ಚೆನ್ನೈ (ಪಿಟಿಐ): ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಏಳು ಮಂದಿ ರಾಜೀವ್ ಗಾಂಧಿ ಹಂತಕರು ಬಿಡುಗಡೆ ಮಾಡುವ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ತೀರ್ಮಾನವನ್ನು ಹಿರಿಯ ನ್ಯಾಯವಾದಿ ರಾಂ ಜೇಠ್ಮಲಾನಿ ಸಮರ್ಥಿಸಿಕೊಂಡಿದ್ದಾರೆ.
ಮರಣ ದಂಡನೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸುವಂತೆ ಕೋರಿ ಆರೋಪಿಗಳಾದ ಸಾಂತನ್, ಮುರುಗನ್ ಮತ್ತು ಪೆರಾರಿವಲನ್ ಪರವಾಗಿ ಸುಪ್ರೀಂ ಕೋರ್ಟಿನಲ್ಲಿ ವಾದ ಮಂಡಿಸಿದ್ದ ಜೇಠ್ಮಲಾನಿ, ‘ಎಲ್ಲಾ ಏಳು ಮಂದಿಯ ಬಿಡುಗಡೆಗೆ ತೆಗೆದುಕೊಂಡ ತೀರ್ಮಾನ ಸರ್ಕಾರದ ಇತಿ ಮಿತಿಯಲ್ಲಿಯೇ ಇದೆ’ ಎಂದು ಹೇಳಿದರು.
ಆರೋಪಿಗಳ ಪರವಾಗಿ ವಾದ ಮಂಡಿಸಿದಕ್ಕಾಗಿ ಎಂಡಿಎಂಕೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಜೇಠ್ಮಲಾನಿ, ಗಲ್ಲು ಶಿಕ್ಷೆಗೆ ಒಳಗಾಗಿದ್ದ ನಳಿನಿಗೆ ಕ್ಷಮಾಧಾನ ನೀಡಿ, ಜೀವಾವಧಿ ಶಿಕ್ಷೆಯನ್ನಾಗಿ ಪರಿವರ್ತಿಸಿದ್ದು, ರಾಜ್ಯದ ರಾಜ್ಯಪಾಲರು ಎಂದರು.
‘ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಅಂಶಗಳ ಆಧಾರದ ಮೇಲೆಯೇ ಜಯಲಲಿತಾ ಅವರು ಸೂಕ್ತ ನಿರ್ಧಾರ ಕೈಗೊಂಡಿದ್ದಾರೆ’ ಎಂದು ಹೇಳಿದರು.
ಅವರು (ಜಯಲಲಿತಾ) ತಮ್ಮ ನಿರ್ಧಾರಕ್ಕೆ ಅಂಟಿಕೊಂಡು ಎಲ್ಲಾ 7 ಮಂದಿ ಆರೋಪಿಗಳನ್ನು ಬಿಡುಗಡೆ ಮಾಡುತ್ತಾರೆ ಎನ್ನುವ ವಿಶ್ವಾಸವನ್ನು ಜೇಠ್ಮಲಾನಿ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.