ADVERTISEMENT

ಬೆಲೆ ಏರಿಕೆ: ಕೇಂದ್ರದ ವಿರುದ್ಧ ಗದಾಪ್ರಹಾರ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2011, 19:30 IST
Last Updated 22 ಅಕ್ಟೋಬರ್ 2011, 19:30 IST

ನವದೆಹಲಿ, (ಐಎಎನ್‌ಎಸ್): ಬೆಲೆ ಏರಿಕೆ ಬಗ್ಗೆ ಕಾಂಗ್ರೆಸ್ಸೇತರ ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರದ ವಿರುದ್ಧ ಶನಿವಾರ ಇಲ್ಲಿ ಹರಿಹಾಯ್ದು, ಕೇಂದ್ರದ ಕಲ್ಯಾಣ ಯೋಜನೆಗಳ ಬಗ್ಗೆ ಉದಾರತೆ ತೋರಬೇಕು ಎಂದು ಒತ್ತಾಯಿಸಿದ್ದಾರೆ.

ರಾಷ್ಟ್ರೀಯ ಅಭಿವೃದ್ಧಿ ಮಂಡಳಿ (ಎನ್‌ಡಿಸಿ) ಸಭೆಯಲ್ಲಿ ಮಾತನಾಡಿದ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ, ಹಣದುಬ್ಬರವು ದೇಶದ ಅಭಿವೃದ್ಧಿಗೆ ಭಾರಿ ಹೊಡೆತ ನೀಡಿದ್ದು, ಬೆಲೆ ಏರಿಕೆಯು ಜನರನ್ನು ಮತ್ತಷ್ಟು ಕಷ್ಕಕ್ಕೆ ನೂಕಿದೆ ಎಂದರು.

ಅಗತ್ಯ ವಸ್ತುಗಳ ಲಭ್ಯತೆ ಮತ್ತು ಅವುಗಳ ಬೆಲೆ ಸ್ಥಿರವಾಗಿ ಇರುವಂತೆ ನೋಡಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ಬೆಲೆ ಏರಿಕೆ ಕುರಿತು ಸರ್ಕಾರದ ಮೇಲೆ ಗದಾಪ್ರಹಾರ ನಡೆಸಿದ ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ, ಬೆಲೆ ಏರಿಕೆಯು ಕೇಂದ್ರದ ನೀತಿಯ ವೈಫಲ್ಯವಾಗಿದ್ದು, ಇದು ಪ್ರತಿಕೂಲ ಪರಿಣಾಮ ಬೀರಲಿದೆ ಎಂದರು.

2004 ಮತ್ತು 2011ನಡುವೆ ಡೀಸೆಲ್ ದರವನ್ನು 13 ಬಾರಿ ಮತ್ತು ಪೆಟ್ರೋಲ್ ದರ 19 ಬಾರಿ ಹೆಚ್ಚಿಸಲಾಗಿದೆ.  ಹಣದುಬ್ಬರ ದರ ಕಡಿಮೆಯಾಗಲಿದೆ ಎಂದು ನೀವು ಹೇಗೆ ನಿರೀಕ್ಷಿಸುತ್ತೀರಿ ಎಂದು ಪ್ರಶ್ನಿಸಿದರು.

ರಾಜ್ಯಗಳ ಅಗತ್ಯ ಬೇಡಿಕೆಗಳಿಗೆ ಕಿವುಡಾಗಿ ವರ್ತಿಸುತ್ತಿರುವ ಕೇಂದ್ರ ಸರ್ಕಾರ, ಅವುಗಳನ್ನು `ಮುನಿಸಿಪಲ್ ಕಾರ್ಪೊರೇಷನ್~ಗಳಂತೆ ಕಾಣುತ್ತಿದೆ ಎಂದು ಯುಪಿಎ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ಕೋಮು ಹಿಂಸಾಚಾರ ತಡೆ ಮಸೂದೆಯಂತಹ ಕೇಂದ್ರದ ಪ್ರಸ್ತಾವಗಳು `ಫ್ಯಾಸಿಸ್ಟ್~ ಧೋರಣೆ ಹೊಂದಿವೆ ಎಂದು ರಾಷ್ಟ್ರೀಯ ಅಭಿವೃದ್ಧಿ ಮಂಡಳಿಯ ಸಭೆಯಲ್ಲಿ ಶನಿವಾರ ಅವರು ಟೀಕಿಸಿದ್ದಾರೆ.

ಸಮಾಜ ಕಲ್ಯಾಣ ಯೋಜನೆಗಳೆಡೆಗೆ ಕೇಂದ್ರವು ಉದಾರತೆ  ತೋರಬೇಕು ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್‌ಕುಮಾರ್ ಒತ್ತಾಯಿಸಿದರು.

ಯಾವ ರಾಜ್ಯದಲ್ಲಿ ಸಂಪನ್ಮೂಲದ ಕೊರತೆ ಇದೆಯೋ ಅಲ್ಲಿ ಕೇಂದ್ರ ಸರ್ಕಾರವೇ ಶಿಕ್ಷಣ ಹಕ್ಕು ಕಾಯ್ದೆಯನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು. ಬೆಲೆ ಏರಿಕೆಯಿಂದ ಜನರ ಬದುಕು ದುರ್ಬರವಾಗಿರುವ ಬಗ್ಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿ ಅವರೂ ಗಮನ ಸೆಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.