ADVERTISEMENT

ಮಾರನ್ ವಿರುದ್ಧ ಲೇವಾದೇವಿ ಕೇಸ್

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2012, 19:30 IST
Last Updated 8 ಫೆಬ್ರುವರಿ 2012, 19:30 IST

 ನವದೆಹಲಿ (ಪಿಟಿಐ): ಜಾರಿ ನಿರ್ದೇಶನಾಲಯವು ಮಾಜಿ ಕೇಂದ್ರ ಸಚಿವ ದಯಾನಿಧಿ ಮಾರನ್ ಮತ್ತು ಸನ್ ಟಿವಿ ವ್ಯವಸ್ಥಾಪಕ ನಿರ್ದೇಶಕರಾದ ಕಲಾನಿಧಿ ಮಾರನ್ ವಿರುದ್ಧ 2ಜಿ ಸ್ಪೆಕ್ಟ್ರಂ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಲೇವಾದೇವಿ ಪ್ರಕರಣವೊಂದನ್ನು ದಾಖಲಿಸಿದೆ.

ಮಾರನ್ ಸೋದರರು ಏರ್‌ಸೆಲ್-ಮ್ಯಾಕ್ಸಿಸ್ ಒಪ್ಪಂದದಲ್ಲಿ ಸುಮಾರು 550 ಕೋಟಿ ರೂಪಾಯಿಗಳನ್ನು ಅಕ್ರಮವಾಗಿ ಲಂಚದ ರೂಪದಲ್ಲಿ ಪಡೆದಿರುವ ಆರೋಪ ಹೊತ್ತಿದ್ದು, ಇದರ ವಿರುದ್ಧ ಲೇವಾದೇವಿ ತಡೆ ಕಾಯ್ದೆಯಡಿ ಮಂಗಳವಾರ ಮೊಕದ್ದಮೆ ದಾಖಲಿಸಲಾಗಿದೆ.

ಮಾಜಿ ಕೇಂದ್ರ ದೂರಸಂಪರ್ಕ ಖಾತೆ ಸಚಿವರಾದ ದಯಾನಿಧಿಯವರು 2004-05ರಲ್ಲಿ ಟೆಲಿಕಾಂ ಲೈಸೆನ್ಸ್ ಮಂಜೂರು ಮಾಡುವಾಗ, ಏರ್‌ಸೆಲ್ ಬದಲಿಗೆ ಮಲೇಷ್ಯಾದ ಮ್ಯಾಕ್ಸಿಸ್ ಕಂಪೆನಿಗೆ ಅನುಕೂಲ ಮಾಡಿಕೊಟ್ಟಿರುವ ಆರೋಪದ ಮೇಲೆ ಕಳೆದ ವರ್ಷ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಆದರೆ ಈ ಆರೋಪವನ್ನು ಮಾರನ್ ಅಲ್ಲಗಳೆದಿದ್ದರು.

ಸಿಬಿಐ ಕೂಡ ದಯಾನಿಧಿ ಮತ್ತು ಕಲಾನಿಧಿ ಮೇಲಿನ ಆರೋಪಗಳ ಬಗ್ಗೆ ತನಿಖೆ ನಡೆಸುತ್ತಿದೆ. ಇದಲ್ಲದೆ, ತನಿಖಾ ಸಂಸ್ಥೆಯು ಈ ಒಪ್ಪಂದದಲ್ಲಿ ವಿದೇಶಿ ವಿನಿಮಯ ನಿಮಯಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಎಫ್‌ಐಆರ್‌ಗೆ ಸಮನಾದ ಇಸಿಐಆರ್ (ಮಾಹಿತಿ ವರದಿ ಜಾರಿ ಪ್ರಕರಣ) ಮೊಕದ್ದಮೆಯನ್ನು ದಾಖಲಿಸಿ ತನಿಖೆ ಮಾಡುತ್ತಿದೆ.

ತನಿಖಾ ಸಂಸ್ಥೆಯು ಎನ್‌ಡಿಎ ಸರ್ಕಾರದ ಅವಧಿಯಲ್ಲಾದ 2ಜಿ ಹಗರಣದಲ್ಲಿ ಮತ್ತೊಂದು ಮೊಕದ್ದಮೆಯನ್ನು ದಾಖಲಿಸಿಕೊಂಡಿದೆ. 2001-03ರ ಅವಧಿಯಲ್ಲಿ ಹೆಚ್ಚುವರಿ 2ಜಿ ಸ್ಪೆಕ್ಟ್ರಂ ಹಂಚಿಕೆಯ ಮಂಜೂರು ಅವ್ಯವಹಾರಗಳ ಆರೋಪದಲ್ಲಿ ಮಾಜಿ ಟೆಲಿಕಾಂ ಕಾರ್ಯದರ್ಶಿ ಶ್ಯಾಮಲ್ ಘೋಷ್, ಉಪಪ್ರಧಾನ ನಿರ್ದೇಶಕ ಜೆ.ಆರ್. ಗುಪ್ತ ಹಾಗೂ ಕೆಲವು ಟೆಲಿಕಾಂ ಕಂಪೆನಿಗಳನ್ನು ಹೆಸರಿಸಲಾಗಿದೆ. ಇದರೊಂದಿಗೆ ಸಿಬಿಐ ತನ್ನ ಇಸಿಐಆರ್‌ನಲ್ಲಿ ಹೆಸರಿಸಿರುವ ವ್ಯಕ್ತಿಗಳ ಹೇಳಿಕೆಗಳನ್ನು ಈಗ ದಾಖಲಿಸಿಕೊಳ್ಳುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.