆ ವಿಶೇಷ ಸ್ಥಾನ ನೀಡುತ್ತದೆ. ಹಾಗಾಗಿ ತತ್ಪರಿಣಾಮ ಜ್ಯೇಷ್ಠತೆ ತಮಗೆ ಅನ್ವಯ ಆಗದು ಎಂದು ಈ ಎಂಜಿನಿಯರ್ಗಳು ವಾದಿಸಿದರು.
2017ರ ಫೆಬ್ರುವರಿಯ ತೀರ್ಪಿಗೆ ಅನುಗುಣವಾಗಿ ಕರ್ನಾಟಕ ಸರ್ಕಾರವು ಹೊರಡಿಸಿದ ಅಧಿಸೂಚನೆ ರದ್ದು ಕೋರಿ ಸಲ್ಲಿಕೆಯಾಗುವ ಅರ್ಜಿಗಳನ್ನು ವಿಚಾರಣೆಗೆ ಪರಿಗಣಿಸಬಾರದು ಎಂದು ಕೆಎಟಿ ಹಾಗೂ ಕರ್ನಾಟಕ ಹೈ ಕೋರ್ಟ್ಗೆ ಸುಪ್ರೀಂ ಕೋರ್ಟ್ ಈ ಹಿಂದೆಯೇ ಸೂಚಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.