ಲಕ್ನೊ (ಐಎಎನ್ಎಸ್): ರಾಷ್ಟ್ರೀಯ ಸ್ವಯಂಸೇವಕ ಸಂಘವು (ಆರ್ಎಸ್ಎಸ್) ಮಹಾತ್ಮಾ ಗಾಂಧಿ ಅವರನ್ನು ಹತ್ಯೆ ಮಾಡಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ವಿರುದ್ಧ ಮಂಗಳವಾರ ವಕೀಲರೊಬ್ಬರು ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.
`ಪಿಪಲ್ ಫಾರ್ ಲಿಗಲ್ ಏಡ್ ಸೊಸೈಟಿ'ಯ ಸಂಚಾಲಕರು, ವೃತ್ತಿಯಿಂದ ವಕೀಲರಾಗಿರುವ ಸಾನು ಶುಕ್ಲಾ ಅವರು ಉತ್ತರ ಪ್ರದೇಶದ ಲಖಿಮ್ಪುರ್ ಖೇರಿ ಜಿಲ್ಲೆಯಲ್ಲಿ ರಾಹುಲ್ ವಿರುದ್ಧ ಮೊಕದ್ದಮೆ ಹೂಡಿದ್ದಾರೆ.
ಮಹಾತ್ಮಾ ಗಾಂಧಿ ಅವರ ಹತ್ಯೆ ಕುರಿತಂತೆ ತನಿಖಾ ದಳಗಳು ಮತ್ತು ಕಫೂರ್ ಆಯೋಗವು ನೀಡಿರುವ ವರದಿಗಳಲ್ಲಿ ಗಾಂಧಿ ಅವರ ಹತ್ಯೆಯಲ್ಲಿ ಆರ್ಎಸ್ಎಸ್ನದು ಯಾವುದೇ ಪಾತ್ರವಿಲ್ಲವೆಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ ಎಂದು ಶುಕ್ಲಾ ದೂರಿನಲ್ಲಿ ತಿಳಿಸಿದ್ದಾರೆ.
ಮಾರ್ಚ್ 6ರಂದು ಮಹಾರಾಷ್ಟ್ರದಲ್ಲಿ ನಡೆದ ಚುನಾವಣಾ ರ್ಯಾಲಿಯ ವೇಳೆ ರಾಹುಲ್ ಗಾಂಧಿ ಅವರು ಆರ್ಎಸ್ಎಸ್ ಮಹಾತ್ಮಾ ಗಾಂಧಿ ಅವರನ್ನು ಹತ್ಯೆ ಮಾಡಿತು ಎಂದು ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.