ADVERTISEMENT

`ಮಾನಸಿಕ ಭಯೋತ್ಪಾದನೆ' ವಿರುದ್ಧ ದನಿ

ಬಿಗಿ ಭದ್ರತೆ ನಡುವೆ ಐದು ದಿನಗಳ ಜೈಪುರ ಸಾಹಿತ್ಯೋತ್ಸವ ಆರಂಭ

​ಪ್ರಜಾವಾಣಿ ವಾರ್ತೆ
Published 24 ಜನವರಿ 2013, 19:59 IST
Last Updated 24 ಜನವರಿ 2013, 19:59 IST
`ಮಾನಸಿಕ ಭಯೋತ್ಪಾದನೆ' ವಿರುದ್ಧ ದನಿ
`ಮಾನಸಿಕ ಭಯೋತ್ಪಾದನೆ' ವಿರುದ್ಧ ದನಿ   

ಜೈಪುರ (ಪಿಟಿಐ): ಲೇಖಕರ ಸ್ವಾತಂತ್ರ್ಯಕ್ಕೆ ಭೀತಿಯಿಲ್ಲದ ವಾತಾವರಣ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರಾಮುಖ್ಯ ಪ್ರತಿಪಾದಿಸುವುದರೊಂದಿಗೆ ಪ್ರಸಕ್ತ ಸಾಲಿನ ಜೈಪುರ ಸಾಹಿತ್ಯೋತ್ಸವವು ಬಿಗಿಭದ್ರತೆಯ ನಡುವೆ ಶಾಂತಿಯುತವಾಗಿ ಆರಂಭವಾಯಿತು.

2005ರಿಂದ ಈ ಉತ್ಸವ ನಡೆಯುತ್ತಿದ್ದು, ಇದು ಎಂಟನೇ ವರ್ಷದ ಉತ್ಸವವಾಗಿದೆ. ಉತ್ಸವವು ವಿವಾದಕ್ಕೊಳಗಾಗಿದ್ದು, ಮುಸ್ಲಿಂ ಮತ್ತು ಬಲಪಂಥೀಯ ಹಿಂದೂ ಸಂಘಟನೆಗಳು ಇದರ ವಿರುದ್ಧ ದನಿ ಎತ್ತಿದ್ದವು. ಪಾಕಿಸ್ತಾನದ ಲೇಖಕರನ್ನು ಉತ್ಸವಕ್ಕೆ ಆಹ್ವಾನಿಸಬಾರದು ಎಂದು ಹಿಂದೂ ಸಂಘಟನೆಗಳು ಒತ್ತಾಯಿಸಿದ್ದವು. ಕಳೆದ ವರ್ಷದ ಉತ್ಸವದ ವೇಳೆ ಸಲ್ಮಾನ್ ರಷ್ದಿ ಅವರ `ಸೆಟಾನಿಕ್ ವರ್ಸಸ್'ನಿಂದ ಹಲವು ಹೇಳಿಕೆಗಳನ್ನು ಉಲ್ಲೇಖಿಸಿದ್ದ ನಾಲ್ವರು ಲೇಖಕರಿಗೆ ಭಾಗವಹಿಸಲು ಅವಕಾಶ ನೀಡಬಾರದು ಎಂದು ಮುಸ್ಲಿಂ ಸಂಘಟನೆಗಳು ಬೇಡಿಕೆ ಮುಂದಿಟ್ಟಿದ್ದವು.

ಆದರೆ, ಉತ್ಸವದ ಸಂಘಟಕರಾದ ಸಂಜಯ್ ರಾಯ್ ಅವರು, ಯಾರೇ ಆಗಲಿ ಬೆದರಿಕೆಯೊಡ್ಡಿ ತಮ್ಮನ್ನು ಹಿಮ್ಮೆಟ್ಟಿಸಲು ಸಾಧ್ಯವಾಗದು ಎಂದರು. `ಮಾನಸಿಕ ಭಯೋತ್ಪಾದನೆ ಸೇರಿದಂತೆ ಯಾವುದೇ ಬಗೆಯ ಭಯೋತ್ಪಾದನೆಯನ್ನು ನಾವು ವಿರೋಧಿಸುತ್ತೇವೆ.  ಅತ್ಯುತ್ತಮ ಸಂವಿಧಾನ ಹೊಂದಿರುವ ನಾವು ಅದರ ತತ್ವಗಳಿಗೆ ಬದ್ಧವಾಗಿರಬೇಕಾಗಿದೆ. ಯಾವುದೇ ಸಂಘಟನೆಯು ರಾಷ್ಟ್ರದ ಕಾರ್ಯಸೂಚಿಯನ್ನು ತನ್ನ ಕೈವಶ ಮಾಡಿಕೊಳ್ಳುವುದಕ್ಕೆ ಅವಕಾಶ ನೀಡುವುದಿಲ್ಲ' ಎಂದೂ ಸಂಜಯ್ ರಾವ್ ನುಡಿದರು.

`ಲೇಖಕರು ಬೇರ‌್ಯಾರನ್ನೋ ತೃಪ್ತಿ ಪಡಿಸಲು ಬರೆಯುವುದಿಲ್ಲ. ಅವರ ಬರವಣಿಗೆಗೆ ಪೂರಕವಾಗಿ ಮುಕ್ತ ವಾತಾವರಣ ಇರಬೇಕು' ಎಂದು ಹೇಳಿದರು. ಕಳೆದ ವರ್ಷ ಕೂಡ ಈ ಉತ್ಸವ ವಿವಾದಕ್ಕೆ ಒಳಗಾಗಿತ್ತು. ರಷ್ದಿ ಅವರು ಕಡೆಯ ಕ್ಷಣದಲ್ಲಿ ಉತ್ಸವದಲ್ಲಿ ಭಾಗವಹಿಸುವುದನ್ನು ರದ್ದುಪಡಿಸಿದ್ದರು.

ಈ ವರ್ಷ ಉತ್ಸವದಲ್ಲಿ ಭಾಗವಹಿಸಲಿರುವ ರಷ್ದಿ ಬೆಳಿಗ್ಗೆ ದೆಹಲಿಯಲ್ಲಿ ಮಾತನಾಡಿ, `ಇದು ಸಾಂಸ್ಕೃತಿಕ ತುರ್ತು ಪರಿಸ್ಥಿತಿ. ಇದು ಭಿನ್ನ ರೀತಿಯ ತುರ್ತು ಸ್ಥಿತಿ' ಎಂದು ಪ್ರತಿಕ್ರಿಯಿಸಿದರು. ಆದರೆ ಸಂಘಟಕರು ಮಾತ್ರ ವಿವಾದಗಳ ಬಗ್ಗೆ ತಲೆಕೆಡೆಸಿಕೊಂಡಿಲ್ಲ. `ಪಾಕಿಸ್ತಾನದ ಲೇಖಕರ ಭೇಟಿಯನ್ನು ರಾಜಕೀಯಕರಣಗೊಳಿಸಬಾರದು' ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲಾಟ್ ಕೋರಿದರು.
ಉತ್ಸವ ಐದು ದಿನಗಳ ಕಾಲ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.