ADVERTISEMENT

ಕೋವಿಡ್-19: ಇರಾನ್‌ನಲ್ಲಿ ಸಿಲುಕಿದ್ದ 234 ನಾಗರಿಕರು ಭಾರತಕ್ಕೆ ಸ್ಥಳಾಂತರ

ಏಜೆನ್ಸೀಸ್
Published 15 ಮಾರ್ಚ್ 2020, 6:52 IST
Last Updated 15 ಮಾರ್ಚ್ 2020, 6:52 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದಿನದಿಂದ ದಿನಕ್ಕೆ ವಿಶ್ವದಾದ್ಯಂತ ವ್ಯಾಪಿಸುತ್ತಿರುವ ಕೋವಿಡ್-19 ಭೀತಿ ಸೃಷ್ಟಿಸಿದ್ದು, ಕೊರೊನಾ ವೈರಸ್ ಪೀಡಿತ ಇರಾನ್‌ನಲ್ಲಿ ಸಿಲುಕಿದ್ದ ವಿದ್ಯಾರ್ಥಿಗಳು ಮತ್ತು ಯಾತ್ರಾರ್ಥಿಗಳು ಸೇರಿದಂತೆ 200ಕ್ಕೂ ಅಧಿಕ ಭಾರತೀಯರು ಭಾನುವಾರ ಮುಂಜಾನೆ ಸ್ವದೇಶಕ್ಕೆ ಮರಳಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ತಿಳಿಸಿದ್ದಾರೆ.

ಇರಾನಿನ ಮಹನ್ ಏರ್ ಫ್ಲೈಟ್‌ನಲ್ಲಿ ತನ್ನ ಪ್ರಜೆಗಳನ್ನು ಸ್ಥಳಾಂತರಿಸಲು ಭಾರತಕ್ಕೆ ಸಹಾಯ ಮಾಡಿದ್ದಕ್ಕಾಗಿ ಎಸ್ ಜೈಶಂಕರ್ ಇರಾನಿನ ಅಧಿಕಾರಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ. ಇದೀಗ ಭಾರತೀಯರು ಮುಂಬೈಗೆ ಬಂದಿಳಿದಿದ್ದಾರೆ.

131 ವಿದ್ಯಾರ್ಥಿಗಳು ಮತ್ತು 103 ಯಾತ್ರಾರ್ಥಿಗಳು ಸೇರಿದಂತೆ ಇರಾನ್‌ನಲ್ಲಿ ಸಿಲುಕಿದ್ದ 234 ಭಾರತೀಯರು ಭಾರತಕ್ಕೆ ಬಂದಿದ್ದಾರೆ. ರಾಯಭಾರಿ ಧಾಮು ಗದ್ದಮ್, ಇರಾನ್ ತಂಡ ಮತ್ತು ಅಧಿಕಾರಿಗಳ ಶ್ರಮಕ್ಕೆ ಧನ್ಯವಾದಗಳು ಎಂದು ಸಚಿವರು ಟ್ವೀಟ್ ಮಾಡಿದ್ದಾರೆ.

ADVERTISEMENT

ಮಧ್ಯ ಪ್ರಾಚ್ಯ ರಾಷ್ಟ್ರಗಳ ಪೈಕಿ ಇರಾನ್‌ ಕೊರೊನಾ ವೈರಸ್‌ ಸೋಂಕಿನ ತೀವ್ರ ಹೊಡೆತಕ್ಕೆ ಸಿಲುಕಿದೆ. ಹಿರಿಯ ಅಧಿಕಾರಿಗಳು ಸೇರಿದಂತೆ 12,729 ಜನರಿಗೆ ಕೊರೊನಾವೈರಸ್ ಸೋಂಕು ತಗುಲಿದೆ. ಕೋವಿಡ್-19ಗೆ 97 ಜನರು ಏಕಾಏಕಿ ಮೃತಪಟ್ಟಿದ್ದು, ದೇಶದಲ್ಲಿ ಒಟ್ಟಾರೆ ಮೃತಪಟ್ಟಿರುವ ಸಂಖ್ಯೆ 611ಕ್ಕೆ ಏರಿದೆ.

ಕಳೆದ ಕೆಲವು ದಿನಗಳಲ್ಲಿ ಭಾರತವು ಹಲವಾರು ಪ್ರಜೆಗಳನ್ನು ಇರಾನ್‌ನಿಂದ ಸ್ಥಳಾಂತರಿಸಿದೆ.ಮೊದಲ ಹಂತವಾಗಿ ಭಾರತೀಯ ವಾಯುಪಡೆಯ ಅತ್ಯಂತ ದೊಡ್ಡ ಮಿಲಿಟರಿ ವಿಮಾನ ಸಿ-17 ಗ್ಲೋಬ್‌ಮಾಸ್ಟರ್ ಮೂಲಕ 58 ಭಾರತೀಯರನ್ನು ಕರೆತರಲಾಯಿತು. ಇದರೊಂದಿಗೆ ಮಂಗಳವಾರ 44 ಜನರನ್ನು ಸ್ಥಳಾಂತರಿಸಲಾಯಿತು.

ಭಾರತ ಮತ್ತು ಇರಾನ್ ಎರಡೂ ದೇಶಗಳು ಪರಸ್ಪರ ಪ್ರಾಂತ್ಯಗಳಲ್ಲಿ ಸಿಲುಕಿರುವ ನಾಗರಿಕರನ್ನು ಸ್ಥಳಾಂತರಿಸುವ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ ಮತ್ತು ಈ ನಿಟ್ಟಿನಲ್ಲಿ ಸಂಪೂರ್ಣ ಸಹಕಾರವನ್ನು ನೀಡುತ್ತಿವೆ.

ಕೊರೊನಾ ವೈರಸ್ ಸೋಂಕು ತಗುಲಿರುವುದನ್ನು ಖಚಿತಪಡಿಸಿಕೊಳ್ಳಲು ಎಲ್ಲ ಭಾರತೀಯರನ್ನು ಪರೀಕ್ಷಿಸಲು ಭಾರತವು ಇರಾನ್‌ನಲ್ಲಿ ಪ್ರಯೋಗಾಲಯವನ್ನು ಸ್ಥಾಪಿಸಲು ಪ್ರಯತ್ನಿಸುತ್ತಿದೆ ಮತ್ತು ವಿಶೇಷ ಮಹನ್ ಏರ್ ವಿಮಾನಗಳಲ್ಲಿದ್ದವರನ್ನು ಪರೀಕ್ಷಿಸಲು ಅವರ ಮಾದರಿಗಳನ್ನು ಬ್ಯಾಚ್‌ಗಳಲ್ಲಿ ಭಾರತಕ್ಕೆ ಕಳುಹಿಸಲಾಗುತ್ತಿದೆ. ಭಾರತದಲ್ಲಿ ಇದುವರೆಗೂ 84 ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.