ನವದೆಹಲಿ: ದೇಶದ ಪ್ರಮುಖ ಸ್ಥಳಗಳಲ್ಲಿ ಹಾಗೂ ಗಣ್ಯರ ಮೇಲೆ ಆತ್ಮಾಹುತಿ ಬಾಂಬ್ ದಾಳಿಗೆ ಯೋಜನೆ ರೂಪಿಸುತ್ತಿದ್ದ ಐಸಿಸ್ ಪ್ರಭಾವಿತ ಗುಂಪಿನ 10 ಮಂದಿ ಸದಸ್ಯರನ್ನು ಬಂಧಿಸಿದ್ದ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ), ಗುರುವಾರ ದೆಹಲಿ ಕೋರ್ಟ್ಗೆ ಹಾಜರು ಪಡಿಸಿತು. ಶಂಕಿತ ಉಗ್ರರನ್ನು ಕೋರ್ಟ್ 12 ದಿನ ಎನ್ಐಎ ವಶಕ್ಕೆ ನೀಡಿದೆ.
ಎನ್ಐಎ ವಿಚಾರಣೆಗೆ ಒಳಪಡಿಸಿದ್ದ 16 ಮಂದಿಯ ಪೈಕಿ ಹತ್ತು ಜನರನ್ನು ಬುಧವಾರ ಬಂಧಿಸಿತ್ತು. ಪೂರ್ಣ ಮುಖ ಮುಚ್ಚುವಂತ ಗವಸು ಹಾಕಿಸಿ ಬಿಗಿ ಭದ್ರತೆಯಲ್ಲಿ 10 ಶಂಕಿತ ಉಗ್ರರನ್ನು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಅಜಯ್ ಪಾಂಡೆ ಅವರ ಮುಂದೆ ಹಾಜರುಪಡಿಸಲಾಯಿತು. ಈ ಪ್ರಕರಣದಲ್ಲಿ ಖಾಸಗಿ ವಿಚಾರಣೆಗೆ ಕೋರ್ಟ್ ಆದೇಶಿಸಿದೆ.
ದೆಹಲಿ. ಅಮರೋಹಾ, ಲಖನೌ ಹಾಗೂ ಮೀರತ್ ಸೇರಿ 17 ಸ್ಥಳಗಳಲ್ಲಿ ಪರಿಶೀಲನೆ ನಡೆಸಿದ್ದ ಎನ್ಐಎ ಬುಧವಾರ ಶಂಕಿತ ಉಗ್ರರನ್ನು ವಶಕ್ಕೆ ಪಡೆದಿತ್ತು. ನಾಲ್ಕು ತಿಂಗಳಿಂದ ಗುಂಪಿನ ಚಟುವಟಿಕೆಗಳ ಮೇಲೆ ನಿಗಾವಹಿಸಿದ್ದ ತನಿಖಾ ತಂಡ ನಿನ್ನೆ ಏಕಕಾಲದಲ್ಲಿ ದಾಳಿ ನಡೆಸಿ, 12 ಪಿಸ್ತೂತ್ಗಳು, ರಾಕೆಟ್ ಲಾಂಚರ್, ಸ್ಫೋಟಕ ತಯಾರಿಸಲು ಬಳಸುವ ರಾಸಾಯನಿಕ ವಸ್ತುಗಳು, ಮೊಬೈಲ್ ಫೋನ್ಗಳು ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಉತ್ತರ ಪ್ರದೇಶ ಮತ್ತು ದೆಹಲಿಯ ಉಗ್ರರ ಘಟಕವು ಹೊಸ ವರ್ಷಕ್ಕೂ ಮುನ್ನ ಹಾಗೂ ಗಣರಾಜ್ಯೋತ್ಸವದ ದಿನ ಕೆಲವು ಪ್ರಮುಖ ಕಚೇರಿಗಳು, ಗಣ್ಯರನ್ನು ಸ್ಫೋಟಿಸುವ ಯೋಜನೆ ರೂಪಿಸಿದ್ದರು ಎನ್ನಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.