ADVERTISEMENT

ಸ್ಥಳೀಯ ನಾಯಕರಿಂದ ಹಣ ಪಡೆದ ಆರೋಪ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2012, 19:30 IST
Last Updated 20 ಫೆಬ್ರುವರಿ 2012, 19:30 IST

ಲಖನೌ (ಪಿಟಿಐ): ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇಲೆ ನಾಗರಿಕ ವಿಮಾನಯಾನ ಸಚಿವ ಅಜಿತ್‌ಸಿಂಗ್ ಪುತ್ರ ಮತ್ತು ಆರ್‌ಎಲ್‌ಡಿ ಮುಖಂಡ ಜಯಂತ್ ಚೌಧರಿ ಅವರಿಗೆ ಚುನಾವಣಾ ಆಯೋಗ ಸೋಮವಾರ ನೋಟಿಸ್ ಜಾರಿಗೊಳಿಸಿದೆ.

ಮಥುರಾದಲ್ಲಿ ಚುನಾವಣಾ ಸಭೆಯಲ್ಲಿ ಸ್ಥಳೀಯ ನಾಯಕರೊಬ್ಬರಿಂದ ಹಣ ತೆಗೆದುಕೊಂಡ ದೃಶ್ಯ ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿತ್ತು. 

 `ಚೌಧರಿ ಅವರಿಗೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಲಾಗಿದೆ. ಗೋವರ್ಧನ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಮೊಗರ‌್ರಾ ಪ್ರದೇಶದಲ್ಲಿ ಚೌಧರಿ ಅವರು ಪಕ್ಷದ ಕಾರ್ಯಕರ್ತನಿಂದ ಹಣ ಪಡೆಯುತ್ತಿರುವ ದೃಶ್ಯವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದೆ~ ಎಂದು ನಗರ ಹೆಚ್ಚುವರಿ ಉಪ ಜಿಲ್ಲಾಧಿಕಾರಿ ರಾಮ ಅವತಾರ್ ರಾಮನ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಚುನಾವಣಾ ಸಭೆಯಲ್ಲಿ ಚೌಧರಿ ಅವರು 70 ಸಾವಿರ ರೂ. ಸ್ವೀಕರಿಸುತ್ತಿರುವ ದೃಶ್ಯವನ್ನು ಭಾನುವಾರ ಸೆರೆಹಿಡಿಯಲಾಗಿತ್ತು.  ಇದರ ಜೊತೆಗೆ ಚೌಧರಿ ಅವರಿಗೆ ಹಣ ನೀಡಿದ ಪಕ್ಷದ ಕಾರ್ಯಕರ್ತ ಗೋವರ್ಧನ ಮೇಘ ಶಾಮಸಿಂಗ್ ಅವರಿಗೂ ಆಯೋಗ ನೋಟಿಸ್ ಜಾರಿಗೊಳಿಸಿದೆ.

 ನೋಟಿಸ್ ಬಗ್ಗೆ ಪ್ರತಿಕ್ರಿಯಿಸಿದ ಚೌಧರಿ, `ಹಣ ಪಡೆದಿರುವುದರಲ್ಲಿ ಯಾವುದೇ ತಪ್ಪಿಲ್ಲ. ಇದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗುವುದಿಲ್ಲ. ಚುನಾವಣೆಯಲ್ಲಿ ಸ್ಪರ್ಧಿಸಲು ಅಭ್ಯರ್ಥಿಗಳು ಜನರಿಂದ ಹಣ ಪಡೆಯುವ ಅಧಿಕಾರ ಹೊಂದಿದ್ದಾರೆ ಎಂದು ಹೇಳಿದ್ದಾರೆ.ಚೌಧರಿ ಅವರು ಈಗ ಮಥುರಾ ಕ್ಷೇತ್ರದ ಸಂಸತ್ ಸದಸ್ಯರಾಗಿದ್ದು, ಮಾಂತ್ ವಿಧಾನಸಭಾ ಕ್ಷೇತ್ರದ ಚುನಾವಣೆಗೂ ಸ್ಪರ್ಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.