ನವದೆಹಲಿ (ಪಿಟಿಐ): ತಮ್ಮ ಹೆಸರಿಗೆ ಕಳಂಕ ಹಚ್ಚುವ ಹೇಳಿಕೆ ನೀಡುತ್ತಿರುವ ಕಾಂಗ್ರೆಸ್ ನಾಯಕರ ವರ್ತನೆ ಬಗೆಗೆ ಸೋನಿಯಾ ಗಾಂಧಿ ಅವರಿಗೆ ಹಜಾರೆ ಅವರು ಬರೆದಿದ್ದ ಪತ್ರಕ್ಕೆ ಸೋನಿಯಾ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ.
ತಾನು ತನ್ನ ಅಭಿಪ್ರಾಯಗಳನ್ನು ಈ ಹಿಂದಿನ ಪತ್ರದಲ್ಲಿಯೇ ತಿಳಿಸಿದ್ದೇನೆ ಎಂದಷ್ಟೇ ಸೋನಿಯಾ ಅವರು ತೀಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
~ನಿಮ್ಮ 9 ಜೂನ್ 2011ರ ಪತ್ರ ನನಗೆ ತಲುಪಿದೆ. ನಾನು ದೆಹಲಿಯಲ್ಲಿ ಇರದಿದ್ದುದರಿಂದ ಉತ್ತರಿಸಲಾಗಲಿಲ್ಲ~ ಎಂದು ಹೇಳಿರುವ ಸೋನಿಯಾ, ~ಯಾರ ವಿರುದ್ಧವೂ ಕಳಂಚ ಹಚ್ಚುವ ಪ್ರಚಾರಕ್ಕೆ ನಾನು ವಿರುದ್ಧವಾಗಿದ್ದೇನೆ~ ಎಂಬುದಾಗಿ ಬರೆದ ಎಪ್ರಿಲ್ 19ರ ಪತ್ರವನ್ನು ಉಲ್ಲೇಖಿಸಿ ಅದರಲ್ಲೇ ತನ್ನ ನಿಲುವನ್ನು ತಿಳಿಸಿರುವುದಾಗಿ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷದ ಮಾಧ್ಯಮ ವಿಭಾಗದ ಜನಾರ್ದನ ದ್ವಿವೇದಿ ಅವರು ಹಜಾರೆ ಅವರು ಆರ್ಎಸ್ಎಸ್ ಸಂಘಟನೆಯ ಮುಖವಾಡ ಎಂದು ಜರೆದಿದ್ದನ್ನು ಪ್ರಶ್ನಿಸಿದ್ದ ಹಜಾರೆ ಅವರು ಸೋನಿಯಾ ಅವರಿಗೆ ಈ ಆರೋಪವನ್ನು ಸಾಬೀತು ಮಾಡುವಂತೆ ಪತ್ರ ಬರೆದಿದ್ದರು.
ತಮ್ಮ ಹೆಸರಿಗೆ ಕಳಂಕ ಹಚ್ಚುವ ಇಂತಹ ಅಪಪ್ರಚಾರಗಳನ್ನು ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಯುಪಿಎ ಯ ಸಚಿವರು ಮಾಡುತ್ತಿರುವುದು ತಮಗೆ ತೀವ್ರ ನೋವನ್ನುಂಟು ಮಾಡಿದೆ ಎಂದು ಹಜಾರೆ ಪತ್ರದಲ್ಲಿ ತಿಳಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.