ಭೋಪಾಲ್: ‘ಸದನದಲ್ಲಿ ಸಚಿವರು ಭರವಸೆಗಳನ್ನು ನೀಡುವ ಶಬ್ದಗಳನ್ನು ಬಳಸುವಂತಿಲ್ಲ’ ಎಂದು ಮಧ್ಯಪ್ರದೇಶ ಸರ್ಕಾರ ಸುತ್ತೋಲೆ ಹೊರಡಿಸಿದೆ.
34 ಶಬ್ದಗಳ ಉದಾಹರಣೆಯನ್ನು ನೀಡಿರುವ ಸರ್ಕಾರ, ಇನ್ನು ಮುಂದೆ ಇಂಥ ಶಬ್ದಗಳನ್ನು ಸದನದ ಮುಂದೆ ಹೇಳದೇ ವಾಸ್ತವವನ್ನು ಮಾತ್ರ ತಿಳಿಸಬೇಕು ಎಂದು ಹೇಳಿದೆ.
ಸದನದಲ್ಲಿ ಅಭಿವೃದ್ಧಿ ಕೆಲಸಗಳು, ಸಮಸ್ಯೆಗಳ ಬಗ್ಗೆ ಕೇಳಿದಾಗ ಸಚಿವರು ಭರವಸೆ ಕೊಟ್ಟು ನುಣುಚಿಕೊಳ್ಳುತ್ತಾರೆ. ಆದರೆ ಇಂಥ ಶಬ್ದಗಳನ್ನು ಇನ್ನು ಮುಂದೆ ಬಳಸುವಂತಿಲ್ಲ.
‘ಈ ಬಗ್ಗೆ ಪರಿಶೀಲನೆ ಮಾಡುತ್ತೇನೆ’, ‘ಸಮಸ್ಯೆ ಪರಿಗಣಿಸಿದ್ದೇನೆ’, ‘ಗಮನಿಸುತ್ತೇನೆ’, ‘ಕೇಂದ್ರದ ಗಮನಕ್ಕೆ ತರಲಾಗುವುದು’, ‘ಏನು ಮಾಡಬೇಕೆಂದು ನೋಡುತ್ತೇನೆ’, ‘ಚರ್ಚಿಸೋಣ’ ಎಂಬ ಹೇಳಿಕೆಯನ್ನು ಸದನದಲ್ಲಿ ಉತ್ತರ ರೂಪದಲ್ಲಿ ಕೊಡಲೇಬಾರದು ಎಂದು ಸರ್ಕಾರ ಸೂಚನೆ ನೀಡಿದೆ.
ಇ-ಮೇಲ್, ಅಂತರ್ಜಾಲದಲ್ಲಿ ಪ್ರತಿಕ್ರಿಯೆ ನೀಡುವಾಗಲೂ ಈ ಅಂಶ ಗಮನದಲ್ಲಿಡಬೇಕು ಎಂದು ತಿಳಿಸಲಾಗಿದೆ.
‘ಸದನಕ್ಕೆ ಬರೀ ಭರವಸೆಗಳನ್ನು ಕೊಡುವುದನ್ನು ನಿಲ್ಲಿಸಲು ಈ ನಿರ್ಣಯ ಕೈಗೊಳ್ಳಲಾಗಿದೆ’ ಎಂದು ಸಂಸದೀಯ ವ್ಯವಹಾರಗಳ ಸಚಿವ ನರೋತ್ತಮ್ ಮಿಶ್ರಾ ತಿಳಿಸಿದ್ದಾರೆ.
ಪ್ರತಿಪಕ್ಷ ನಾಯಕ ಅಜಯ್ ಸಿಂಗ್ ಈ ಆದೇಶಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ‘ಸರ್ಕಾರ ಪ್ರಜಾಪ್ರಭುತ್ವವನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದೆ. ಈ ಆದೇಶದಿಂದ ಸಚಿವರಿಗೆ ಯಾವ ಪ್ರಶ್ನೆಗೂ ಸರಿಯಾಗಿ ಉತ್ತರಿಸಲು ಆಗುವುದಿಲ್ಲ. ಇದು ದುರದೃಷ್ಟಕರ. ’ ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.