ನವದೆಹಲಿ: 2001ರಲ್ಲಿ ನಡೆದ ಸಂಸತ್ ಮೇಲಿನ ದಾಳಿಯಲ್ಲಿ ಹುತಾತ್ಮರಾದವರಿಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ಇಂದು ಗೌರವ ನಮನ ಸಲ್ಲಿಸಿದ್ದಾರೆ.
22 ವರ್ಷಗಳ ಹಿಂದೆ ಇದೇ ದಿನ ಭಾರಿ ಶಸ್ತ್ರಾಸ್ತ್ರಗಳೊಂದಿಗೆ ಸಂಸತ್ ಆವರಣದೊಳಗೆ ನುಗ್ಗಿದ್ದ ಐವರು ಉಗ್ರರು 9 ಮಂದಿಯನ್ನು ಹತ್ಯೆಗೈದಿದ್ದರು. ಸಂಸತ್ತಿನ ಮುಖ್ಯ ಕಟ್ಟಡದೊಳಗೆ ನುಸುಳುವ ಮುನ್ನ ಅವರನ್ನು ಹೊಡೆದುರುಳಿಸಲಾಗಿತ್ತು.
ದೆಹಲಿ ಪೊಲೀಸ್ ಇಲಾಖೆಯ ಐವರು, ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್ಪಿಎಫ್) ಕಾನ್ಸ್ಟೆಬಲ್, ಸಂಸತ್ತಿನ ಇಬ್ಬರು ಕಾವಲುಗಾರರು ಹಾಗೂ ಉದ್ಯಾನವನದ ಕೆಲಸಗಾರ ಪ್ರಾಣ ಕಳೆದುಕೊಂಡಿದ್ದರು.
ಉಪರಾಷ್ಟ್ರಪತಿ ಜಗದೀಪ್ ಧನಕರ್, ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಜಮ್ಮು ಮತ್ತು ಕಾಶ್ಮೀರ ಲೆಫ್ಟಿನಂಟ್ ಗವರ್ನರ್ ಮನೋಜ್ ಸಿನ್ಹಾ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಅವರು ಪುಷ್ಪನಮನ ಸಲ್ಲಿಸಿದ್ದಾರೆ.
'ಸಂಸತ್ ಮೇಲಿನ ದಾಳಿ ವೇಳೆ ಹುತಾತ್ಮರಾದ ವೀರ ಯೋಧರಿಗೆ ಹೃತ್ಪೂರ್ವಕ ಗೌರವ ನಮನ ಸಲ್ಲಿಸಿದೆವು. ಅಪಾಯದ ಸಂದರ್ಭದಲ್ಲಿ ಅವರು ತೋರಿದ ಧೈರ್ಯ ಮತ್ತು ತ್ಯಾಗವು ರಾಷ್ಟ್ರದ ಸ್ಮರಣೆಯಲ್ಲಿ ಅಚ್ಚಳಿಯದೆ ಉಳಿಯಲಿದೆ' ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಮನೋಜ್ ಸಿನ್ಹಾ ಅವರು ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ, 'ಹುತಾತ್ಮ ಯೋಧರಿಗೆ ವಂದನೆ. ಅವರು ತೋರಿದ ಧೈರ್ಯ, ಶೌರ್ಯ ಮತ್ತು ಅತ್ಯುನ್ನತ ತ್ಯಾಗಕ್ಕೆ ರಾಷ್ಟ್ರವು ಸದಾ ಋಣಿಯಾಗಿರಲಿದೆ' ಎಂದು ಬರೆದುಕೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.