ನವದೆಹಲಿ: ಮಹಿಳೆಯೊಬ್ಬಳನ್ನು ಪತ್ನಿ ಎಂದು ಹೇಳಿಕೊಂಡು ಆಕೆಯನ್ನು ಹುಡುಕಿಕೊಡಿ ಎಂದು ವ್ಯಕ್ತಿಯೊಬ್ಬ ಹೈಕೋರ್ಟ್ ಮೆಟ್ಟಿಲೇರಿದ. ಆದರೆ ಮಹಿಳೆ ನಾನು ಆತನನ್ನು ಮದುವೆಯೇ ಆಗಿಲ್ಲವೆಂದು ನ್ಯಾಯಾಲಯಕ್ಕೆ ಹೇಳಿದ್ದು, ಆತನೊಂದಿಗೆ ಹೋಗಲು ನಿರಾಕರಿಸಿದ್ದಾರೆ.
‘ಜುಲೈ 27, 2017 ರಂದು ನಮ್ಮಿಬ್ಬರ ವಿವಾಹವಾಗಿದೆ. ಮದುವೆಯ ವಿಷಯವನ್ನು ಮನೆಯವರ ಬಳಿ ಹೇಳಿರಲಿಲ್ಲ. ನಂತರ ಆಕೆ ಮನೆಯವರ ಬಳಿ ಹೇಳಿದಾಗ ಅವರ ಮನೆಯವರು ಬೆದರಿಕೆ ಹಾಕಿದರು. ನಮ್ಮ ಮನೆಯಲ್ಲಿ ಒಪ್ಪಿದರು. ಅವಳನ್ನು ಸಹೋದರರು ಅಕ್ರಮವಾಗಿ ಬಂಧಿಸಿದ್ದಾರೆ’ ಎಂಬುದು ವ್ಯಕ್ತಿಯ ಆರೋಪ.
ಈ ಆರೋಪವನ್ನು ತಳ್ಳಿಹಾಕಿರುವ ಮಹಿಳೆ, ತಾನು ಸ್ವಇಚ್ಛೆಯಿಂದ ಸಹೋದರರೊಂದಿಗೆ ವಾಸಿಸುತ್ತಿರುವುದಾಗಿ ಹೇಳಿದ್ದಾರೆ. ಆತ ನೀಡಿರುವ ಮದುವೆಯ ಪ್ರಮಾಣ ಪತ್ರ ನಿಜವಾದುದ್ದಲ್ಲ. ಕಾರಿನೊಳಗೆ ಬಲವಂತ ಮಾಡಿದ ಕಾರಣಕ್ಕೆ ಖಾಲಿ ಹಾಳೆಯಲ್ಲಿ ಸಹಿ ಹಾಕಬೇಕಾಯಿತು ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಸ್. ಮುರಳೀಧರ್ ಮತ್ತು ಎಸ್. ಮೆಹ್ತಾ ಅವರ ಪೀಠವು ವಾದ– ಪ್ರತಿವಾದಗಳಿಗೆ ಎಡೆ ಮಾಡಿಕೊಡಲು ನಿರಾಕರಿಸಿದರು. ಮಹಿಳೆ ಯಾವುದೇ ನಿಯಂತ್ರಣ ಅಥವಾ ಅಕ್ರಮ ಬಂಧನವಿಲ್ಲದೇ ಸ್ವಇಚ್ಛೆಯಿಂದ ಸಹೋದರರೊಂದಿಗೆ ವಾಸಿಸುತ್ತಿರುವುದು ಸಮಾಧಾನಕರ ಎಂದು ಕೋರ್ಟ್ ಹೇಳಿತು.
ಮಹಿಳೆಯನ್ನು ಹಾಜರುಪಡಿಸಲು ಆಕೆಯ ಸಹೋದರರಿಗೆ ನಿರ್ದೇಶನ ನೀಡುವಂತೆ ಕೋರಿ ವ್ಯಕ್ತಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ವೇಳೆ ಕೋರ್ಟ್, ನ್ಯಾಯಾಲಯವು ಈ ಹಂತದಲ್ಲಿ ಈ ವಿವಾದದಲ್ಲಿ ಪ್ರವೇಶಿಸಲು ಇಷ್ಟಪಡುವುದಿಲ್ಲ. ‘ಈ ಪರಿಸ್ಥಿತಿಯಲ್ಲಿ ಯಾವುದೇ ನಿರ್ದೇಶನ ನೀಡುವುದಿಲ್ಲ’ ಎಂದು ಹೇಳಿತು.
ಕಕ್ಷಿದಾರ ಪರ ವಕೀಲ ವ್ಯಕ್ತಿಯ ಸುರಕ್ಷತೆಯ ಬಗ್ಗೆ ಆತಂಕ ವ್ಯಕ್ತಪಡಿಸಿದಾಗ, ವ್ಯಕ್ತಿಯ ಸುರಕ್ಷತೆ ಮತ್ತು ವಿಚಾರಣೆಯ ಜವಾಬ್ದಾರಿಯನ್ನು ನ್ಯಾಯಾಧೀಶರು ಮಾಲ್ವಿಯ ನಗರ ಪೊಲೀಸ್ ಠಾಣೆಗೆ ವಹಿಸಿದರು.
ಮಹಿಳೆಯ ಕುಟುಂಬಕ್ಕೆ ಈ ವ್ಯಕ್ತಿ ಗೊತ್ತಿರುವವನು. ಕೆಲವು ವರ್ಷಗಳ ಹಿಂದೆ ಮಹಿಳೆಯ ಸಹೋದರರ ಮನೆಯಲ್ಲಿ ಇದ್ದ ಎಂದು ಪೊಲೀಸರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.