ADVERTISEMENT

ಸಜ್ಜನ್ ಕುಮಾರ್‌ ವಿರುದ್ಧದ ಪ್ರಕರಣ: ಫೆ.25ರಂದು ಶಿಕ್ಷೆ ಪ್ರಮಾಣ ಪ್ರಕಟ

ಪಿಟಿಐ
Published 21 ಫೆಬ್ರುವರಿ 2025, 7:43 IST
Last Updated 21 ಫೆಬ್ರುವರಿ 2025, 7:43 IST
<div class="paragraphs"><p> ಸಜ್ಜನ್ ಕುಮಾರ್</p></div>

ಸಜ್ಜನ್ ಕುಮಾರ್

   

ನವದೆಹಲಿ: 1984ರ ಸಿಖ್‌ ವಿರೋಧಿ ದಂಗೆಗೆ ಸಂಬಂಧಿಸಿದ ಕೊಲೆ ಪ್ರಕರಣವೊಂದರ ಅಪರಾಧಿ, ಕಾಂಗ್ರೆಸ್‌ನ ಮಾಜಿ ಸಂಸದ ಸಜ್ಜನ್ ಕುಮಾರ್‌ಗೆ ವಿಧಿಸಲಾಗುವ ಶಿಕ್ಷೆಯ ಪ್ರಮಾಣದ ಕುರಿತ ತೀರ್ಪನ್ನು ದೆಹಲಿ ಹೈಕೋರ್ಟ್‌ ಫೆ.25ಕ್ಕೆ ಕಾಯ್ದಿರಿಸಿದೆ.

ವಿಶೇಷ ನ್ಯಾಯಾಧೀಶರಾದ ಕಾವೇರಿ ಬವೇಜಾ ಅವರ ಮುಂದೆ ಹಾಜರಾಗಿದ್ದ ದೂರುದಾರರು, ‘ಸಜ್ಜನ್ ಅವರ ಪ್ರಚೋದನೆಯಿಂದಾಗಿ ತಮ್ಮ ಪತಿ ಮತ್ತು ಮಗನ ಹತ್ಯೆಯಾಗಿದೆ. ಅವರಿಗೆ ಮರಣದಂಡನೆ ವಿಧಿಸಬೇಕು’ ಎಂದು ಮನವಿ ಮಾಡಿದರು.

ADVERTISEMENT

ಸಜ್ಜನ್‌ಗೆ ಮರಣದಂಡನೆ ವಿಧಿಸುವಂತೆ ಪ್ರಾಸಿಕ್ಯೂಷನ್‌ ಕೂಡಾ ಮನವಿ ಮಾಡಿತ್ತು. ಈ ಬಗ್ಗೆ  ಎರಡು ದಿನಗಳ ಒಳಗಾಗಿ ಲಿಖಿತ ರೂಪದಲ್ಲಿ ಪ್ರತಿಕ್ರಿಯೆ ನೀಡುವಂತೆ ಸಜ್ಜನ್ ಪರ ವಕೀಲರಿಗೆ ನ್ಯಾಯಾಲಯ ಸೂಚಿಸಿದೆ. ಮುಂದಿನ ವಿಚಾರಣೆಯ ದಿನದಂದು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸುವುದಾಗಿ ನ್ಯಾಯಧೀಶರು ಹೇಳಿದ್ದಾರೆ.

ತಿಹಾರ್‌ ಕಾರಾಗೃಹದಲ್ಲಿರುವ ಸಜ್ಜನ್ ಕುಮಾರ್‌ನನ್ನು ಕೊಲೆ ಪ್ರಕರಣದ ಅಪರಾಧಿ ಎಂದು ಪರಿಗಣಿಸಿ ನ್ಯಾಯಾಲಯವು ಫೆ.12ರಂದು ತೀರ್ಪು ನೀಡಿತ್ತು. ಸಜ್ಜನ್ ಕುಮಾರ್‌ ಮಾನಸಿಕ ಸ್ಥಿತಿಯ ಬಗ್ಗೆ ವರದಿ ನೀಡುವಂತೆ ನ್ಯಾಯಲಯವು ಶುಕ್ರವಾರ ತಿಹಾರ್‌ ಕೇಂದ್ರ ಕಾರಾಗೃಹದ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. ಮರಣದಂಡನೆ ವಿಧಿಸುವ ಸಂದರ್ಭಗಳಲ್ಲಿ ಇಂತಹ ವರದಿಯನ್ನು ಕೇಳಲಾಗುತ್ತದೆ.

ದೆಹಲಿಯ ಪಾಲಂ ಕಾಲೋನಿಯಲ್ಲಿ ನಡೆದಿದ್ದ ಐವರ ಹತ್ಯೆ ಪ್ರಕರಣದಲ್ಲಿ ಸಜ್ಜನ್ ಅವರಿಗೆ ದೆಹಲಿ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿತ್ತು, ಆ ಶಿಕ್ಷೆಯನ್ನು ಪ್ರಶ್ನಿಸಿ ಅವರು ಸಲ್ಲಿಸಿದ್ದ ಮೇಲ್ಮನವಿಯು ಸುಪ್ರೀಕೋರ್ಟ್‌ನಲ್ಲಿ ಬಾಕಿ ಇದೆ.

ಪ್ರಕರಣದ ಹಿನ್ನೆಲೆ: ಸಿಖ್ ವಿರೋಧಿ ದಂಗೆಯ ವೇಳೆ(1984ರ ನವೆಂಬರ್‌ 1ರಂದು) ಸರಸ್ವತಿ ವಿಹಾರ್ ಬಳಿ ಜಸ್ವಂತ್ ಸಿಂಗ್ ಹಾಗೂ ಅವರ ಪುತ್ರ ತರುಣ್‌ದೀಪ್ ಸಿಂಗ್ ಅವರನ್ನು ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಸಜ್ಜನ್‌ ಕುಮಾರ್ ಪ್ರಮುಖ ಆರೋಪಿಯಾಗಿದ್ದರು.

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಹತ್ಯೆಗೆ ಪ್ರತಿಕಾರ ತೀರಿಸಿಕೊಳ್ಳುವುದಕ್ಕಾಗಿ ಮಾರಕಾಸ್ತ್ರಗಳನ್ನು ಹಿಡಿದಿದ್ದ ಜನರ ಗುಂಪು, ಸಿಖ್‌ ಸಮುದಾಯದವರಿಗೆ ಸೇರಿದ ಸ್ಥಳಗಳಲ್ಲಿ ಭಾರಿ ಲೂಟಿ ನಡೆಸಿತ್ತು. ಗಲಭೆ ಸೃಷ್ಟಿಸಿ, ಅಪಾರ ಹಾನಿಗೆ ಕಾರಣವಾಗಿತ್ತು. ಆಗ ಮನೆಗೆ ನುಗ್ಗಿದ ಉದ್ರಿಕ್ತರು, ಪತಿ ಹಾಗೂ ಮಗನನ್ನು ಹತ್ಯೆ ಮಾಡಿದ್ದರು. ಬಳಿಕ ಲೂಟಿ ಮಾಡಿ, ಮನೆಗೆ ಬೆಂಕಿ ಹಚ್ಚಿದ್ದರು ಎಂದು ಜಸ್ವಂತ್ ಪತ್ನಿ ಸಾಕ್ಷಿ ನುಡಿದಿರುವುದಾಗಿ ಪ್ರಾಸಿಕ್ಯೂಷನ್‌ ಆರೋಪಪಟ್ಟಿಯಲ್ಲಿ ಹೇಳಿದ್ದಾರೆ.

ಸಜ್ಜನ್‌ ಕುಮಾರ್‌ ಅವರು ಪ್ರಕರಣದಲ್ಲಿ ಭಾಗಿಯಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಹೇಳಿದ್ದ ನ್ಯಾಯಾಲಯವು, 2021ರ ಡಿಸೆಂಬರ್‌ 16ರಂದು ಸಜ್ಜನ್ ಕುಮಾರ್ ವಿರುದ್ಧ ಆರೋಪ ಹೊರಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.