ADVERTISEMENT

ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ: ತರೂರ್ ಸಭೆಗೆ ಕೇವಲ 12 ಪ್ರತಿನಿಧಿಗಳು ಹಾಜರು

ಏಜೆನ್ಸೀಸ್
Published 7 ಅಕ್ಟೋಬರ್ 2022, 2:20 IST
Last Updated 7 ಅಕ್ಟೋಬರ್ 2022, 2:20 IST
ಶಶಿ ತರೂರ್‌ (ಪಿಟಿಐ ಚಿತ್ರ)
ಶಶಿ ತರೂರ್‌ (ಪಿಟಿಐ ಚಿತ್ರ)   

ಚೆನ್ನೈ: ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿರುವ ಕೇರಳದ ತಿರುವನಂತಪುರ ಸಂಸದ ಶಶಿ ತರೂರ್‌ ಅವರು ತಮಿಳುನಾಡಿನಲ್ಲಿ ಗುರುವಾರ ತೀವ್ರಹಿನ್ನಡೆ ಅನುಭವಿಸಿದ್ದಾರೆ.

66 ವರ್ಷದ ತರೂರ್‌,ಚುನಾವಣೆಯಲ್ಲಿ ಮತದಾನ ಮಾಡಲಿರುವ 700 ಪ್ರತಿನಿಧಿಗಳ ಬೆಂಬಲ ಕೋರಲು ಚೆನ್ನೈನಲ್ಲಿ ಸಮಾವೇಶ ನಡೆಸಿದ್ದರು. ಆದರೆ, ಪಕ್ಷದ ರಾಜ್ಯ ಪ್ರಧಾನ ಕಚೇರಿ ಸತ್ಯಮೂರ್ತಿ ಭವನದಲ್ಲಿ ನಡೆದ ಸಮಾರಂಭಕ್ಕೆ 12 ಪ್ರತಿನಿಧಿಗಳಷ್ಟೇ ಭಾಗವಹಿಸಿದ್ದರು ಎಂದು 'ಎನ್‌ಡಿಟಿವಿ' ವರದಿ ಮಾಡಿದೆ.

ತರೂರ್‌ ಅವರ ಸಭೆಯಲ್ಲಿ ಭಾಗವಹಿಸುವುದುಗಾಂಧಿ ಕುಟುಂಬದ ಅನುಮೋದನೆ ಪಡೆದಿರುವ 'ಅಧಿಕೃತ' ಅಭ್ಯರ್ಥಿಯನ್ನು ವಿರೋಧಿಸಿದಂತಾಗಲಿದೆ ಎಂದುಸಭೆಯಿಂದ ಅಂತರ ಕಾಯ್ದುಕೊಂಡಿರುವುದಾಗಿಪಕ್ಷದ ಮೂಲಗಳು ತಿಳಿಸಿವೆ.

ADVERTISEMENT

ರಾಜಸ್ಥಾನ ಮುಖ್ಯಮಂತ್ರಿಯಾಗಿರುವ ಅಶೋಕ್‌ ಗೆಹಲೋತ್‌ ಅವರು ಅಧ್ಯಕ್ಷೀಯ ಚುನಾವಣೆಗೆ ಮುಂಚೂಣಿಯಲ್ಲಿದ್ದರು. ಆದರೆ, ಮುಂದಿನ ಮುಖ್ಯಮಂತ್ರಿ ಆಯ್ಕೆ ವಿಚಾರವಾಗಿ ರಾಜ್ಯ ಕಾಂಗ್ರೆಸ್‌ನಲ್ಲಿ ಬಿಕ್ಕಟ್ಟು ಎದುರಾದ ಕಾರಣ, ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಕೊನೇ ಕ್ಷಣದಲ್ಲಿ ಅಖಾಡಕ್ಕಿಳಿದಿದ್ದಾರೆ.

ಸಭೆಗೆ ಹೆಚ್ಚಿನವರು ಭಾಗಿಯಾಗದ ಬಗ್ಗೆ ಬೇಸರ ವ್ಯಕ್ತಪಡಿಸಿರುವ ತರೂರ್‌, 'ನನ್ನ ಸಭೆಗೆ ಹಾಜರಾಗಲು ಅವರು (ಪ್ರತಿನಿಧಿಗಳು) ಹೆದರಿದ್ದರೆ, ಅದು ಅವರಿಗೇ ನಷ್ಟ. ನಾವು ರಚನಾತ್ಮಕ ಮಾತುಕತೆ ನಡೆಸಬಹುದಿತ್ತು. ಯಾವುದೇ ಅಧಿಕೃತ ಅಭ್ಯರ್ಥಿ ಇಲ್ಲ ಎಂದು ಗಾಂಧಿ ಕುಟುಂಬದವರು ಸ್ಪಷ್ಟವಾಗಿ ಹೇಳಿದ್ದಾರೆ. ಖರ್ಗೆ ಅಧಿಕೃತ ಅಭ್ಯರ್ಥಿ ಎಂಬ ಮಿಥ್ಯೆಯನ್ನು ನಾವು ಹೋಗಲಾಡಿಸುತ್ತೇವೆ' ಎಂದು ಹೇಳಿದ್ದಾರೆ.

ತರೂರ್‌ ಅವರುಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ ಬಳಿಕ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.

ಅಕ್ಟೋಬರ್‌ 17ರಂದು ಚುನಾವಣೆ ನಡೆಯಲಿದ್ದು, 19ರಂದು ಫಲಿತಾಂಶ ಹೊರಬೀಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.