ADVERTISEMENT

ರೆಡ್ಡಿದ್ವಯರ ಪಾಲಿಗೆ ಕವಿದ ಕಾರ್ಮೋಡ...

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2011, 19:30 IST
Last Updated 7 ಸೆಪ್ಟೆಂಬರ್ 2011, 19:30 IST

ಹೈದರಾಬಾದ್:  ಅಕ್ರಮ ಗಣಿಗಾರಿಕೆ ಆರೋಪಗಳಡಿ ಸಿಬಿಐನಿಂದ ಬಂಧಿತರಾಗಿರುವ ಕರ್ನಾಟಕದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಮತ್ತು ಓಬಳಾಪುರಂ ಕಂಪೆನಿ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ ರೆಡ್ಡಿ ಜಾಮೀನು ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ಗುರುವಾರಕ್ಕೆ ಮುಂದೂಡಿದೆ. ಇದೇ ವೇಳೆ ಇಬ್ಬರ ಜಾಮೀನು ಕೋರಿಕೆ ಬಗ್ಗೆ ಆಕ್ಷೇಪಣಾ ಅರ್ಜಿ ಸಲ್ಲಿಸಲು ಸಿಬಿಐಗೂ ಸೂಚಿಸಿದೆ. ಹೀಗಾಗಿ ರೆಡ್ಡಿ ದ್ವಯರಿಗೆ ಶೀಘ್ರ ಜಾಮೀನು ಸಿಗುವ ಬಗ್ಗೆ ಅನುಮಾನ ಮೂಡಿದೆ.

ರೆಡ್ಡಿದ್ವಯರನ್ನು ಹೆಚ್ಚಿನ ವಿಚಾರಣೆಗಾಗಿ ತಮ್ಮ ವಶಕ್ಕೆ ನೀಡಲು ಕೋರಿ ಸಿಬಿಐ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನೂ  ನ್ಯಾಯಾಲಯ ಗುರುವಾರ ಕೈಗೆತ್ತಿಕೊಳ್ಳಲಿದೆ.

ಬುಧವಾರ ವಿಚಾರಣೆ ವೇಳೆ ಜನಾರ್ದನ ರೆಡ್ಡಿ ಪರ  ಹಿರಿಯ ವಕೀಲ ಉದಯ್ ಲಲಿತ್ ತಮ್ಮ ಕಕ್ಷಿದಾರ ಜಾಮೀನು ಪಡೆಯಲು ಅರ್ಹ ಎಂದು ವಾದಿಸಿದರು.

`ಕಕ್ಷಿದಾರನ ವಿರುದ್ಧ ಮಾಡಿರುವ ಆರೋಪಗಳ ಬಗ್ಗೆ ಸಿಬಿಐ ಯಾವುದೇ ಪ್ರಬಲ ಸಾಕ್ಷ್ಯ ನೀಡಿಲ್ಲ. ಯಾವುದೇ ಕಾರ್ಪೊರೇಟ್ ಕಂಪೆನಿ ಅಕ್ರಮ ವ್ಯವಹಾರ ನಡೆಸಿದ್ದರೆ ಮಾತ್ರ ಆ ಕಂಪೆನಿಯನ್ನು ಪ್ರತಿನಿಧಿಸುವ ವ್ಯಕ್ತಿಯನ್ನು ತನಿಖೆಗೆ ಒಳಪಡಿಸಬಹುದು. ಆದರೆ ಜನಾರ್ದನ ರೆಡ್ಡಿ ಓಬಳಾಪುರಂ ಕಂಪೆನಿ ದಿನನಿತ್ಯದ ವ್ಯವಹಾರದಲ್ಲಿ ಯಾವ ಪಾತ್ರವನ್ನೂ ನಿರ್ವಹಿಸುತ್ತಿರಲಿಲ್ಲ. ಆದ್ದರಿಂದ ಅವರ ಬಂಧನ ಅಕ್ರಮ~ ಎಂದರು.
ಆದರೆ ಸಿಬಿಐ ನ್ಯಾಯಾಧೀಶ ನಾಗ ಮಾರುತಿ ಶರ್ಮ ಈ ವಾದವನ್ನು ಪುರಸ್ಕರಿಸಲಿಲ್ಲ.

ಸಿಬಿಐ ಪರ ಟಿ.ವೆಂಕಟರಾಮನ್ ವಾದಿಸಿ, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಬೇಕೋ ಅಥವಾ ಒಪ್ಪಿಸಬಾರದೋ ಎನ್ನುವುದು ನ್ಯಾಯಾಲಯದ ವಿವೇಚನೆಗೆ ಬಿಟ್ಟ ಸಂಗತಿ. ಆರೋಪಿಗಳ ಗಣಿ ಚಟುವಟಿಕೆಗಳ ಬಗ್ಗೆ ಸಿಬಿಐ 2009ರಿಂದ ಅನ್ವಯವಾಗುವಂತೆ ತನಿಖೆ ನಡೆಸಿ, ಪ್ರಬಲ ಪುರಾವೆಗಳನ್ನು ಕಲೆಹಾಕಿದೆ. ಇದನ್ನು ಸೂಕ್ತ ಸಮಯದಲ್ಲಿ ನ್ಯಾಯಾಲಯದ ಮುಂದೆ ಸಲ್ಲಿಸಲಾಗುವುದು ಎಂದರು.

ಅಕ್ರಮ ಗಣಿಗಾರಿಕೆ ನಡೆದದ್ದೆಲ್ಲಿ? ಅದಿರನ್ನು ಎಲ್ಲಿಗೆ ಸಾಗಿಸಲಾಯಿತು? ಯಾರಿಗೆ ಮಾರಾಟ ಮಾಡಲಾಯಿತು? ಇದರಲ್ಲಿ ಭಾಗಿಯಾಗಿರುವ ಇನ್ನಿತರರು ಯಾರು? ಈ ಚಟುವಟಿಕೆಗಳಿಗೆ ಅನುಕೂಲ ಮಾಡಿಕೊಟ್ಟ ಅಧಿಕಾರಿಗಳು ಯಾರು?- ಇತ್ಯಾದಿಗಳ ಬಗ್ಗೆ ಹೆಚ್ಚಿನ ತನಿಖೆ ನಡೆಸಬೇಕಿದೆ. ಹೀಗಾಗಿ ಆರೋಪಿಗಳನ್ನು 15 ದಿನಗಳ ಕಾಲ ಸಿಬಿಐ ವಶಕ್ಕೆ ನೀಡಬೇಕು ಎಂದರು. ನ್ಯಾಯಾಧೀಶರು, ಗುರುವಾರ ಬೆಳಿಗ್ಗೆ ಪ್ರತಿ ಪ್ರಮಾಣಪತ್ರ ಸಲ್ಲಿಸುವಂತೆ ಸಿಬಿಐಗೆ ನಿರ್ದೇಶಿಸಿದರು.

ಶ್ರೀನಿವಾಸ ರೆಡ್ಡಿ ಕೂಡ, ಓಬಳಾಪುರಂ ಕಂಪೆನಿಯ ಪ್ರತಿದಿನದ ವ್ಯವಹಾರದಲ್ಲಿ ತಮ್ಮದೇನೂ ಪಾತ್ರವಿಲ್ಲ ಎಂದರು. ಅಷ್ಟೇ ಅಲ್ಲದೆ, ಗಣಿ ಕಾಯಿದೆಗೆ ಸಂಬಂಧಿಸಿದ ಪ್ರಕರಣಗಳ ತನಿಖೆ ನಡೆಸಲು ಸಿಬಿಐ ಗೆ ಯಾವುದೇ ಅಧಿಕಾರವಿಲ್ಲ ಎಂದು ಕೂಡ ವಾದಿಸಿದರು.

ಗಣಿ ಇಲಾಖೆ ಅನುಮತಿ ಪಡೆದು ನಿಗದಿತ ಮೊತ್ತ ಪಾವತಿಸಿದ ನಂತರವೇ ಕಂಪೆನಿಯು ಗಣಿ ಚಟುವಟಿಕೆ ನಡೆಸಿದೆ. ಸುಪ್ರೀಂಕೋರ್ಟ್ ನೇಮಿಸಿದ ಉನ್ನತಾಧಿಕಾರ ಸಮಿತಿ ಕೂಡ, ಗಣಿ ಪ್ರದೇಶಗಳ ಗಡಿ ಬಗ್ಗೆ ವರದಿಯಲ್ಲಿ ಒತ್ತಿ ಹೇಳಿದೆಯೇ ವಿನಃ ಎಫ್‌ಐಆರ್ ದಾಖಲಿಸಲು ಸಿಬಿಐಗೆ ನಿರ್ದೇಶನ ನೀಡಿಲ್ಲ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT