ADVERTISEMENT

ದೇಶದಲ್ಲಿ ಶೇ 15ರಷ್ಟು ಮಳೆ ಕೊರತೆ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2012, 19:30 IST
Last Updated 3 ಆಗಸ್ಟ್ 2012, 19:30 IST

ನವದೆಹಲಿ (ಪಿಟಿಐ): ಮುಂಗಾರು ವೈಫಲ್ಯ ಕುರಿತು ಮೇಲಿಂದ ಮೇಲೆ ಆಘಾತಕಾರಿ ಅಂಶಗಳನ್ನು ಹೊರಗೆಡವುತ್ತಿರುವ ಹವಾಮಾನ ಇಲಾಖೆಯು ಕರ್ನಾಟಕ, ಪಂಜಾಬ್ ಹಾಗೂ ಹರಿಯಾಣ ರಾಜ್ಯಗಳಿಗೆ `ಬರ~ಸಿಡಿಲಿನಂಥ ಸುದ್ದಿಯನ್ನು ಬಿತ್ತರಿಸಿದೆ.

ಈ ಬಾರಿ ಶೇ 15ರಷ್ಟು ಮಳೆ ಕೊರತೆ ಆಗಲಿದೆ. ಕರ್ನಾಟಕದ ಒಳನಾಡು, ಆಹಾರ ಧಾನ್ಯಗಳ ಕಣಜಗಳಾದ ಪಂಜಾಬ್ ಮತ್ತು ಹರಿಯಾಣ ರಾಜ್ಯಗಳಲ್ಲಿ ಮುಂದಿನ ದಿನಗಳು ಭೀಕರವಾಗಲಿವೆ ಎಂದು ಇಲಾಖೆ ಮಹಾ ನಿರ್ದೇಶಕ ಲಕ್ಷ್ಮಣ್ ಸಿಂಗ್ ರಾಥೋಡ್ ಹೇಳಿದ್ದಾರೆ.

`2009ರ ಬಳಿಕ ಇದೇ ಮೊದಲ ಬಾರಿ ದೇಶವನ್ನು ಬರಗಾಲ ಕಾಡಲಿದೆ. ಜೂನ್‌ನಲ್ಲಿ ಮುಂಗಾರು ವಿಳಂಬದಿಂದ ಶೇ 20ಕ್ಕಿಂತಲೂ ಕಡಿಮೆ ಪ್ರಮಾಣದಲ್ಲಿ ಮಳೆ ಬಿದ್ದಿದೆ. ಗುರುವಾರದ ವರೆಗೆ ದೇಶದಲ್ಲಿ 378.8 ಮಿ.ಮೀ ಮಳೆಯಾಗಿದೆ. ಈ ಅವಧಿಯಲ್ಲಿ 471.4 ಮಿ.ಮೀ ವಾಡಿಕೆ ಮಳೆ ಆಗಬೇಕಿತ್ತು~ ಎಂದು ಅವರು ಶುಕ್ರವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

`ಮಳೆ ವೈಫಲ್ಯದಿಂದ ಬತ್ತದ ಬೇಸಾಯಕ್ಕೆ ಹೊಡೆತ ಬೀಳುವುದಿಲ್ಲ. ಆದರೆ ದ್ವಿದಳ ಧಾನ್ಯಗಳ ಉತ್ಪಾದನೆಯು ಕುಂಠಿತಗೊಳ್ಳಲಿದೆ. ಈ ತಿಂಗಳಿನಲ್ಲಿ ವಾಡಿಕೆ ಮಳೆ ಬೀಳಲಿದೆ. ಆದರೆ ಸೆಪ್ಟೆಂಬರ್‌ನಲ್ಲಿ ಮಳೆ ಕೊರತೆ ಆಗಲಿದೆ~ ಎಂದೂ ಹೇಳಿದರು.

ಸರಾಸರಿ ಮಳೆ ಕೊರತೆಯು ಶೇ10ಕ್ಕಿಂತಲೂ ಹೆಚ್ಚಿದ್ದರೆ  ಸಾಮಾನ್ಯ ಬರ,  ಶೇ50ಕ್ಕಿಂತಲೂ ಅಧಿಕವಾಗಿದ್ದರೆ ಭೀಕರ ಬರಗಾಲ ಎನ್ನಲಾಗುತ್ತದೆ. ದೇಶದ ವಾಯವ್ಯ ಭಾಗದಲ್ಲಿ ಬರದ ಆತಂಕ ಕಾಡುತ್ತಿದೆ.
ರಾಜಕೀಯ ಬೇಡ: ಕರ್ನಾಟಕ, ಗುಜರಾತ್ ಹಾಗೂ ಮಹಾರಾಷ್ಟ್ರ ರಾಜ್ಯಗಳು ಬರ ಪರಿಸ್ಥಿತಿ ಎದುರಿಸುತ್ತಿದ್ದು, ಕೇಂದ್ರದ ನೆರವಿಗೆ ಮನವಿ ಸಲ್ಲಿಸುವಾಗ ರಾಜಕೀಯ ಮಾಡಕೂಡದು ಎಂದು ಸಚಿವ ಜೈರಾಂ ರಮೇಶ್ ಹೇಳಿದ್ದಾರೆ.

ಕರ್ನಾಟಕ- ರೂ, 11,000ಕೋಟಿ, ಮಹಾರಾಷ್ಟ್ರ-ರೂ 10,000 ಕೋಟಿ ಹಾಗೂ ಗುಜರಾತ್ ರೂ 14,000 ಕೋಟಿ ಬರ ಪರಿಹಾರ ಕೇಳಿವೆ. ಹೆಚ್ಚಿನ ಪ್ರಮಾಣದಲ್ಲಿ ಪರಿಹಾರ ಮೊತ್ತ ಕೇಳಿರುವುದರಿಂದ ಪರಿಷ್ಕೃತ ದಾಖಲೆಗಳನ್ನು ವಾರದೊಳಗೆ ಸಲ್ಲಿಸುವಂತೆ ಈ ಮೂರು ರಾಜ್ಯಗಳಿಗೆ ಸೂಚಿಸಲಾಗಿದೆ.

`ಅಸೋಚಾಂ ಸಮೀಕ್ಷೆ:  ದೇಶದ ಆರ್ಥಿಕ ವೃದ್ಧಿ ದರ (ಜಿಡಿಪಿ) ಪ್ರಸಕ್ತ ಹಣಕಾಸು ವರ್ಷ ಶೇ 6.2ಕ್ಕೆ ಕುಸಿಯಲಿದೆ ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘದ  (ಅಸೋಚಾಂ) ಸಮೀಕ್ಷೆ ತಿಳಿಸಿದೆ. ದೇಶದಾದ್ಯಂತ 110 ಹಿರಿಯ ಉದ್ಯಮಿಗಳನ್ನು `ಅಸೋಚಾಂ~ ಸಂದರ್ಶಿಸಿ ವರದಿ ಸಿದ್ಧಪಡಿಸಿದ್ದು, ಶೇ 80 ಜನ `ಜಿಡಿಪಿ~ ಕುಸಿತ ಕಾಣಲಿದೆ ಎಂದೇ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.