ನವದೆಹಲಿ (ಪಿಟಿಐ): ಕೇಂದ್ರ ಜಾಗೃತ ಆಯುಕ್ತ (ಸಿವಿಸಿ) ಪಿ.ಜೆ.ಥಾಮಸ್ ಅವರ ’ನೇಮಕಾತಿ ವಿವಾದ’ ಈಗ ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ಹಾಗೂ ಲೋಕಸಭೆ ವಿರೋಧಪಕ್ಷ ನಾಯಕಿ ಸುಷ್ಮಾ ಸ್ವರಾಜ್ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ.
ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ತ್ರಿಸದಸ್ಯ ಆಯ್ಕೆ ಸಮಿತಿಯ ಹಾದಿ ತಪ್ಪಿಸುವ ಕೆಲಸವನ್ನು ಚಿದಂಬರಂ ಮಾಡಿದ್ದರು ಎಂದು ಸುಷ್ಮಾ ಆರೋಪಿಸಿದ್ದರು. ಇದನ್ನು ಸಾರಾಸಗಟಾಗಿ ತಳ್ಳಿಹಾಕಿರುವ ಚಿದಂಬರಂ, ‘ಸುಷ್ಮಾ ಸ್ವರಾಜ್ ಅವರು ‘ವಿಚಾರ ರಹಿತ’ ಹೇಳಿಕೆ ನೀಡುತ್ತಿದ್ದಾರೆ.
ಇಂತಹ ಹೇಳಿಕೆಗಳ ಮೂಲಕ ಸ್ವತಃ ಇಕ್ಕಟ್ಟಿಗೆ ಸಿಲುಕಲಿದ್ದಾರೆ’ ಎಂದಿದ್ದಾರೆ. ‘ಆಯ್ಕೆ ಸಮಿತಿಗೆ ಪಾಮೋಲಿನ್ ಹಗರಣದ ಬಗ್ಗೆ ಅರಿವಿತ್ತು’ ಎಂದಷ್ಟೇ ಹೇಳಿದ್ದೆ ಎಂಬುದಾಗಿ ಅವರು ತಮ್ಮ ಮಾತುಗಳನ್ನು ಸಮರ್ಥಿಸಿ ಕೊಂಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಸುಷ್ಮಾ, ‘ಸಚಿವರ ಹೇಳಿಕೆಗಳು ಅವಾಸ್ತವ ಅಂಶಗಳಿಂದ ಕೂಡಿವೆ. ಜಾಣ್ಮೆಯ ಮಾತುಗಳಾಗಿವೆ’ ಎಂದರು.‘ಸಚಿವರು ಥಾಮಸ್ ವಿರುದ್ಧ ಇಂತಹ ಪ್ರಕರಣ ವಿಚಾರಣೆಯಲ್ಲಿದೆ ಎಂಬುದನ್ನೇ ಬಚ್ಚಿಟ್ಟಿದ್ದರು. ನಾನು ಇದನ್ನು ಬಹಿರಂಗಪಡಿಸಿದ ಸಂದರ್ಭದಲ್ಲಿ ಥಾಮಸ್ ದೋಷಮುಕ್ತರಾಗಿದ್ದಾರೆ ಎಂದಿದ್ದರು’ ಎಂದು ಸುಷ್ಮಾ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.