ADVERTISEMENT

ಮೀಸಲಾತಿ ರದ್ದುಪಡಿಸಲು ಒತ್ತಾಯಿಸಿ ‘ಭಾರತ್‌ ಬಂದ್‌’ಗೆ ಕರೆನೀಡಿದ ಮಧ್ಯಪ್ರದೇಶದ ಸಂಘಟನೆಗಳು

ಏಜೆನ್ಸೀಸ್
Published 10 ಏಪ್ರಿಲ್ 2018, 4:01 IST
Last Updated 10 ಏಪ್ರಿಲ್ 2018, 4:01 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಭೋಪಾಲ್‌(ಮಧ್ಯಪ್ರದೇಶ): ‘ಜಾತಿ ಆಧರಿಸಿ ಇರುವ ಮೀಸಲಾತಿ ಸೌಲಭ್ಯವನ್ನು ರದ್ದುಪಡಿಸುವಂತೆ’ ಒತ್ತಾಯಿಸಿ ಇಲ್ಲಿನ ಕೆಲವು ಸಂಘಟನೆಗಳು ಬುಧವಾರ ‘ಭಾರತ್‌ ಬಂದ್‌’ಗೆ ಕರೆ ನೀಡಿವೆ. ಹಾಗಾಗಿ 144 ಸೆಕ್ಷನ್‌ ಅನ್ವಯ ನಗರದಾದ್ಯಂತ ನಿಷೇದಾಜ್ಞೆ ಜಾರಿ ಮಾಡಲಾಗಿದೆ.

ಬಂದ್‌ ವೇಳೆ ಅಹಿತಕರ ಘಟನೆಗಳನ್ನು ತಡೆಯಲು ರಾಜ್ಯ ಸರ್ಕಾರ ಸುಮಾರು 6 ಸಾವಿರ ಪೊಲೀಸ್‌ರನ್ನು ನಗರದಲ್ಲಿ ನಿಯೋಜಿಸಿದೆ.

‘ಸಾಮಾಜಿಕ ಜಾಲತಾಣಗಳ ಮೇಲೂ ನಾವು ಕಣ್ಣಿಟ್ಟಿದ್ದೇವೆ. ಆ ಮೂಲಕ ಗಾಳಿಸುದ್ದಿಗಳನ್ನು ಹಬ್ಬಿಸಿ, ಹಿಂಸೆಗೆ ಪ್ರದೋಚನೆ ನೀಡುವವರ ವಿರುದ್ಧ ಕಠಿಣ ಕ್ರಮ ಜರುಗಿಸುತ್ತೇವೆ. ನಿಷೇದಾಜ್ಞೆ ಇದ್ದರೂ ಶಾಲೆಗಳು ತೆರೆದಿರುತ್ತವೆ’ ಎಂದು ಭೋಪಾಲದ ಪೊಲೀಸ್‌ ಆಯುಕ್ತ ಅಜಾತಶತ್ರು ಶ್ರೀವಾಸ್ತವ ತಿಳಿಸಿದ್ದಾರೆ. 

ADVERTISEMENT

ಉದ್ಯೋಗ ಮತ್ತು ಶಿಕ್ಷಣದಲ್ಲಿ ಜಾತಿ ಆಧಾರಿತ ಮೀಸಲಾತಿ ವಿರೋಧಿಸುವ ಕೆಲವು ಸಂಘಟನೆಗಳು ಈ ಪ್ರತಿಭಟನೆಗೆ ಕರೆ ನೀಡಿವೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ರಾಜ್ಯದ ಸೂಕ್ಷ್ಮ ಪಟ್ಟಣಗಳಾದ ಗ್ವಾಲಿಯರ್‌, ಭಿಂದ್‌ ಮತ್ತು ಮೊರೆನಾ ಸೇರಿದಂತೆ ಹಲವಾರು ಜಿಲ್ಲಾ ಕೇಂದ್ರಗಳಲ್ಲೂ  ಈ ಬಂದ್‌ ಕಾರಣಕ್ಕಾಗಿ ಕಟ್ಟೆಚ್ಚರ ವಹಿಸಲಾಗಿದೆ. ಪೊಲೀಸ್‌ ಪಡೆಗಳು ಈ ಪ್ರದೇಶಗಳಲ್ಲಿ ನಿರಂತರವಾಗಿ ಗಸ್ತು ತಿರುಗುತ್ತಿವೆ. 

ಬಂದ್‌ನಿಂದ ಕಾನೂನು ಸುವ್ಯವಸ್ಥೆ ಹದಗೆಡದಂತೆ  ಮುನ್ನೆಚ್ಚರ ಕ್ರಮಗಳನ್ನು ವಹಿಸಲು ಕೇಂದ್ರ ಗೃಹ ಸಚಿವಾಲಯವು ಎಲ್ಲ ರಾಜ್ಯಗಳಿಗೆ ಸಲಹಾ ಸೂಚನಾಪತ್ರ ಹೊರಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.