ಪಟನಾ: ವಿದೇಶಿ ಪ್ರತಿನಿಧಿಗಳು ಭಾರತಕ್ಕೆ ಭೇಟಿ ನೀಡಿದಾಗ ಅವರಿಗೆ ತಾಜ್ ಮಹಲ್ ಪ್ರತಿಕೃತಿಯನ್ನು ಉಡುಗೊರೆಯಾಗಿ ನೀಡುವ ಬದಲು ಭಗವದ್ಗೀತೆ, ರಾಮಾಯಣ ಗ್ರಂಥಗಳನ್ನು ನೀಡಿ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ ಯೋಗಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಮೂರನೇ ವರ್ಷ ಆಚರಣೆಯ ಪ್ರಯುಕ್ತ ಬಿಹಾರದ ದರ್ಭಾಂಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆದಿತ್ಯನಾಥ ಈ ಮಾತನ್ನಾಡಿದ್ದಾರೆ.
ವಿದೇಶಿ ಪ್ರತಿನಿಧಿಗಳಿಗೆ ಆಗ್ರಾದಲ್ಲಿರುವ ತಾಜ್ ಮಹಲ್ ಅಥವಾ ಇತರ ಮಿನಾರ್ಗಳ ಪ್ರತಿಕೃತಿಗಳನ್ನು ಉಡುಗೊರೆಯಾಗಿ ನೀಡಲಾಗುತ್ತದೆ. ಈ ಸ್ಮಾರಕಗಳು ಭಾರತೀಯ ಸಂಸ್ಕೃತಿಯೊಂದಿಗೆ ಯಾವುದೇ ನಂಟು ಹೊಂದಿಲ್ಲ.
ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶ ಪ್ರವಾಸ ಹೋದಾಗ ಅಥವಾ ಬೇರೆ ರಾಷ್ಟ್ರದ ಪ್ರತಿನಿಧಿಗಳು ಭಾರತಕ್ಕೆ ಭೇಟಿ ನೀಡಿದಾಗ ಮೋದಿಯವರು ಭಗವದ್ಗೀತೆ ಅಥವಾ ರಾಮಾಯಣವನ್ನೇ ಉಡುಗೊರೆಯಾಗಿ ನೀಡುತ್ತಾರೆ. ವಿದೇಶದ ಪ್ರತಿನಿಧಿಗೆ ರಾಮಾಯಣವನ್ನು ಉಡುಗೊರೆ ನೀಡಿದರೆ, ಅದು ಬಿಹಾರದ ಇತಿಹಾಸವನ್ನು ಎತ್ತಿ ತೋರಿಸಿದಂತಾಗುತ್ತದೆ ಎಂದಿದ್ದಾರೆ ಆದಿತ್ಯನಾಥ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.