ರಾಮೇಶ್ವರಂ (ಪಿಟಿಐ): ಎಂಭತ್ತು ಕಿ.ಮೀ. ವೇಗದೊಂದಿಗೆ ಬೀಸಿದ ಬಿರುಗಾಳಿ ಮತ್ತು ಭಾರಿ ಮಳೆಯ ಪರಿಣಾಮವಾಗಿ ಇಲ್ಲಿನ ಹಲವಾರು ಮನೆಗಳ ಛಾವಣಿಗಳು ಹಾರಿ ಹೋಗಿದ್ದು, ಇಲ್ಲಿ ಲಂಗರುಹಾಕಿದ್ದ ಸುಮಾರು 100ಕ್ಕೂ ಹೆಚ್ಚು ಯಾಂತ್ರಿಕ ದೋಣಿಗಳು ಹಾನಿಗೊಳಗಾಗಿವೆ.
ಗುರುವಾರ ರಾತ್ರಿ ಬೀಸಿದ ಬಿರುಗಾಳಿ ಮತ್ತು ಸಮುದ್ರದ ಅಲೆಗಳ ಅಬ್ಬರಕ್ಕೆ ಪರಸ್ಪರ ಡಿಕ್ಕಿ ಹೊಡೆದುಕೊಂಡ ದೋಣಿಗಳು ತೀವ್ರವಾಗಿ ಹಾನಿಗೊಂಡಿವೆ ಎಂದು ಮೀನುಗಾರಿಕಾ ತರಬೇತಿ ಸಹಾಯಕ ನಿರ್ದೇಶಕ ಕ್ಸೇವಿಯರ್ ಅವರು ಸ್ಥಳಕ್ಕೆ ಭೇಟಿ ನೀಡಿದ ವರದಿಗಾರರಿಗೆ ತಿಳಿಸಿದರು.
ಪ್ರತಿಯೊಂದು ದೋಣಿಯ ಬೆಲೆ 10 ಲಕ್ಷ ರೂಪಾಯಿಯಷ್ಟಿದ್ದು, ಅವುಗಳ ದುರಸ್ತಿಗೆ ಕನಿಷ್ಠ 4 ಲಕ್ಷ ರೂಪಾಯಿಗಳು ಬೇಕಾಗಬಹುದು ಎಂದು ಅವರು ನುಡಿದರು.
ಇನ್ನೂ ನಾಲ್ಕುಮಂದಿ ಮೀನುಗಾರರ ಸಾವಿನ ದುಃಖದಲ್ಲಿ ಇರುವಾಗಲೇ ಸಂಭವಿಸಿರುವ ಈ ಅನಾಹುತ ನಮಗೆ ಇನ್ನೊಂದು ಹೊಡೆತ ಎಂದು ಮೀನುಗಾರಿಕಾ ಸಂಘದ ಅಧ್ಯಕ್ಷ ಯೇಸುರಾಜನ್ ಹೇಳಿದರು.
ನಾಲ್ಕು ಮಂದಿ ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಸಿಬ್ಬಂದಿ ಕೊಂದು ಹಾಕಿದ್ದಾರೆ ಎನ್ನಲಾಗಿದ್ದು ಮೃತರ ಶವಗಳು ಇತ್ತೀಚೆಗಷ್ಟೇ ಪತ್ತೆಯಾಗಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.