ಪಟ್ನಾ (ಪಿಟಿಐ): ~ಮುಂದಿನ ಬಾರಿ ಕೇಂದ್ರದಲ್ಲಿ ಎನ್ ಡಿಎ ಅಧಿಕಾರದ ಚುಕ್ಕಾಣಿ ಹಿಡಿಯುವ ಎಲ್ಲಾ ಸಾಧ್ಯತೆಗಳಿವೆ~ ಎಂದು ಹಿರಿಯ ಬಿಜೆಪಿ ನಾಯಕ ಎಲ್. ಕೆ.ಅಡ್ವಾಣಿ ಅವರು ಬುಧವಾರ ಇಲ್ಲಿ ಭವಿಷ್ಯ ನುಡಿದಿದ್ದಾರೆ.
ಅದರೆ, ಅವರು ಮುಂದಿನ ಪ್ರಧಾನಿಯಾಗುವ ತಮ್ಮ ಪಕ್ಷದ ಅಭ್ಯರ್ಥಿಗಳ ಪಟ್ಟಿಯಲ್ಲಿ ತಮ್ಮ ಹೆಸರಿರಲಿದೆ ಎಂಬುದನ್ನು ಮಾತ್ರ ಖಚಿತಪಡಿಸಲಿಲ್ಲ.
ಮುಖ್ಯಮಂತ್ರಿ ನಿತಿಶ್ ಕುಮಾರ್ ಬೆಂಬಲದಲ್ಲಿ ಮಂಗಳವಾರ ಬಿಹಾರದಲ್ಲಿ ಆರಂಭವಾದ ತಮ್ಮ ಜನ ಚೇತನ ಯಾತ್ರೆಗೆ ಜನರಿಂದ ಲಭಿಸಿದ ಪ್ರೋತ್ಸಾಹದಿಂದ ಉತ್ತೇಜಿತರಾದಂತೆ ಕಂಡುಬಂದ ಅಡ್ವಾಣಿ ಅವರು, ಬುಧವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ~ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ ಯುಪಿಎ ಸರ್ಕಾರ ತನ್ನ ಪೂರ್ಣ ಅವಧಿಯನ್ನು ಪೂರೈಸಲಿದೆ~ ಎಂದು ಹೇಳಿದರು.
~ಸನಿಹದಲ್ಲೇ ಚುನಾವಣೆ ನಡೆಯುವ ಸಾಧ್ಯತೆಗಳು ಇಲ್ಲ. ಆದರೆ ಯುಪಿಎ ಸರ್ಕಾರದ ಆಡಳಿತದ ವೈಖರಿಯನ್ನು ಗಮನಿಸಿದರೆ, ಅವಧಿಗೆ ಮೊದಲೇ ಚುನಾವಣೆ ಘೋಷಣೆಯಾಗಬಹುದೆಂಬ ಅನುಮಾನಗಳು ಮೂಡುತ್ತಿವೆ. ಮುಂದಿನ ಬಾರಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಎಲ್ಲಾ ಸಾಧ್ಯತೆಗಳೂ ಇವೆ~ ಎಂದು ಅವರು ತಿಳಿಸಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಿದ್ದ ಅವರು, ~ಸದ್ಯಕ್ಕೇನು ಚುನಾವಣೆ ಹತ್ತಿರದಲ್ಲಿಲ್ಲ. ಚುನಾವಣೆ ಘೋಷಣೆಯಾಗುತ್ತಿದ್ದಂತೆಯೇ ಪಕ್ಷವು ತನ್ನ ಪ್ರಧಾನಿ ಅಭ್ಯರ್ಥಿಯ ಹೆಸರಿನ ಕುರಿತಂತೆ ನಿರ್ಧಾರ ಕೈಗೊಳ್ಳಲಿದೆ~ ಎಂದರು. ಜೊತೆಗೆ, ~ಕಳೆದ 2009ರ ಸಾರ್ವತ್ರಿಕ ಚುನಾವಣೆಯ ಸಂದರ್ಭದಲ್ಲೂ ತಾವು ಪ್ರಧಾನಿ ಅಭ್ಯರ್ಥಿ ಎಂದು ಹೇಳಿಕೊಂಡಿಲ್ಲ~ ಎಂದು ಅವರು ಸ್ಪಷ್ಟಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.