ಚಂಡೀಗಡ: ದ್ವಿತೀಯ ಪಿಯುಸಿ ವಿದ್ಯಾರ್ಥಿಯೊಬ್ಬ ಹಣದಾಸೆಗಾಗಿ ಐದು ವರ್ಷದ ಹೆಣ್ಣು ಮಗುವನ್ನು ಅಪಹರಿಸಿ, ನೀರು ತುಂಬಿದ ಟಬ್ನಲ್ಲಿ ಮುಳುಗಿಸಿ ಕೊಂದು ಹಾಕಿದ್ದಾನೆ.
ತನ್ನ ಭಾವ ಬಾಡಿಗೆಗಿದ್ದ ಮನೆಯ ಮಾಲೀಕರ ಮಗುವನ್ನು ಅಪಹರಿಸಿ, ₹20 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ 16 ವರ್ಷದ ಬಾಲಕನನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.
‘ಕೃತ್ಯ ಎಸಗಿದ ಬಗ್ಗೆ ಬಾಲಕನಿಗೆ ಯಾವುದೇ ಪಶ್ಚಾತ್ತಾಪವಿಲ್ಲ. ಸಿನಿಮಾ ವೊಂದನ್ನು ನೋಡಿ ಸುಲಭದಲ್ಲಿ ಹಣ ಗಳಿಸಲು ಈ ಯೋಜನೆ ರೂಪಿಸಿದ್ದಾಗಿ ಹೇಳಿದ್ದಾನೆ’ ಎಂದು ಅಂಬಾಲದ ಎಸ್ಪಿ ಅಭಿಷೇಕ್ ಜೊರ್ವಾಲ್ ತಿಳಿಸಿದ್ದಾರೆ.
ಮಗುವಿನ ತಂದೆಗೆ ಸೇರಿದ ಅಂಗಡಿಯಲ್ಲೇ ಕೆಲಸ ಮಾಡುತ್ತಿದ್ದ ಆತನ ಭಾವ, ಕುಟುಂಬ ಸಮೇತ ಉತ್ತರ ಪ್ರದೇಶಕ್ಕೆ ಹೋಗಿದ್ದರು. ಈ ಸಮಯದಲ್ಲಿ ಮನೆಯಲ್ಲಿ ಒಬ್ಬನೇ ಇದ್ದ ಬಾಲಕ, ಸಂಜೆ ಹೊರಗೆ ಆಟವಾಡುತ್ತಿದ್ದ ಮಗುವನ್ನು ಆಮಿಷ ತೋರಿಸಿ ಒಳಗೆ ಕರೆದೊಯ್ದಿದ್ದ. ಬಳಿಕ ಮಗುವನ್ನು ಬಿಡುಗಡೆ ಮಾಡಲು ₹ 20 ಲಕ್ಷ ನೀಡುವಂತೆ ಆಗ್ರಹಿಸಿ, ಅಪರಿಚಿತನ ಸೋಗಿನಲ್ಲಿ ನೆರೆಮನೆಯವರಿಗೆ ಫೋನ್ ಮಾಡಿದ್ದ. ಆತಂಕಗೊಂಡ ಪೋಷಕರು ಪೊಲೀಸರಿಗೆ ತಿಳಿಸಿದ್ದರು. ಬಳಿಕ, ಫೋನ್ ಕರೆ ಆಧರಿಸಿ ಪೊಲೀಸರು ನೆರೆಮನೆಗೆ ಬಂದಾಗ, ಮಗು ಕೂಗಿಕೊಳ್ಳಬಹುದು ಎಂದು ಆತಂಕಗೊಂಡ ಬಾಲಕ, ಆಕೆಯನ್ನು ಕೊಂದು ದೇಹವನ್ನು ವಾಟರ್ ಕೂಲರ್ನಲ್ಲಿ ಬಚ್ಚಿಟ್ಟಿದ್ದ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.