ADVERTISEMENT

ಶಬರಿಮಲೆ| 2018ರ ತೀರ್ಪು ಅಂತಿಮವಲ್ಲ ಎಂದ ಸುಪ್ರೀಂ ಕೋರ್ಟ್‌

ಎಲ್ಲಾ ವಯೋಮಾನದ ಮಹಿಳೆಯರಿಗೆ ದೇಗುಲ ಪ್ರವೇಶ ವಿವಾದದ ಇತ್ಯರ್ಥ ಹೊಣೆ ವಿಸ್ತೃತ ಪೀಠದ್ದು ಎಂದ ಸಿಜೆಐ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2019, 20:00 IST
Last Updated 5 ಡಿಸೆಂಬರ್ 2019, 20:00 IST
   

ನವದೆಹಲಿ: ಶಬರಿಮಲೆ ದೇವಸ್ಥಾನಕ್ಕೆ ಎಲ್ಲಾ ವಯೋಮಾನದ ಮಹಿಳೆಯರಿಗೆ ಪ್ರವೇಶ ಕಲ್ಪಿಸುವ ವಿಚಾರವನ್ನು ವಿಸ್ತೃತ ಪೀಠಕ್ಕೆ ಒಪ್ಪಿಸಿರುವುದರಿಂದ, ‘2018ರಲ್ಲಿ ನೀಡಿದ್ದ ತೀರ್ಪೇ ಅಂತಿಮ’ ಎಂದು ಪರಿಗಣಿಸಬಾರದು ಎಂದು ಸುಪ್ರೀಂ ಕೋರ್ಟ್‌ ಗುರುವಾರ ಹೇಳಿದೆ.

ಹೋರಾಟಗಾರ್ತಿ ಬಿಂದು ಅಮ್ಮಣಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಮನ್ನಿಸಿದ ಮುಖ್ಯ ನ್ಯಾಯಮೂರ್ತಿ ಎಸ್‌.ಎ. ಬೊಬಡೆ ಅಧ್ಯಕ್ಷತೆಯ ಪೀಠವು, ‘ಎಲ್ಲಾ ವಯೋಮಾನದ ಮಹಿಳೆಯರಿಗೆ ದೇವಸ್ಥಾನದೊಳಗೆ ಪ್ರವೇಶ ನೀಡುವುದಕ್ಕೆ ಸಂಬಂಧಿಸಿದ ತೀರ್ಪು ನೀಡುವ ಹೊಣೆ ಈಗ ವಿಸ್ತೃತ ಪೀಠದ ಮೇಲೆ ಇದೆ’ ಎಂದು ಮೌಖಿಕವಾಗಿ ಹೇಳಿದೆ.

ನ.26ರಂದು ಶಬರಿಮಲೆಗೆ ಪ್ರವೇಶ ಬಯಸಿ ಬಂದಿದ್ದ ಬಿಂದು ಅವರ ಮೇಲೆ ಕಾರ್ಯಕರ್ತರೊಬ್ಬರು ಪೆಪ್ಪರ್‌ ಸ್ಪ್ರೇ ದಾಳಿ ನಡೆಸಿದ್ದರು. ಈ ಘಟನೆ ಬಳಿಕ ಸುಪ್ರೀಂ ಕೋರ್ಟ್‌ ಮೊರೆಹೋದ ಬಿಂದು, ‘ದೇವಸ್ಥಾನದೊಳಗೆ ಹೋಗಲು ವ್ಯವಸ್ಥೆ ಮಾಡುವಂತೆ ಕೇರಳ ಸರ್ಕಾರಕ್ಕೆ ಸೂಚನೆ ನೀಡಬೇಕು’ ಎಂದು ಮನವಿ ಮಾಡಿದ್ದರು.

ADVERTISEMENT

‘2018ರಲ್ಲಿ ಸುಪ್ರೀಂ ಕೋರ್ಟ್‌ ನೀಡಿದ್ದ ತೀರ್ಪಿಗೆ ತಡೆಯಾಜ್ಞೆ ನೀಡಿಲ್ಲ. ಆದ್ದರಿಂದ ಬಿಂದು ಅವರಿಗೆ ಅವಕಾಶ ನಿರಾಕರಿಸಿರುವುದು ತಪ್ಪು’ ಎಂದು ಬಿಂದು ಪರ ವಕೀಲೆ ಇಂದಿರಾ ಜೈಸಿಂಗ್‌ ವಾದಿಸಿದರು. ಬಿಂದು ಅವರ ಅರ್ಜಿಯನ್ನು ಮುಂದಿನ ವಾರ ವಿಚಾರಣೆಗೆ ಎತ್ತಿಕೊಳ್ಳಲು ಸುಪ್ರೀಂ ಕೋರ್ಟ್‌ ಒಪ್ಪಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.